ಡಿ.31ರ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2021-12-25 15:24 GMT
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ವಿವಿಧ ಸಂಘಟನೆಗಳು ಡಿ. 31ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಬಂದ್‌ನಿಂದ ಯಾವ ಪ್ರಯೋಜನವೂ ಇಲ್ಲ. ಕೊರೋನದಿಂದ ಸಂಕಷ್ಟದಲ್ಲಿದ್ದ ಕೂಲಿ ಕಾರ್ಮಿಕರು, ಬಡ ವರ್ಗದವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಬಂದ್ ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಶನಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಒಂದು ರಾಜಕೀಯ ಪಕ್ಷ. ಸಾಧಕ ಬಾಧಕ ನೋಡಿ ನಿಷೇಧ ಮಾಡುವ ಕುರಿತು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಕೊರೋನ ಹೊಡೆತದಿಂದ ಜನಸಾಮಾನ್ಯರು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಬಂದ್ ಅವಶ್ಯಕತೆ ಇಲ್ಲ ಎಂದರು.

ಕೆಲವು ಸಮಾಜ ವಿರೋಧಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡಿಗರು, ಮರಾಠರ ಹೆಸರಲ್ಲಿ ಗೊಂದಲ ಸೃಷ್ಟಿಸಿ ಗಲಭೆಗೆ ಕಾರಣರಾಗುತ್ತಿದ್ದಾರೆ. ಇದನ್ನು ಎರಡೂ ರಾಜ್ಯದ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಮರಾಠಿಗರು, ಕನ್ನಡಿಗರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಎಂಇಎಸ್ ಹಾಗೂ ಇತರ ಸಂಘಟನೆ ಹೆಸರಲ್ಲಿ ಬಾಂಧವ್ಯ ಕದಡುವ ಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಒಂದೇ ದೇಶದವರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹಾಗೂ ಶರದ್ ಪವಾರ್ ಜನರ ದಾರಿ ತಪ್ಪಿಸುವ ಹೇಳಿಕೆ ನೀಡಬಾರದು. ಅಧಿಕಾರದಲ್ಲಿರುವವರು ಎಲ್ಲವನ್ನೂ ನಿಭಾಯಿಸಿ ಹತೋಟಿಗೆ ತರಬೇಕು. ಇಂತಹ ವಿಷಯಗಳ ಕುರಿತು ಎರಡೂ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News