ಗ್ರಾಮೀಣ ಭಾಗದ 8-9ನೇ ತರಗತಿಯ ವಿದ್ಯಾರ್ಥಿಗಳಿಗೂ ರೈತ ವಿದ್ಯಾನಿಧಿ ವಿಸ್ತರಣೆ: ಸಿಎಂ ಬೊಮ್ಮಾಯಿ ಭರವಸೆ

Update: 2021-12-25 17:15 GMT

ವಿಜಯಪುರ: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ರೈತರ ವಿದ್ಯಾನಿಧಿಯನ್ನು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡುಬೇಕೆನ್ನುವ ಬಗ್ಗೆ ತೀರ್ಮಾನ ಮಾಡಿದ್ದು, ಈ ಬಗ್ಗೆ ಕೂಡಲೇ ಆದೇಶ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಶನಿವಾರ ವಿಜಯಪುರ ಜಿಲ್ಲೆಯಲ್ಲಿ ಲೋಕೋಪಯೋಗಿ, ಕಂದಾಯ, ವಸತಿ, ಪ್ರವಾಸೋದ್ಯಮ, ಆರೋಗ್ಯ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ 11 ಇಲಾಖೆಗಳ ಸುಮಾರು 244 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ ಜನರು ಅತ್ಯಂತ ಕಠಿಣ ಪರಿಶ್ರಮ ಪಡುವ ಕಾಯಕಯೋಗಿಗಳು, ಪ್ರಮಾಣಿಕರು, ನೇರ ನುಡಿಯವರು ಹೀಗಾಗಿ ವಿಜಯಪುರ ಜಿಲ್ಲೆ ನೇರ ನುಡಿಯ, ಗಂಡು ಮೆಟ್ಟಿದ ಪ್ರಾಮಾಣಿಕ ಸ್ಥಳ ಇಂದಿನ ವಿಜಯಪುರ. ಈ ಸ್ಥಳದಲ್ಲಿ ಪ್ರತಿನಿಧಿಸುವ ವ್ಯಕ್ತಿಗಳು ಡಬಲ್ ಇಂಜಿನ್ ಹೊಂದಿದವರು. ಬಸನಗೌಡ ಪಾಟೀಲ್ ಯತ್ನಾಳ ಅವರು ಕೂಡ ಅಂತ ನಾಯಕರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

59 ತಿಂಗಳು ಒಟ್ಟಾಗಿ ಕೆಲಸ ಮಾಡೋಣ. ಈ ರಾಜ್ಯದ ಅತ್ಯಂತ ಕಟ್ಟಕಡೆಯ, ದೀನ-ದಲಿತರ ರೈತರ ಬದುಕು ಹಸನಾಗಬೇಕು. ಹೆಣ್ಣು ಮಕ್ಕಳ-ಯುವಕರ ಒಳ್ಳೆಯ ಭವಿಷ್ಯ ನಿರ್ಮಾಣವಾಗಬೇಕು. 60 ತಿಂಗಳಲ್ಲಿ 1 ತಿಂಗಳು ರಾಜಕಾರಣವನ್ನು ಮಾಡೋಣ. ಆಗ ಜನ ತೀರ್ಮಾನ ಮಾಡುತ್ತಾರೆ ಯಾರನ್ನು ಅಧಿಕಾರಕ್ಕೆ ತರಬೇಕೆಂದು, 59 ತಿಂಗಳು ಕೇವಲ ರಾಜಕಾರಣ ಮಾಡಿದರೆ, ಯಾರು ನಮಗೆ ಅಧಿಕಾರ ನೀಡಿದವರಿಗೆ ನಾವು ದ್ರೋಹ ಮಾಡಿದ ಹಾಗೇ ಆಗುತ್ತದೆ ಎಂದರು.

