ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯದಿದ್ದರೆ ದಿಲ್ಲಿ ಮಾದರಿ ಹೋರಾಟ: ರಾಜ್ಯ ಸರಕಾರಕ್ಕೆ`ರೈತ ಅಧಿವೇಶನ' ಎಚ್ಚರಿಕೆ

Update: 2021-12-12 13:29 GMT

ಬೆಳಗಾವಿ, ಡಿ. 12: `ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ, ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಕೃಷಿಯು ಲಾಭದಾಯಕ ಆಗುವಂತೆ ಸಹಕಾರಿ ಬೇಸಾಯಕ್ಕೆ ಪ್ರೋತ್ಸಾಹ ನೀಡಬೇಕೆಂಬುದು ಸೇರಿದಂತೆ ಕೃಷಿ, ಹೈನುಗಾರಿಕೆ ಹಾಗೂ ನೀರಾವರಿಗೆ ಆದ್ಯತೆ ನೀಡಲು ಸರಕಾರ ಆಸ್ಥೆ ವಹಿಸಬೇಕು ಎಂದು ಆಗ್ರಹಿಸಿ `ಸಂಯುಕ್ತ ಹೋರಾಟ-ಕರ್ನಾಟಕ' ನೇತೃತ್ವದಲ್ಲಿ ಏರ್ಪಡಿಸಿದ್ದ `ರೈತ ಅಧಿವೇಶನ' ನಡೆಸಲಾಯಿತು.

ರವಿವಾರ ಇಲ್ಲಿನ ಗೋಕಾಕ ರಸ್ತೆಯ ಸಂಕಲ್ಪ ಗಾರ್ಡನ್‍ನಲ್ಲಿ ಆಯೋಜಿಸಿದ್ದ ರೈತ ಅಧಿವೇಶನದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಸಂಯುಕ್ತ ಕಿಸಾನ್ ಮೋರ್ಚಾದ ಅಶೋಕ್ ಧವಳೆ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ಮುಖಂಡರಾದ ಸಿದ್ದಗೌಡ ಮೋದಗಿ, ಚಾಮರಸ ಮಾಲಿಪಾಟೀಲ್, ಶಾರದಾ ಗೋಪಾಲ್, ದೇವಿ, ಪ್ರಕಾಶ ಕಮ್ಮರಡಿ, ಬಿ.ಎ.ಸೊಪ್ಪಿನ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಮಾವಳ್ಳಿ ಶಂಕರ್, ಬಯ್ಯಾರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಕೃಷಿ ಕಾಯ್ದೆಗಳ ತಿದ್ದುಪಡಿಗೆ ಆಗ್ರಹಿಸಿ ಪರ್ಯಾಯ ಕೃಷಿ ಧೋರಣೆಗಾಗಿ ಹಾಗೂ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ರೈತ ಅಧಿವೇಶನ ಏರ್ಪಡಿಸಿದ್ದು, ಸಮಾವೇಶನದಲ್ಲಿ ಪಾಲ್ಗೊಂಡಿದ್ದ ರೈತರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರಿಗೆ ಬೆಳಗಾವಿ `ಕುಂದಾ' ಹಂಚಲಾಯಿತು. ಕೇಂದ್ರ ಸರಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದನ್ನು ಸ್ವಾಗತಿಸಿ ಸಂಭ್ರಮಿಸಲಾಯಿತು.

