ಎಂಎಸ್‍ಪಿ ಯೋಜನೆಯಡಿ ವ್ಯಾಪಾರಸ್ಥರಿಂದ ಆಹಾರ ಧಾನ್ಯ ಖರೀದಿಸಿದರೆ ಕ್ರಮ: ಸಚಿವ ಉಮೇಶ್ ಕತ್ತಿ

Update: 2022-01-01 11:45 GMT

ಬೆಂಗಳೂರು, ಜ. 1: 2022ರ ಮಾರ್ಚ್ 31ರ ವರೆಗೆ ಎಂಎಸ್‍ಪಿ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಆಗುವ ಪ್ರಕ್ರಿಯೆ ಇದಾಗಿದೆ. ಆದಷ್ಟು ಹೆಚ್ಚಿನ ರೈತರಿಗೆ ಈ ಯೋಜನೆಯ ಲಾಭ ಸಿಗುವಂತೆ ಕಾರ್ಯೋನ್ಮುಖ ಆಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಸೂಚಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಎಂಎಸ್‍ಪಿ ಯೋಜನೆ ಅಡಿಯಲ್ಲಿ, ಬಿಳಿಜೋಳ, ರಾಗಿ ಹಾಗೂ ಭತ್ತ ಖರೀದಿ ಪ್ರಕ್ರಿಯೆ ರಾಜ್ಯಾದ್ಯಂತ ಇವತ್ತಿನಿಂದ ಆರಂಭಿಸಲಾಗುತ್ತಿದೆ. ಎಂಎಸ್‍ಪಿ ಯೋಜನೆ ರಾಜ್ಯದ ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಆರಂಭಿಸಲಾದ ಯೋಜನೆ. ಈ ಯೋಜನೆಯ ಲಾಭ ರಾಜ್ಯದ ಪ್ರತಿಯೊಬ್ಬ ರೈತರಿಗೂ ಸಿಗುವಂತಾಗಬೇಕು ಎಂದರು.

ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳಿಂದ ಯಾವುದೆ ಕಾರಣಕ್ಕೂ ಖರೀದಿ ಮಾಡಕೂಡದು, ಒಂದು ವೇಳೆ ವ್ಯಾಪಾರಸ್ಥರಿಂದ ಖರೀದಿ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಪ್ರತಿ ಕ್ವಿಂಟಾಲ್ ಬಿಳಿ ಜೋಳ (ಮಾಲ್ದಂಡಿ) 2,758 ರೂ., ಪ್ರತಿ ಕ್ವಿಂಟಾಲ್ ಬಿಳಿಜೋಳ (ಹೈಬ್ರಿಡ್) 2,738 ರೂ., ಪ್ರತಿ ಕ್ವಿಂಟಾಲ್ ಗ್ರೇಡ್ ‘ಎ' ಭತ್ತಕ್ಕೆ 1,960 ರೂ., ಪ್ರತಿ ಕ್ವಿಂಟಾಲ್ ಸಾಮಾನ್ಯ ಗ್ರೇಡ್ ಭತ್ತಕ್ಕೆ 1,940 ರೂ. ಹಾಗೂ ಪ್ರತಿ ಕ್ವಿಂಟಾಲ್ ರಾಗಿ 3,377 ರೂ.ದರ ನಿಗದಿ ಮಾಡಲಾಗಿದ್ದೂ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News