ಇಂದು ನಾವು ಕರ್ನಾಟಕದಲ್ಲಿ ಹೊಸ ವಾತಾವರಣವನ್ನು, ಮನ್ವಂತರವನ್ನು ಎಲ್ಲಾ ಸೇರಿ ಮಾಡಿದರೆ, ಆಡಳಿತ ಹಾಗೂ ಅಧಿಕಾರಿಗಳು ತನ್ನಿಂದತಾನೇ ಸುಧಾರಣೆಯಾಗುತ್ತದೆ. ಇದು ಬಹಳ ಮುಖ್ಯವಾಗಿದೆ ಎಂದರು. ಇದು ತಂತ್ರಜ್ಞಾನದ ಯುಗ, ಯಾರ ವಿಚಾರ ಏನಿದೆ, ಯಾರ ಸಂಕಲ್ಪ ಎನಿದೆ ಎನ್ನುವ ವಿಚಾರ ಜನರಿಗೆ ತಿಳಿದಿದೆ. ಜನರಿಗೆ ಹುಸಿ ಭರವಸೆ ನೀಡುವ ಅವಶ್ಯಕತೆ ಇಲ್ಲ. ನಾವು ಜನರೊಂದಿಗೆ ಪ್ರಾಮಾಣಿಕವಾಗಿದ್ದರೆ, ಜನರ ಸಂಕಷ್ಟಗಳನ್ನು ಅಂತ್ಯೋದಯ ಮಾಡುವವರಿಗೆ ಜನರು ಅವರಿಗೆ ಬೆಂಬಲವನ್ನು ನೀಡುತ್ತಾರೆ ಎಂದರು.

ಉತ್ತರ  ಕರ್ನಾಟಕ ಅಭಿವೃದ್ಧಿ ಬಗ್ಗೆ ಬಹಳಷ್ಟು ಚರ್ಚೆಗಳಾಗಿದೆ. ಕಾನೂನು ಹೋರಾಟಗಳು ನಡೆದಿದೆ, ವರದಿಗಳು ಬಂದಿದೆ, ಸಾವಿರಾರು ಕೋಟಿ ಮಂಜೂರು ಆಗಿದೆ ಖರ್ಚುಗಳು ಆಗಿದೆ. ಆದರೆ ಅಲ್ಲಿನ ಗ್ರಾಮದಲ್ಲಿನ ಮನೆಗಳ, ಮಕ್ಕಳ, ಮನಸ್ಥಿತಿ, ವಿದ್ಯಾಭ್ಯಾಸ, ಯುವಕರಿಗೆ ಉದ್ಯೋಗ, ಹೆಣ್ಣು ಮಕ್ಕಳಿಗೆ ನೀಡುವ ಗೌರವ ಇದೆಲ್ಲವನ್ನು ನೋಡಿದಾಗ ಮನಸಿಗೆ ಘಾಸಿಯಾಗುತ್ತದೆ. ಇದನ್ನು ಸುಧಾರಣೆ ಮಾಡುವ ಕೆಲಸ ಪ್ರಾರಂಭವಾಗಬೇಕು ಎಂದು ಅವರು ಹೇಳಿದರು.

ಈ ಭಾಗದಲ್ಲಿ ಯುಕೆಪಿ ಹಂತ-3, ಮುಳವಾಡ ಗುತ್ತಿ ಬಸವಣ್ಣ, ಚಿಮ್ಮಲಗಿ ನೀರಾವರಿ ಈ 3 ಪ್ರಮುಖ ಯೋಜನೆಗಳು ಆಗಬೇಕಾಗಿದೆ. ಇವುಗಳನ್ನು ಪೂರ್ಣ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. 2010ರ ಟ್ರಿಬ್ಯೂನಲ್ ಆದೇಶ ಬಂದಿದ್ದು, ಇದಕ್ಕೂ ಒಂದು ವರ್ಷದ ಮೊದಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆ ಮಾಡಿ ಹಾಗೂ ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಅದೇ ರೀತಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಕಾಲದಲ್ಲಿಯೂ ಕಾಲುವೆಗಳ ನಿರ್ಮಾಣಗಳು ಆಗಿದೆ ಎಂದರು.