ದಿಲ್ಲಿ ಮಾದರಿ ಹೋರಾಟದ ಎಚ್ಚರಿಕೆ: `ರಾಜ್ಯ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಈ ಅಧಿವೇಶದಲ್ಲೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಹೊಸದಿಲ್ಲಿ ಗಡಿಗಳಲ್ಲಿ ನಡೆದ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲೂ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು. ಅದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ನಂಬಿಕೆ ಕಳೆದುಕೊಂಡ ಸರಕಾರ: `ಕೇಂದ್ರದ ಬಿಜೆಪಿ ಸರಕಾರವು ರೈತ ಸಮುದಾಯದ ನಂಬಿಕೆಯನ್ನು ಕಳೆದುಕೊಂಡಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ನಿಟ್ಟಿನಲ್ಲಿ ದಿಲ್ಲಿ ಗಡಿಗಳಲ್ಲಿ ಸೇರಿದಂತೆ ಹಲವೆಡೆ ನಡೆದ ಹೋರಾಟಕ್ಕೆ ಮಾಧ್ಯಮಗಳು ನಿರೀಕ್ಷಿತ ಬೆಂಬಲ ನೀಡಲಿಲ್ಲ. ಆದರೂ, ರೈತರು ಹೋರಾಡಿ ಗೆದ್ದಿದ್ದಾರೆ' ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ಬದುಕಿನ ಬಗ್ಗೆ ಮಾತನಾಡಿದರೆ, ಸರಕಾರಕ್ಕೆ ಅದು ಆದ್ಯತೆಯ ವಿಷಯವಲ್ಲ. ಅಧಿವೇಶನದಲ್ಲಿ `ಮತಾಂತರ ನಿಷೇಧ ಕಾಯ್ದೆ' ಮಂಡಿಸಲು ಮುಂದಾಗಿದೆ. ಭಾವನಾವಾದಿಗಳನ್ನು ಮೆಚ್ಚಿಸಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಅವರು ಆದ್ಯತೆ  ನೀಡಿದ್ದಾರೆ. ರೈತ ವಿರೋಧಿ ಹಾಗೂ ಕರಾಳ ಕೃಷಿ ಕಾನೂನುಗಳನ್ನು ಈ ಅಧಿವೇಶನದಲ್ಲೇ ವಾಪಸ್ ಪಡೆಯಬೇಕು' ಎಂದು ಅಲ್ಲಮ ಪ್ರಭು ಬೆಟ್ಟದೂರು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, `ಸಂಘರ್ಷ ಮಾಡುವುದರಲ್ಲಿ ನಾವು ಪ್ರವೀಣರು. ಇಡೀ ಸಮಾಜದ ಒಳಿತಿಗಾಗಿ ಬೆಂಕಿ ಹಚ್ಚಿಕೊಳ್ಳುವುದಕ್ಕೂ ಸಿದ್ಧವಿದ್ದೇವೆ. ಮುತ್ತಿಗೆಯನ್ನೂ ಹಾಕುತ್ತೇವೆ. ಇನ್ನೊಂದು ಆಯಾಮದ ಹೋರಾಟವೇ ಈ ರೈತ ಅಧಿವೇಶನ. ಸರ್ವಾಧಿಕಾರ ವರ್ಸಸ್ ಪ್ರಜಾಪ್ರಭುತ್ವ ಹೋರಾಟ ನಡೆಯುತ್ತಿದೆ. ಸರ್ವಾಧಿಕಾರಿಯ ನಡೆಯ ವಿರುದ್ಧ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಪ್ರಜಾಪ್ರಭುತ್ವ ಉಳಿದಿದೆ, ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ನೀಡಿದೆ' ಎಂದು ಹೇಳಿದರು.

ರೈತ ಅಧಿವೇಶನದಲ್ಲಿ ಮಂಡಿಸಿರುವ ಹಕ್ಕೊತ್ತಾಯಗಳ ಬಗ್ಗೆ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು. ನಿಮಗಿಷ್ಟ ಆಗಿದ್ದನ್ನು ಚರ್ಚಿಸುವುದಲ್ಲ. ನಮ್ಮ ಅಧಿವೇಶನದ ನಿರ್ಣಯಗಳನ್ನು ಸ್ಪೀಕರ್, ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಿಗೆ ಸಲ್ಲಿಸಲಾಗುವುದು. ಸರಕಾರದ ನಡೆಯು ನಮ್ಮ ಪೂರಕವಾಗಿ ಇಲ್ಲವಾದರೆ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದರು.

ಹಕ್ಕೊತ್ತಾಯಗಳು: ರೈತ ವಿರೋಧಿಯಾದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದಾಗಬೇಕು. ರೈತರ ಭೂಮಿಯನ್ನು ಕಿತ್ತು ಕಾಪೆರ್Çರೇಟ್ ಕಂಪೆನಿಗಳಿಗೆ ನೀಡುವುದನ್ನು ಬಿಟ್ಟು ಕೃಷಿ ಲಾಭದಾಯಕ ಆಗುವಂತೆ ಮಾಡಬೇಕು. ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು. ಹೈನುಗಾರಿಕೆಗೆ ಕೊಡಲಿ ಪೆಟ್ಟು ನೀಡಿರುವ ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳನ್ನು ರದ್ದುಪಡಿಸಬೇಕು.

ಜೊತೆಗೆ ಕೋಳಿ-ಕುರಿ ಸಾಕಣೆ, ರೇಶ್ಮೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ವಿದ್ಯುತ್ ಮಸೂದೆ 2020/2021 ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ನೀತಿ ಕೈಬಿಡಬೇಕು. ರೈತರ ಪಂಪ್‍ಸೆಟ್‍ಗಳಿಗೆ ಹಾಗೂ ಸಾರ್ವಜನಿಕರ ಗೃಹ ಬಳಕೆಗೆ ಸ್ಮಾರ್ಟ್ ಮೀಟರ್ ಜೋಡಿಸುವ ದುಸ್ಸಾಹಸವನ್ನು ನಿಲ್ಲಿಸಬೇಕು. ಎಲ್ಲ ಪ್ರಮುಖ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು. ರೈತರಿಗೆ ಆದಾಯ ಖಾತರಿಗೊಳಿಸುವ ಕಾಯ್ದೆ ಜಾರಿಗೆ ತರಬೇಕು. ಭೂಮಿ-ವಸತಿ ವಂಚಿತ ಬಡವರಿಗೆ ಜಮೀನು, ಮನೆ, ನಿವೇಶನ ಒದಗಿಸಬೇಕು. ಬಗರ್‍ಹುಕುಂ ಭೂಮಿ ಹಾಗೂ ಮನೆಗಳನ್ನು ಸಕ್ರಮಗೊಳಿಸಿ, ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು. ಯಾವುದೇ ಕಾರಣಕ್ಕೂ ಬಡ ಜನರನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒಕ್ಕಲೆಬ್ಬಿಸಬಾರದು. ಅರಣ್ಯ ಹಕ್ಕು ಕಾಯ್ದೆ-2006ನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ಅರಣ್ಯವಾಸಿಗಳ ಕೃಷಿ ಭೂಮಿ ಹಾಗೂ ಮನೆ ಜಾಗಗಳನ್ನು ಸಕ್ರಮಗೊಳಿಸಲು ಅನುಕೂಲವಾಗುವಂತೆ ಮಾಡಬೇಕು. ಮಹದಾಯಿ, ಕಳಸಾ-ಬಂಡೂರಿ ವಿವಾದವನ್ನು ಶೀಘ್ರವಾಗಿ ಪರಿಹರಿಸಿ ಯೋಜನೆಗಳನ್ನು ತ್ವರಿತ ಅನುಷ್ಠಾನಕ್ಕೆ ತರಬೇಕು. ವಿಶೇಷ ಸಂದರ್ಭಗಳಲ್ಲಿ ಸಾಲಮನ್ನಾ ಮಾಡುವಂತಹ ಋಣಮುಕ್ತ ಕಾಯ್ದೆಯನ್ನು ಸರಕಾರ ಜಾರಿಗೆ ತರಬೇಕು. ಅಕಾಲಿಕ ಮಳೆಯಿಂದ ನಷ್ಟಕ್ಕೆ ಒಳಗಾದ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ.ಹಾಗೂ ತೋಟಗಾರಿಕೆಗೆ ಎಕರೆಗೆ 1ಲಕ್ಷ  ರೂ.ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ಕೊಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅವೈಜ್ಞಾನಿಕ ಮಾನದಂಡಗಳನ್ನು ಪರಿಷ್ಕರಿಸಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. ಎಲ್ಲ ರೀತಿಯ ಗುತ್ತಿಗೆ ಅಥವಾ ಹೊರಗುತ್ತಿಗೆ ಉದ್ಯೋಗ ಪದ್ಧತಿಯನ್ನು ಕೊನೆಗೊಳಿಸಬೇಕು. ಶೋಷಿತ-ಹಿಂದುಳಿದ ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾದ ಎನ್‍ಇಪಿ ಹಿಂಪಡೆಯಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಯಿತು.

`ರೈತರು ಎಂದರೆ ಗಂಡಸರು ಎಂಬಂತೆ ಆಗಿದೆ. ಆದರೆ, ಕೃಷಿ ಎಂದರೆ ಅದು ರೈತ ಮಹಿಳೆಯರಿದ್ದರೆ ಮಾತ್ರ ಸಾಧ್ಯ. ಏನೇ ಕೃಷಿ ಸಮಸ್ಯೆಯಾದರೆ ಮೊದಲು ಬಲಿಯಾಗುವುದು ಮಹಿಳೆಯರು. ಹೀಗಾಗಿ ಭೂಮಿ ಪಹಣಿ ಹಾಗೂ ಭೂ ಒಡೆತನ ಪತ್ರಗಳಲ್ಲಿ ರೈತ ಮಹಿಳೆ ಎಂದು ನಮೂದಾಗಬೇಕು. ಜೊತೆಗೆ ರೈತ ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬರಬೇಕು'

-ಶಾರದಾ ಗೋಪಾಲ್ ರೈತ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News