ಬ್ಯಾಂಕ್‌ಗಳು ಆರ್ಬಿಐನ ಕಾಫಿ ಬೆಳೆ ಸಾಲ ಮರುಹೊಂದಾಣಿಕೆ ಮಾರ್ಗಸೂಚಿ ಪಾಲಿಸಿಲ್ಲ: ಭೋಜೇಗೌಡ ಆರೋಪ

Update: 2021-12-27 13:05 GMT

ಚಿಕ್ಕಮಗಳೂರು: ಅತಿವೃಷ್ಟಿ, ಅಕಾಲಿಕ ಮಳೆ, ಬರ ಹಾಗೂ ಲಾಕ್ಡೌನ್‌ನಿಂದಾಗಿ ಕಾಫಿ ಉದ್ಯಮ ಬಾರೀ ನಷ್ಟ ಅನುಭವಿಸಿದ್ದು, ಕಾಫಿ ಬೆಳೆಗಾರರು ವಿವಿಧ ಬ್ಯಾಂಕ್‌ಗಳಿಂದ ಪಡೆದ ಕಾಫಿ ಬೆಳೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಬೆಳೆ ಸಾಲವನ್ನು ಮರು ಹೊಂದಾಣಿಕೆ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಆದರೆ ಈ ಸೂಚನೆಯನ್ನು ಬ್ಯಾಂಕ್‌ಗಳು ಕಟ್ಟುನಿಟ್ಟಿನಿಂದ ಪಾಲಿಸದ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಬ್ಯಾಂಕರ್ಸ್ ಗಳ ಸಭೆ ಕೈಗೊಂಡಿದ್ದು, ಡಿ.28ರಂದು ಜಿಲ್ಲಾ ಮಟ್ಟದಲ್ಲೂ ಬ್ಯಾಂಕ್‌ಗಳ ಸಭೆ ಕರೆಯಲಾಗಿದೆ ಎಂದು ಕಾಫಿ ಬೋರ್ಡ್ ಅಧ್ಯಕ್ಷ ಎಂ.ಎಸ್.ಭೋಜೇಗೌಡ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 5 ವರ್ಷಗಳಿಂದ ರಾಜ್ಯದಲ್ಲಿ ಅಕಾಲಿಕ ಮಳೆ, ಅತಿವೃಷ್ಟಿ, ಬರದಿಂದಾಗಿ ಕಾಫಿ, ಅಡಿಕೆ, ಕಾಳು ಮೆಣಸು ಸೇರಿದಂತೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಈ ಕಾರಣಕ್ಕೆ ರಾಜ್ಯ ಸರಕಾರ 2016-17, 2017-18, 2018-19, 2019-20, 2020-21ನೇ ಸಾಲು ಸೇರಿದಂತೆ 5 ವರ್ಷಗಳ ಕಾಲ ಅತಿವೃಷ್ಟಿ, ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇದರೊಂದಿಗೆ ಕೋವಿಡ್‌ನಿಂದಾಗಿ ಘೋಷಿಸಲಾದ ಲಾಕ್‌ಡೌನ್‌ನಿಂದಲೂ ಕೂಲಿ ಕಾರ್ಮಿಕರು ಸಿಗದೇ ಕೃಷಿ, ತೋಟಗಾರಿಕೆ ಹಾಗೂ ಕಾಫಿ ಉದ್ಯಮಕ್ಕೂ ಭಾರೀ ನಷ್ಟವಾಗಿದೆ ಎಂದರು.

ರಾಜ್ಯ ಸರಕಾರ ಕಂದಾಯ, ತೋಟಗಾರಿಕೆ ಹಾಗೂ ಕಾಫಿ ಬೋರ್ಡ್ ಅಧಿಕಾರಿಗಳಿಂದ ಜಂಟಿ ಸರ್ವೆ ಕೈಗೊಂಡು ಬೆಳೆ, ಜಮೀನು ಹಾಗೂ ಆಸ್ತಿಪಾಸ್ತಿಗಳ ನಷ್ಟದ ಬಗ್ಗೆ ಸರ್ವೆ ನಡೆಸಿ ನಷ್ಟದ ಅಂದಾಜನ್ನು ಸಿದ್ಧಪಡಿಸುತ್ತಿದೆ. ಈ ಅಂದಾಜು ಪ್ರಕಾರ ಯಾವುದೇ ಬೆಳೆ ಶೇ.33ಕ್ಕಿಂತ ಹೆಚ್ಚು ನಷ್ಟವಾಗಿದ್ದರೇ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯಂತೆ ಎನ್‌ಡಿಆರ್‌ಎಫ್ ನಿಧಿಯಡಿ ಪರಿಹಾರ ನೀಡಲು ಆದೇಶಿಸಿದೆ. ಅದರಂತೆ ಪ್ರತೀ ಹೆಕ್ಟೇರ್‌ಗೆ 18 ಸಾವಿರ ರೂ. ನಂತೆ 2 ಹೆಕ್ಟೇರ್‌ಗೆ ಪರಿಹಾರ ನೀಡಲಾಗುತ್ತಿದೆ. ಎನ್‌ಡಿಆರ್‌ಎಫ್ ಪರಿಹಾರ ನಿಧಿಯಯಲ್ಲಿ ರಾಜ್ಯದಲ್ಲಿ ಸುಮಾರು 39 ಸಾವಿರ ಕಾಫಿ ಬೆಳೆಗಾರರಿಗೆ ಪರಿಹಾರ ನೀಡಲಾಗಿದ್ದು, ಬಾಕಿ ಬೆಳೆಗಾರರಿಗೆ ಹಂತಹಂತವಾಗಿ ಪರಿಹಾರಧನ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ ಎಂದರು.

ಹವಾಮಾನ ವೈಫರೀತ್ಯದಿಂದಾಗಿ ಸದ್ಯ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿರುವುದರಿಂದ ಬೆಳೆಗಾರರು ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ಕಾಫಿ ಬೆಳೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಒಂದು ವರ್ಷಗಳ ಸಾಲ ಮರುಪಾವತಿಗೆ ಒತ್ತಾಯಿಸದೇ ಆ ಬಳಿಕ 3ರಿಂದ 7 ವರ್ಷಗಳವರೆಗೆ ಸಾಲವನ್ನು ಮರು ಹೊಂದಾಣಿಕೆ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ಆದರೆ ಬ್ಯಾಂಕ್‌ಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ  ವರ್ತಿಸಿವೆ ಎಂದು ಆರೋಪಿಸಿದರು.

ಈ ಬಗ್ಗೆ ಬೆಳೆಗಾರರ ನಿಯೋಗ ಹಾಗೂ ಕಾಫಿ ಬೋರ್ಡ್ ಸರಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಎಸ್‌ಎಲ್‌ಬಿಸಿ ಸಭೆ ನಡೆದಿದ್ದು, ಸಭೆಯಲ್ಲಿ ನಮ್ಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕರ್ ಗಳು, ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಪಾಲಿಸಿದ್ದು, ಬೆಳೆಗಾರರ ಸಾಲ ಮರುಹೊಂದಾಣಿಕೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವವಾಗಿ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳು ಕೇಂದ್ರ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಡಿಎಲ್‌ಬಿಸಿ ಸಭೆ ನಡೆಸಿ ಗ್ರಾಮೀಣ ಭಾಗದಲ್ಲಿ ಈ ಸಂಬಂಧ ಆಗಿರುವ ಬೆಳವಣಿಗೆಗಳನ್ನು ಚರ್ಚಿಸಿ ಕ್ರಮವಹಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಬ್ಯಾಂಕರ‍್ಸ್ ಕಮಿಟಿಗೆ ಸೂಚಿಸಿದ್ದಾರೆ. 

ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿ.28ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಯೇ ಡಿಎಲ್‌ಬಿಸಿ(ಜಿಲ್ಲಾ ಮಟ್ಟದ ಬ್ಯಾಂರ‍್ಸ್ ಕಮಿಟಿ) ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲ ರಿಸರ್ವ್ ಬ್ಯಾಂಕ್ ಪ್ರತಿನಿಧಿಗಳೂ ಸೇರಿದಂತೆ ಎಲ್ಲ ಬ್ಯಾಂಕ್‌ಗಳ ಪ್ರತಿನಿಧಿಗಳು, ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರು, ಬೆಳೆಗಾರರು ಭಾಗವಹಿಸಲಿದ್ದು, ಸಭೆಯಲ್ಲಿ ಕಾಫಿ ಬೆಳೆಗಾರರ ಸಾಲ ಮರುಹೊಂದಾಣಿಕೆ ಸಂಬAಧ ಆಗಿರುವ ಲೋಪಗಳ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News