‘ಜೆಡಿಎಸ್ ಜೊತೆ ಹೊಂದಾಣಿಕೆ’ ಬಿಜೆಪಿ ಪಕ್ಷದ ದುರ್ಬಲತೆಗೆ ಸಾಕ್ಷಿ: ಡಿ.ಕೆ. ಶಿವಕುಮಾರ್

Update: 2021-12-07 12:31 GMT
ಡಿ.ಕೆ. ಶಿವಕುಮಾರ್

ಬೆಂಗಳೂರು, ಡಿ.7: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವುದು ಆಡಳಿತರೂಢ ಬಿಜೆಪಿ ಪಕ್ಷ ಅದೆಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿರುವುದು ಬಿಜೆಪಿಗೆ ಅದೆಂಥ ದುಸ್ಥಿತಿ ಬಂದಿದೆ ಎಂಬುದನ್ನು ಸಾರುತ್ತಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವೇ ಆಳ್ವಿಕೆಯಲ್ಲಿದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ. ಜೆಡಿಎಸ್ ಮೇಲೆ ಅವಲಂಬಿತವಾಗಲು ಮುಂದಾಗಿದೆ. ಶಿವಮೊಗ್ಗ ಸೇರಿದಂತೆ ಹಲವೆಡೆ ಅವರ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ ಬೇರೆ ಬೇಕಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ನಾವು ಬಿಡಿ, ಮೊದಲಿಂದಲೂ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಜೆಡಿಎಸ್ ಜತೆ ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದದು, ವಿರೋಧ ಮಾಡಿದ್ದದು ನಿಜ. ನಾವು, ಅವರು ಗೆದ್ದಿರಬಹುದು, ಸೋತಿರಬಹುದು, ಫೈಟ್ ಮಾಡಿರಬಹುದು ಅದೆಲ್ಲ ನಿಜ. ಈಗಲೂ ಬೆಂಗಳೂರು ಗ್ರಾಮಾಂತರ ಸೇರಿ ಕೆಲವೆಡೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ರಾಷ್ಟ್ರೀಯ ಪಕ್ಷ ಬಿಜೆಪಿಗೆ ಇಂತಹ ಸ್ಥಿತಿ ಬರಬಾರದಿತ್ತು. ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದರು. ಜೆಡಿಎಸ್‌ನವರೂ ತಿರುಗಿಸಿ ಹೇಳಿದ್ದರು. ಆರೆಸ್ಸೆಸ್ ಮುಖಂಡರು ಏನು ಹೇಳಿದ್ದರು. ರಾಜ್ಯ ಬಿಜೆಪಿ ಮುಖಂಡರು ಏನು ಟೀಕೆ ಮಾಡಿದ್ದರು. ಇದೇ ಯಡಿಯೂರಪ್ಪ ಹಿಂದೆ ಏನು ಹೇಳಿದ್ದರು. ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡಿದರೆ ಒಂದು ಸಂದೇಶ ರವಾನೆ ಆಗುತ್ತಿದೆ. ಬಿಜೆಪಿ ದುರ್ಬಲವಾಗಿದೆ ಅಂತಾ ಎಂದು ಶಿವಕುಮಾರ್ ತಿಳಿಸಿದರು.

ಮುಂದಿನ ಚುನಾವಣೆಗಳಿಗೂ ಇದು ದಿಕ್ಸೂಚಿಯೇ? ಬಿಜೆಪಿ, ಜೆಡಿಎಸ್ ಇದೇ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸಂಕೇತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಮಾತಾಡುತ್ತಿಲ್ಲ. ಬಿಜೆಪಿ ಉಳಿದ ಮುಖಂಡರು ಮಾತಾಡುತ್ತಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಹೇಳಿದರು ಅಂತಾ ನಮ್ಮ ಜಿಲ್ಲೆಯಲ್ಲಂತೂ ಬಿಜೆಪಿಯವರು ಜೆಡಿಎಸ್‌ಗೆ ಮತ ಹಾಕಲ್ಲ. ಅವರ ಮತ ಅವರು ಹಾಕಿಕೊಳ್ಳುತ್ತಾರೆ. ಮಂಡ್ಯದಲ್ಲೂ ಅಷ್ಟೇ. ಯಡಿಯೂರಪ್ಪ ಬೂಕನಕೆರೆಗೆ ಹೋಗಿ ಹೇಳಲಿ ನೋಡೋಣ. ಬಿಜೆಪಿಯವರು ಜೆಡಿಎಸ್‌ಗೆ ಮತ ಹಾಕಿ ಅಂತಾ. ಮೈಸೂರಲ್ಲೂ ಹೇಳೋಕೆ ಆಗಲ್ಲ. ಎಲ್ಲೋ ಅಭ್ಯರ್ಥಿ ಇಲ್ಲದ ಕಡೆ ಹೇಳಬಹುದು. ಆದರೆ ಬಿಜೆಪಿ ಪಕ್ಷದವರು ಪ್ರತಿಷ್ಠೆ ಪಕ್ಕಕ್ಕಿಟ್ಟು ಇವರ ಮಾತು ಕೇಳಲ್ಲ ಎಂದು ಅವರು ತಿಳಿಸಿದರು.

ಕೋಲಾರದಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷದ ಅಭ್ಯರ್ಥಿಗಳು ಮನೆ, ಮನೆಗೂ ಮತ ಕೇಳಿಕೊಂಡು ತಿರುಗುತ್ತಿದ್ದಾರೆ. ಹಾಗಾದರೆ ಯಡಿಯೂರಪ್ಪ ಮಾತಿಗೆಲ್ಲಿದೆ ಬೆಲೆ. ಬಿಜೆಪಿಗೆ ಬಿಟ್ಟುಕೊಟ್ಟರೆ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತದೆ. ಚಿಕ್ಕಬಳ್ಳಾಪುರದಲ್ಲಿ ಮತಗಳನ್ನು ವರ್ಗಾಯಿಸಿದರೆ ವಿಧಾನಸಭೆಯಲ್ಲಿ ಮರ್ಯಾದೆ ಹೋಗುತ್ತದೆ. ಅಲ್ಲಿ ಆಂತರಿಕ ಪ್ರತಿಷ್ಠೆ ವಿಚಾರಗಳು ಬೇಕಾದಷ್ಟಿವೆ ಎಂದು ಶಿವಕುಮಾರ್ ಹೇಳಿದರು.

ಜಾತ್ಯತೀತ ಶಕ್ತಿಗಳು ಒಂದಾಗಬೇಕು ಅಂತ ಹೇಳುತ್ತಿರುತ್ತೀರಿ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾಸನ, ಮಂಡ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಅಂತಾ ನಾನೇ ಜೆಡಿಎಸ್‌ಗೆ ಹೇಳಿದ್ದೆ. ಅವತ್ತು ನಮ್ಮ ಪಕ್ಷದಿಂದ ಹೋದ ನಾಯಕರು ವಾಪಸ್ ಬಂದೇ ಇಲ್ಲ. ಹಿಂಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News