ವಿಜಯಪುರ ಹಾಗೂ ಬಾಗಲಕೋಟೆ ಭಾಗದಲ್ಲಿ ದೊಡ್ಡಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಬೆಳೆಗಾರರಿದ್ದು, ಅವರಿಗೆ ಅನುಕೂಲವಾಗುವಂತೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ವೈನ್ ಬೋರ್ಡ್‍ನ್ನು ಮರುನಾಮಕರಣ ಮಾಡಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಡಿ, ಬಹು ವರ್ಷಗಳ ಬೇಡಿಕೆಯ ಇಡೇರಿಸಿದ್ದೇವೆ. ಇದರಲ್ಲಿ ದ್ರಾಕ್ಷಿ ಬೆಳೆಗಾರರು ಸದಸ್ಯರಾಗಲು, ಸಂಸ್ಕರಣೆಯಲ್ಲಿ ಪಾಲ್ಗೊಳ್ಳಲು, ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಪಡೆದು, ಒಳ್ಳೆಯ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸುವ ಮಹತ್ವ ನಿರ್ಧಾರವನ್ನು ಮಾಡಿದ್ದೇವೆ ಎಂದರು. 

ಜಿಲ್ಲೆಯ ಜಿಲ್ಲಾಡಳಿತ ಸಂಕೀರ್ಣ, 6 ಸಾವಿರ ಜನರಿಗೆ ಹಕ್ಕು ಪತ್ರ ವಿತರಣೆ, ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಾಮಥ್ರ್ಯವನ್ನು 200 ರಿಂದ 500ಕ್ಕೆ ಹೆಚ್ಚಿಸಲು, ರಸ್ತೆ ಅಭಿವೃದ್ಧಿ, ಹಾಸ್ಟೆಲ್ ನಿರ್ಮಾಣ, ವಾಣಿಜ್ಯ ಕಟ್ಟಡ, ಒಳಾಂಗಣ ಕ್ರೀಡಾಂಗಣ, ಮಹಿಳಾ ಕ್ರೀಡಾ ವಸತಿ ನಿಲಯ ಹೀಗೆ ಎಲ್ಲಾ ರಂಗದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ 2 ವರ್ಷಗಳ ಪ್ರಯತ್ನಕ್ಕೆ ಇಂದು ಚಾಲನೆ ದೊರೆತಿದೆ. ಅದರಂತೆ, ಈ ಎಲ್ಲಾ ಯೋಜನೆಗಳು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಬೇಕಾಗಿದೆ, ನಿರಂತರವಾಗಿ ಕಾಮಗಾರಿಗಳು ತಡಮಾಡಿದರೆ, ಅದರ ನಿರ್ಮಾಣದ ವೆಚ್ಚವು ಹೆಚ್ಚಾಗುತ್ತದೆ ಆ ರೀತಿ ಆಗದಂತೆ ಅಧಿಕಾರಿಗಳಿ ಸೂಚನೆ ನೀಡಿದರು. 

