ಸಂಗೀತಗಾರನ ಪುತ್ರಿ ವಿವಾಹಕ್ಕೆ ನಿಧಿ ಸಂಗ್ರಹಕ್ಕೆ ಗ್ರಾಮಸ್ಥರಿಂದ ನಾಟಕ ಪ್ರದರ್ಶನ

Update: 2021-12-08 03:08 GMT

ಕೊಪ್ಪಳ: ನಾಟಕಗಳಿಗೆ ಹಾರ್ಮೋನಿಯಂ ಮಾಸ್ಟರ್ ಆಗಿ, ನಾಟಕಗಳ ನಿರ್ದೇಶಕರಾಗಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಶಿವರಾಜ್ ಎಚ್.ಹೂಗಾರ್ ಅವರ ಪುತ್ರಿಯ ವಿವಾಹಕ್ಕೆ ನಿಧಿ ಸಂಗ್ರಹಿಸುವ ಸಲುವಾಗಿ ಗ್ರಾಮಸ್ಥರೇ ನಾಟಕ ಪ್ರದರ್ಶನ ಏರ್ಪಡಿಸಿ ಮಾನವೀಯ ನೆರವು ನೀಡಿ ಆದರ್ಶ ಮೆರೆದಿದ್ದಾರೆ.

ಮೂಲತಃ ಕೊಪ್ಪಳ ತಾಲೂಕಿನ ವಡಗನಾಳ ಗ್ರಾಮದವರಾದ ಶಿವರಾಜ್ ಹೂಗಾರ್ ಸುಮಾರು 25 ವರ್ಷಗಳಿಂದ ಈ ಭಾಗದಲ್ಲಿ ನಾಟಕಗಳನ್ನು ಆಡುತ್ತಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ನಾಟಕಗಳು ನಡೆಯದೇ ಪುತ್ರಿಯ ವಿವಾಹ ನೆರವೇರಿಸಲು ತೀವ್ರ ಹಣಕಾಸು ಮುಗ್ಗಟ್ಟು ಉಂಟಾಗಿತ್ತು.

ಅವರ ಸಂಕಷ್ಟವನ್ನು ನೋಡಿದ ಗ್ರಾಮಸ್ಥರು ತಮ್ಮದೇ ಸ್ವಂತ ಖರ್ಚಿನಲ್ಲಿ ನಾಟಕವನ್ನು ಆಯೋಜಿಸಿದರು. ನಾಟಕಕ್ಕೆ ಉಚಿತ ಪ್ರವೇಶ ನೀಡಿದರೂ, ತಮ್ಮ ತಮ್ಮ ಹಣಕಾಸು ಸ್ಥಿತಿಗೆ ಅನುಸಾರವಾಗಿ ದೇಣಿಗೆ ನೀಡುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದರು. ಉದ್ಯಮಿಗಳು, ರಾಜಕಾರಣಿಗಳು ಮತ್ತು ಇತರ ಸೆಲೆಬ್ರಿಟಿಗಳನ್ನು ನಾಟಕ ವೀಕ್ಷಣೆಗೆ ಆಹ್ವಾನಿಸಿದರು. ಇದರಿಂದ ಬಂದ ಹಣದಿಂದ ಕಲಾವಿದನ ಪುತ್ರಿಯ ವಿವಾಹ ನೆರವೇರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಮಂಗಳವಾರ ರಾತ್ರಿ 10.30ಕ್ಕೆ ಬಸವಕುಮಾರ್ ಎಸ್.ಸವದತ್ತಿ ವಿರಚಿತ ’ಮೈದುನ ತಂದ ಮಾಂಗಲ್ಯ’ ನಾಟಕವನ್ನು ಪ್ರದರ್ಶಿಸಲಾಯಿತು.

"ಕಳೆದ ಎರಡು ವರ್ಷಗಳಿಂದಿಡೀ ರಾಜ್ಯ ಅನಿಶ್ಚಿತತೆಯನ್ನು ಎದುರಿಸುತ್ತಿದ್ದು, ಲಾಕ್‌ಡೌನ್‌ನ ಸಂಭವವನ್ನು ಅಂದಾಜಿಸಲಾಗದು. ಆದ್ದರಿಂದ ಮಗಳ ವಿವಾಹಕ್ಕೆ ಹಣ ಒದಗಿಸಲು ಈ ಕಾರ್ಯಕ್ರಮ ಆಯೋಜಿಸಿದೆವು. ನಾಟಕದ ಜತೆಗೆ ಅವರು ದೇವಸ್ಥಾನಗಳಲ್ಲಿ ಭಕ್ತಿಗೀತೆಗಳನ್ನೂ ಹಾಡುತ್ತಿದ್ದರು. ಕೊಪ್ಪಳ, ಗದಗ, ಬಳ್ಳಾರಿ ಮತ್ತು ಇತರ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಿಗೆ ಅವರಿಗೆ ಕರೆ ಬರುತ್ತಿತ್ತು. ಅವರು ನಮ್ಮ ಗ್ರಾಮದ ಹೆಮ್ಮೆ" ಎಂದು ಪಂಚಾಯ್ತಿ ಸದಸ್ಯ ಆರ್.ಜಿ.ತೊಮ್ಮನ ಗೌಡ ಹೇಳಿದರು.

ಇದನ್ನು ಪ್ರಚಾರ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್ ಅಭಿಯಾನವನ್ನೂ ಕೈಗೊಂಡಿದ್ದೆವು ಎಂದು ಮತ್ತೊಬ್ಬ ಸಂಘಟಕ ದೇವೇಂದ್ರಗೌಡ ಜಿರಲಿ ವಿವರಿಸಿದರು. ನಾಟಕದಲ್ಲಿ ಪಾತ್ರ ನಿರ್ವಹಿಸಿದ 12 ಯುವಕರು ತಲಾ 3 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. 11 ಲಕ್ಷ ರೂಪಾಯಿ ಅಗತ್ಯತೆಯನ್ನು ಈಡೇರಿಸಲು ಉದಾರವಾಗಿ ದಾನ ಮಾಡಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News