ಪ್ರಧಾನಿ ಕಾರ್ಯಕ್ರಮಕ್ಕೆ ಜನ ಸೇರಲಿಲ್ಲವೆಂದು ದಲಿತ ಸಿಎಂ ವಿರುದ್ಧ ಕ್ಷುಲ್ಲಕ ಆರೋಪ: ಮಲ್ಲಿಕಾರ್ಜುನ ಖರ್ಗೆ

Update: 2022-01-06 14:51 GMT
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ.6: ಪಂಜಾಬಿನ ಫಿರೋಝ್ ಪುರದಲ್ಲಿ ನಿನ್ನೆ ನಡೆಯಬೇಕಾಗಿದ್ದ ಸಮಾವೇಶದಲ್ಲಿ ಬಿಜೆಪಿಯವರು 75 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಲ್ಲಿ 700 ಜನ ಮಾತ್ರ ಇದ್ದರು. ತಮ್ಮ ಸಭೆಗೆ ಜನ ಸೇರಿಲ್ಲ ಎಂಬ ಸಿಟ್ಟಿನಿಂದ ದಲಿತ ನಾಯಕನ ನೇತೃತ್ವದ ರಾಜ್ಯ ಸರಕಾರದ ಮೇಲೆ ಕೇಂದ್ರ ಸರಕಾರ, ಪ್ರಧಾನಮಂತ್ರಿ ಕಚೇರಿ, ಕೇಂದ್ರ ಸಚಿವರು, ಬಿಜೆಪಿ ವಕ್ತಾರರು ಬಾಯಿಗೆ ಬಂದಂತೆ ಮಾತನಾಡಿ ಮಾಧ್ಯಮಗಳಿಗೆ ಸುಳ್ಳು ಹೇಳಿ ಜನರ ಮನಸ್ಸು ಕೆಡಿಸಿ, ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಗಾರಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್‍ನಲ್ಲಿ ಮೊದಲ ಬಾರಿಗೆ ದಲಿತ ನಾಯಕ ಮುಂಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಡಾ.ಚನ್ನಿ ಬಹಳ ಸರಳ, ಸಜ್ಜನ ಹಾಗೂ ಮೃಧು ಭಾಷಿಗ. ಅಂತಹ ವ್ಯಕ್ತಿ ಅಥವಾ ಸರಕಾರ ಕೆಳಗಿಳಿಸಲು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ನಿನ್ನೆ ಘಟನೆಯಲ್ಲಿ ಪ್ರಧಾನಿಯ ಭದ್ರತಾ ಲೋಪ ಉಂಟಾಗಿದ್ದು, ಕೇಂದ್ರ ಸರಕಾರದಿಂದ. ಗುಪ್ತಚರ, ಎಸ್‍ಪಿಜಿ ಹಾಗೂ ಕೇಂದ್ರದ ಅಧಿಕಾರಿಗಳು ಮೊದಲೇ ಅಲ್ಲಿ ಹೋಗಿ, ಪ್ರತಿ ಸ್ಥಳ ಪರಿಶೀಲಿಸಿ, ಎಲ್ಲಿ ಎಷ್ಟು ಜನ ಸೇರಬೇಕು ಎಂದು ತೀರ್ಮಾನಿಸಿರುತ್ತಾರೆ. ಪ್ರಧಾನಮಂತ್ರಿಗಳ ಹೆಲಿಕಾಪ್ಟರ್ ಎಲ್ಲಿ ಇಳಿಯಬೇಕು, ಅವರು ಎಲ್ಲಿ ಸಭೆ ಮಾಡುತ್ತಾರೆ, ಯಾರು ಇರಬೇಕು ಎಂಬ ಮಾರ್ಗಸೂಚಿಗಳು ಇವೆ. ಅವರ ಪ್ರತಿನಿಮಿಷದ ಕಾರ್ಯಕ್ರಮವನ್ನು ಪಂಜಾಬ್ ಸರಕಾರಕ್ಕೆ ಕಳುಹಿಸಿರುತ್ತಾರೆ. ಆದರೂ ಅವರು ಈ ಪಟ್ಟಿ ಅನುಗುಣವಾಗಿ ಪ್ರಯಾಣ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

ಪೊಲೀಸ್ ದಾಖಲೆಯಲ್ಲಿ ಫಿರೋಝ್ ಪುರದಲ್ಲಿ ನಿನ್ನೆ 5 ಸಾವಿರ ಜನ ಇದ್ದರು ಎಂದು ಹೇಳುತ್ತಾರೆ. ಅಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ವಿವಿಧ ಪೊಲೀಸ್ ದಳದ ಅಧಿಕಾರಿಗಳೇ 4-5 ಸಾವಿರ ಜನ ಇದ್ದರು. ಜನರ ಕೊರತೆ ಮಾಹಿತಿ ಪಡೆದ ಪ್ರಧಾನಿ, ಈ ಕಾರ್ಯಕ್ರಮ ಮೊಟಕುಗೊಳಿಸಲು ನಿರ್ಧರಿಸಿದರು. ಅವರ ಕಾರ್ಯಕ್ರಮದ ವೇಳಾಪಟ್ಟಿ ಪ್ರಕಾರ ಮೋದಿ ಹೆಲಿಕಾಪ್ಟರ್ ಮೂಲಕ ಅಲ್ಲಿ ಇಳಿದು ಸಭೆಯಲ್ಲಿ ಭಾಗವಹಿಸಬೇಕಿತ್ತು ಎಂದು ಅವರು ಹೇಳಿದರು. 

ಹೆಲಿಕಾಪ್ಟರ್ ಮೂಲಕ ಹೋಗಬೇಕಾದವರು, ರಸ್ತೆ ಮಾರ್ಗದಲ್ಲಿ ಹೋಗಲು ತೀರ್ಮಾನಿಸಿದ್ದು, ಪ್ರಧಾನಮಂತ್ರಿಗಳು ಹಾಗೂ ಅವರ ಭದ್ರತಾ ಸಿಬ್ಬಂದಿ. ಕೇವಲ 20 ನಿಮಿಷಗಳ ಮುಂಚಿತವಾಗಿ ನಿಮ್ಮ ಪ್ರಯಾಣದ ಮಾರ್ಗ ಬದಲಾಗುತ್ತದೆ. ಪ್ರಧಾನಿ ಬಳಿ ಹೋಗುವವರು ಕೋವಿಡ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ತೆಗೆದುಕೊಂಡು ಹೋಗಬೇಕು. ಮುಖ್ಯಮಂತ್ರಿಗಳ ಸಿಬ್ಬಂದಿ ಹಾಗೂ ಮೂರ್ನಾಲ್ಕು ಅಧಿಕಾರಿಗಳು ಕೋವಿಡ್ ಸೋಂಕಿತರಾಗಿದ್ದ ಪರಿಣಾಮ ಅವರು ಪ್ರಧಾನಿಯನ್ನು ಬರಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹಿಂದಿನ ದಿನ ರಾತ್ರಿ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಜತೆಗೆ ಕೆಲವು ಕಡೆ ರೈತರು ನಿಮಗೆ ತಮ್ಮ ಮನವಿ ನೀಡಲು ರಸ್ತೆಯಲ್ಲಿ ಬರುತ್ತಾರೆ ಅದರ ಬಗ್ಗೆ ನೀವು ಯೋಚಿಸಿ, ಹವಾಮಾನವೂ ಸರಿಯಿಲ್ಲ, ಹೀಗಾಗಿ ತಮ್ಮ ಕಾರ್ಯಕ್ರಮ ರದ್ದು ಮಾಡಿ ಎಂದು ಮುಖ್ಯ ಕಾರ್ಯದರ್ಶಿ ಮೊದಲೇ ಮಾಹಿತಿ ನೀಡಿದ್ದರು. ಆದರೆ ಐಬಿ ನಿರ್ದೇಶಕರು, ಪರಿಸ್ಥಿತಿ ಉತ್ತಮವಾಗಿದೆ, ಯಾವುದೇ ತೊಂದರೆ ಇಲ್ಲ, ಕಾರ್ಯಕ್ರಮಕ್ಕೆ ಹೋಗಬಹುದು ಎಂದು ಹೇಳಿದರು. ಹವಾಮಾನ ಉತ್ತಮವಾಗಿಲ್ಲ ಎಂದು ಗೊತ್ತಿದ್ದರೂ ಹೆಲಿಕಾಪ್ಟರ್ ನಲ್ಲಿ ಬರುವುದಾಗಿ ತಿಳಿಸಿದ್ದರೂ ರೈತರು ಅಲ್ಲಲ್ಲಿ ಅಸಮಾಧಾನವಾಗಿದ್ದರೂ ಕೊನೆ ಗಳಿಗೆಯಲ್ಲಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡಲು ಮುಂದಾಗುತ್ತಾರೆ ಎಂದು ಅವರು ದೂರಿದರು. 

ಸ್ಥಳೀಯ ವಾತಾವರಣ ತಿಳಿಸಿದ್ದರೂ ಅದನ್ನು ಕೇಳದೇ ಪ್ರಯಾಣ ಮಾಡಿ, ನಂತರ ಜನ ಸೇರಿಲ್ಲ ಎಂದು ತಿಳಿದು ಸುಮಾರು 10 ಕಿ.ಮೀ ಹೋಗಿ, ಅಲ್ಲಿ ರಸ್ತೆ ತಡೆಯಲಾಗಿದೆ. ಹೀಗಾಗಿ ವಾಪಸ್ ಬರುತ್ತಿರುವುದಾಗಿ ಹೇಳಿದ್ದನ್ನು ನೀವೆಲ್ಲ ನೋಡಿದ್ದೀರಿ. ಒಬ್ಬ ಪ್ರಧಾನಿಗೆ ಎಷ್ಟು ಭದ್ರತೆ ಇರುತ್ತದೆ. ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಈ ಹಿಂದಿನ ಪ್ರಧಾನಮಂತ್ರಿಗಳಿಗಿಂತ ಸುಮಾರು ಹತ್ತುಪಟ್ಟು ಹೆಚ್ಚಿನ ಭದ್ರತೆ ಇದೆ. ವಿದೇಶಿ, ಬುಲೆಟ್ ಪ್ರೂಫ್ ಕಾರಿದ್ದರೂ, ಪಂಜಾಬ್ ಸರಕಾರದ ಮೇಲೆ ಆರೋಪ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಪ್ರಯಾಣ ಮಾಡುವ ಮುನ್ನ ಅವರ ಬೆಂಗಾವಲು ವಾಹನಗಳು ಮೊದಲೇ ಸಂಚಾರ ಮಾಡಿ ಪರಿಸ್ಥಿತಿ ನೋಡಿ ಮಾಹಿತಿ ನೀಡುತ್ತಾರೆ. ರಸ್ತೆಯಲ್ಲಿ ಹೋದರೆ, ಮೊದಲು ಹತ್ತಾರು ಗಾಡಿ ಹೋಗಿ, ನಂತರ ಅವರ ಕಾರು ಭದ್ರತೆಯೊಂದಿಗೆ ಹೋಗುತ್ತದೆ. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ಹಾಗೂ ನನ್ನ ಕಚೇರಿ ಸಂಸತ್ತಿನ ಒಂದೇ ಆವರಣದಲ್ಲಿ ಇದ್ದರೂ, ನಾನು ಮನೆಯಿಂದ ಕಚೇರಿಗೆ ಹೋಗುವಾಗ ಪ್ರಧಾನಿ ಕಾರು ಹೋಗಲಿದೆ ಎಂಬ ಕಾರಣಕ್ಕೆ ನನ್ನ ಕಾರನ್ನೇ ತಡೆದು ನಿಲ್ಲಿಸಿದ್ದಾರೆ. ನಂತರ ಅಧಿಕಾರಿಗಳು ಬಂದು ನನ್ನ ಬಳಿ ಕ್ಷಮೆ ಕೋರಿದ್ದಾರೆ. ನಾನು ಈ ವಿಚಾರವನ್ನು ಅನಗತ್ಯವಾಗಿ ದೊಡ್ಡದು ಮಾಡಲಿಲ್ಲ ಎಂದು ಅವರು ಹೇಳಿದರು. 

ಪಂಜಾಬ್ ಸಿಎಂ ಚನ್ನಿ ಅವರು, ಪ್ರಧಾನಿಯ ಕೂದಲಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ನಮ್ಮ ಪ್ರಾಣ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಆದರೂ ಅವರ ಮೇಲೆ ಇನ್ನಿಲ್ಲದ ಆರೋಪ ಮಾಡಿ ರಾಜಕೀಯ ಮಾಡುತ್ತಾರೆ. ರಾಜಕೀಯ, ಮತಕ್ಕಾಗಿ ದೇಶದಲ್ಲಿ ಭಾವನಾತ್ಮಕ ಆರೋಪ ಮಾಡಿದರೆ ಸರಿಯಲ್ಲ. ಸಿಎಂ ಅವರು ನನ್ನ ಜತೆ ಮಾತನಾಡುವಾಗ, ಈ ವಿಚಾರವಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಮಾಜಿ ಮುಖ್ಯಕಾರ್ಯದರ್ಶಿ ಸಮಿತಿ ಮಾಡಿ ಮೂರು ದಿನಗಳ ಒಳಗಾಗಿ ಈ ಭದ್ರತಾ ಲೋಪದ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಪ್ರಧಾನಿಗೆ ಗೌರವ ನೀಡಿ, ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ಅದನ್ನು ಮಾಡುತ್ತೇವೆ. ಆದರೆ ಮುಖ್ಯಮಂತ್ರಿ ವಿರುದ್ಧ ಪ್ರಧಾನಮಂತ್ರಿಗಳೇ, ನಾನು ಪಾರಾದೆ, ಇದೇ ದೊಡ್ಡ ವಿಚಾರ, ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿ ಎಂದು ಹೇಳುವುದು ಎಷ್ಟು ಸರಿ. ನಿಮಗೆ ಅಷ್ಟು ಭದ್ರತೆ ಇದ್ದರೂ, ಸ್ಥಳೀಯ ಪರಿಸ್ಥಿತಿ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದರೂ ಸಭೆ ಮಾಡಲು ಮುಂದಾಗಿ, ಕೊನೆ ಗಳಿಗೆಯಲ್ಲಿ ಪ್ರಯಾಣದ ಮಾರ್ಗ ಬದಲಿಸಿ, ಪ್ರಚಾರಕ್ಕೆ ಕೇಂದ್ರ ಭದ್ರತಾ ಸಿಬ್ಬಂದಿ ವೈಫಲ್ಯವನ್ನು ರಾಜ್ಯ ಸರಕಾರದ ಮೇಲೆ ಹಾಕುವುದು ಎಷ್ಟು ಸರಿ? ಆ ಮೂಲಕ ನೀವು ಪಂಜಾಬ್ ರಾಜ್ಯಕ್ಕೆ ಮಾಡುವ ಅಪಮಾನ. ಪ್ರಧಾನಿ ಬೆನ್ನಲ್ಲಿ ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷರು ಟೀಕೆ ಮಾಡುವುದು ಖಂಡನೀಯ. ಇಲ್ಲಿ ಭದ್ರತಾ ಲೋಪವಾಗಿದ್ದು, ಕೇಂದ್ರ ಭದ್ರತಾ ಪಡೆಗಳಿಂದಲೆ ಹೊರತು ರಾಜ್ಯ ಸರಕಾರದ ಲೋಪವಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈಜೋಡಿಸಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ‘ಗುಪ್ತಚರ ಇಲಾಖೆ, ಭದ್ರತಾಪಡೆಗಳು ಅವರ ಅಧಿಕಾರಿಗಳೇ ಇದ್ದಾರೆ, ಅವರನ್ನೇ ಕೇಳಲಿ. ಬಿಜೆಪಿ ಈ ರೀತಿ ