ಗ್ರಾಹಕರು ವಂಚನೆಗೆ ತುತ್ತಾಗದಂತೆ ಗಮನಹರಿಸಿ: ಕೊಡಗು ಜಿಲ್ಲಾಧಿಕಾರಿ ಸಲಹೆ

Update: 2021-12-25 11:31 GMT

ಮಡಿಕೇರಿ: ಗ್ರಾಹಕರು ತಾವು ಪಡೆಯುವ ಸೇವೆಯಿಂದ ಅನ್ಯಾಯವಾದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ಚಾಚು ತಪ್ಪದೇ ಪಾಲಿಸುವುದರಿಂದ ಗ್ರಾಹಕರ ಮೇಲಿನ  ದೌರ್ಜನ್ಯ ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಅಭಿಪ್ರಾಯಪಟ್ಟಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗ್ರಾಹಕರಿಗೆ ಸೇವೆ ಒದಗಿಸುವ ಮೂಲದಿಂದ ಯಾವ ಯಾವ ರೀತಿ ಅನ್ಯಾಯಗಳು ನಡೆಯುತ್ತವೆ ಎಂಬುದರ ಬಗ್ಗೆ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಮಾಹಿತಿ ಪಡೆಯಬಹುದಾಗಿದೆ ಎಂದರು. 

ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಹೇಗೆ ಹಕ್ಕುಗಳನ್ನು ಚಲಾಯಿಸಬಹುದು, ಈ ಕಾಯ್ದೆಯಡಿ ಗ್ರಾಹಕರಿಗೆ ಇರುವ ಹಕ್ಕುಗಳು ಯಾವುವು ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಅವರು ಹೇಳಿದರು.

ಪ್ರತಿನಿತ್ಯ ಬಳಸುವ ಉತ್ಪನ್ನಗಳು, ಸರಕು ಸಾಗಾಣಿಕೆಗಳ ಬಗ್ಗೆ ಮೊದಲು ಸಾಮಾನ್ಯ ಮಾಹಿತಿ ಹೊಂದಿರಬೇಕು. ಒಂದು ವಸ್ತು ಅಥವಾ ಉತ್ಪನ್ನವನ್ನು ತಯಾರಿಸುವಾಗ ಅಗತ್ಯವಾಗಿ ಕೆಲವೊಂದು ಮೂಲಾಂಶಗಳನ್ನು ದಾಖಲು ಮಾಡಿರಬೇಕು. ಉತ್ಪನ್ನ ತಯಾರಕನ ವಿಳಾಸ, ಉತ್ಪನ್ನದ ಪ್ರಮಾಣ, ಗುಣಮಟ್ಟ, ಮೂಲದರ ಮತ್ತಿತರ ವಿಷಯಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಅವುಗಳನ್ನು ಪರೀಕ್ಷಿಸಿ ಗ್ರಾಹಕರು ಖರೀದಿಸಬೇಕು ಎಂದು ಹೇಳಿದರು.

ಗೃಹ ಬಳಕೆ ಅಗತ್ಯ ವಸ್ತುಗಳ ಸೇವೆ ನೀಡುವವರು, ನಿಗದಿತ ಸ್ಥಳದಿಂದ ಸುಮಾರು 5 ಕಿ.ಮೀ ಅಂತರದ ಒಳಗಿನ ಗ್ರಾಹಕರಿಗೆ ಉಚಿತ ಸೇವೆ ನೀಡಬೇಕು ಎಂಬ ಮಾಹಿತಿಯನ್ನು ನೀಡಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಾಂಡೇರಿ ಅವರು ಮಾತನಾಡಿ ಪ್ರತಿಯೊಂದು ಹಂತದಲ್ಲಿಯೂ ತಿಳಿದೊ, ತಿಳಿಯದೊ ಗ್ರಾಹಕನು ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಪಡುತಿದ್ದಾನೆ. ಗ್ರಾಹಕನಿಲ್ಲದೇ ಯಾವುದೇ ಕಾರ್ಯ ನಡೆಯುವುದಿಲ್ಲ, ಅಂತಹ ಗ್ರಾಹಕನಿಗೆ ನಡೆಯುವ ದೌರ್ಜನ್ಯ ತಡೆಯುವುದಕ್ಕೆ ಗ್ರಾಹಕ ಆಯೋಗ ರಚಿಸಲಾಗಿದೆ ಎಂದು ತಿಳಿಸಿದರು.       

ಗ್ರಾಹಕನಿಗೆ ಮೋಸ, ವಂಚನೆಯ ಸುಳಿಯಿಂದ ಮುಕ್ತಿ ನೀಡುವುದರ ಸಲುವಾಗಿ ಗ್ರಾಹಕ ನ್ಯಾಯಾಲಯ ಸ್ಥಾಪಿಸಲಾಗಿದೆ.  ಗ್ರಾಹಕ ಸಂರಕ್ಷಣಾ ಕಾಯ್ದೆಗೆ 2019 ರ ತಿದ್ದುಪಡಿಯ ಮೂಲಕ ಗ್ರಾಹಕನ ಅನುಕೂಲಕ್ಕಾಗಿ ಪ್ರಕರಣ ದಾಖಲಿಸುವ ಸಂಬಂಧ ಜಿಲ್ಲಾ ಆಯೋಗದ ಮುಂದೆ 1 ಕೋಟಿ ರೂ. ವರೆಗಿನ ಪ್ರಕರಣ ದಾಖಲಿಸಬಹುದಾಗಿದೆ. ರಾಜ್ಯ ಆಯೋಗದಲ್ಲಿ 5 ಕೋಟಿ ರೂ ವರೆಗೂ ಮತ್ತು ರಾಷ್ಟ್ರೀಯ ಆಯೋಗದ ಮುಂದೆ 10 ಕೋಟಿ ರೂ ವರೆಗೆ ಮೇಲ್ಪಟ್ಟು ಪ್ರಕರಣ ದಾಖಲಿಸುವ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಯಾವುದೇ ಗ್ರಾಹಕನು ಆಯೋಗದಡಿಯಲ್ಲಿ ಪ್ರಕರಣ ದಾಖಲಿಸಿದ 3 ತಿಂಗಳ ಒಳಗೆ ಪ್ರಕರಣ ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಲೋಕ ಅದಾಲತ್ ಮೂಲಕ ಸೂಕ್ತ ಪರಿಹಾರವನ್ನು ಗ್ರಾಹಕನಿಗೆ ಒದಗಿಸಲಾಗುವುದು ಎಂದು ಗ್ರಾಹಕರ ಹಕ್ಕುಗಳು ಮತ್ತು ಆಯೊಗದ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಾಂಡೇರಿ ಅವರು ಬೆಳಕು ಚೆಲ್ಲಿದರು.  

ವಕೀಲರಾದ ನಿರಂಜನ ಅವರು ಮಾತನಾಡಿ ಗ್ರಾಹಕನಾದವನು ತನಗರಿವಿಲ್ಲದೇ ಗ್ರಾಹಕನಾಗಿದ್ದಾನೆ. ಯಾವುದೇ ರೀತಿಯ ಸೇವೆಯನ್ನಾದರು ಗ್ರಾಹಕನಾದವನು ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಬಹಳ ಎಚ್ಚರ ವಹಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳು, ಯುವಕರು ಜಾಗೃತಿ, ಅರಿವು ಮೂಡಿಸುವಂತಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ನಿರ್ಮಲ ಕುಮಾರ್, ರೇಣುಕಾಂಭ, ಪ್ರಾಂಶುಪಾಲರಾದ ಎಂ.ಎನ್.ರವಿ ಶಂಕರ್, ತಹಶೀಲ್ದಾರ್ ಮಹೇಶ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಕುಶಾಲನಗರ ಅಧ್ಯಕ್ಷರಾದ ಎ.ಎ.ಚಂಗಪ್ಪ ಮಾಪನ ಶಾಸ್ತç ಇಲಾಖೆಯ ನಿಂಗರಾಜು ಇತರರು ಇದ್ದರು.

ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಮತ್ತು ವಕೀಲರಾದ ನಿರಂಜನ ಅವರು ಸಂವಾದ ನಡೆಸಿದರು. ಆಹಾರ ಪದಾರ್ಥಗಳ ಕಲಬೆರಕೆ, ಪ್ರಮಾಣ, ಗುಣಮಟ್ಟ ಸೇರಿದಂತೆ ಮೋಸ ಹೋಗದೇ ಇರುವುದಕ್ಕೆ ಮಾಡಬೇಕಾದ ಕರ್ತವ್ಯದ ಬಗ್ಗೆ ಕೇಳಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಅಂತಹ ಅಂಗಡಿ ಮುಗ್ಗಟ್ಟು ಮತ್ತು ವಸ್ತುಗಳ ಸಂಪೂರ್ಣ ಬಳಕೆ ನಿಷೇಧಿಸಿ ಎಂದು ಸಲಹೆ ನೀಡಿದರು.

ಆಹಾರ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಆಹಾರ ಇಲಾಖೆಯ ನಿರೀಕ್ಷಕರಾದ ವೀಣಾ ಪ್ರಾರ್ಥಿಸಿದರು, ಬೀರೇಶ್ ನಿರೂಪಿಸಿ, ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News