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳ ಹೆಚ್ಚಿನ ಕಾಳಜಿಯಂತೆ ವಿಮಾನ ನಿಲ್ದಾಣದ ವಿಸ್ತರಣೆಗೂ ಕಾರ್ಗೋ ಸೌಲಭ್ಯ, ಏರ್ ಬಸ್ ವ್ಯವಸ್ಥೆ ಮಾಡುವ ಬಗ್ಗೆ ಬೇಡಿಕೆಯೊಂದಿಗೆ ಹೆಚ್ಚುವರಿ ಅನುದಾನವನ್ನು ಬೇಡಿಕೆಗೆ ಶೀಘ್ರವಾಗಿ ಸುಮಾರು 120 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ನೀಡಿ, ಬದ್ಧತೆಯಿಂದ ಕಾಮಗಾರಿಯನ್ನು ಪೂರ್ಣ ಮಾಡುವುದಾಗಿ ತಿಳಿಸಿದರು. 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ, ಅಧಿಕಾರ ಪಡೆದ 2 ಗಂಟೆಯಲ್ಲಿಯೇ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿಯನ್ನು ಜಾರಿಗೆ ತರಲು ತೀರ್ಮಾನಿಸಲಾಯಿತು, ಇತಿಹಾಸದಲ್ಲಿಯೇ ಈ ಯೋಜನೆ ಬೇರೆಯಾವ ರಾಜ್ಯಯಲ್ಲಿಯೂ ಇರಲಿಲ್ಲ, ಅಂತಹ ಒಂದು ನಿರ್ಣಯವನ್ನು ಕೈಗೊಂಡಿದ್ದೇನೆ. 2.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, ಪದವಿ ಶಿಕ್ಷಣಕ್ಕೆ ಈಗ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಅರ್ಹರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು ಇದರಿಂದ 5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಪ್ರೌಢ ಶಾಲೆಯಿಂದ ಪಿಯುಸಿ ಮಾಡುವ ಸಂಖ್ಯೆ ಕಡಿಮೆಯಾಗುತ್ತಿದೆಂಬ ಮಾಹಿತಿಯಿಂದ ಇದಕ್ಕೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ರೈತರ ವಿದ್ಯಾನಿಧಿಯನ್ನು 8ನೇ ಮತ್ತು 9ನೇ ತರಗತಿ ಮಕ್ಕಳಿಗೂ ವಿಸ್ತರಣೆ ಮಾಡುಬೇಕೆನ್ನುವ ಬಗ್ಗೆ ತೀರ್ಮಾನ ಮಾಡಿದ್ದೇನೆ ಈ ಬಗ್ಗೆ ಕೂಡಲೇ ಆದೇಶ ಮಾಡುವುದಾಗಿ ಘೋಷಿಸಿದರು.

ಕೇಂದ್ರದ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 6,800/- ರೂ. ಪರಿಹಾರಕ್ಕೆ, ರಾಜ್ಯ ಸರ್ಕಾರವು ಇನ್ನೂ 6,800 ರೂ. ಸೇರಿಸಿ, 13,600 ರೂ. ಪರಿಹಾರ ನೀಡುವ ತೀರ್ಮಾನ. ನೀರಾವರಿ ಜಮೀನಿನಲ್ಲಿ ಬೆಳೆಹಾನಿಗೆ ಪ್ರತಿ ಹೆಕ್ಟೇರ್‍ಗೆ 13,500 ರೂ.ಗಳನ್ನು ಹೆಚ್ಚುವರಿಯಾಗಿ 11,500 ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‍ಗೆ 25,000 ರೂ ದೊರೆಯಲಿದೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‍ಗೆ 18,000 ರೂ. ಪರಿಹಾರಕ್ಕೆ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡುವ ಒಂದು ಐತಿಹಾಸಿಕ ತೀರ್ಮಾನ ಮಾಡಿದ್ದೇವೆ ಎಂದರು.

ಪ್ರವಾಹದಿಂದ ಮನೆಹಾನಿಯಾದವರಿಗೆ ಕೂಡಲೇ 95,000 ಸಾವಿರಗಳನ್ನು ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಹಣವನ್ನು ಬಿಡುಗಡೆಯಾಗಿದೆ. ಅದರ ಜೊತೆಗೆ 5 ಲಕ್ಷ ಮನೆಗಳ ಮಂಜೂರಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ 1 ಒಂದು ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಂಡಿದೆ, ಇದರಲ್ಲಿ ವಿಜಯಪುರಕ್ಕೂ ಕೂಡ ನಗರ ಪ್ರದೇಶ ಮನೆಗಳನ್ನು ನೀಡುವಂತೆ ಕೆಲಸವನ್ನು ಮಾಡುತ್ತೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News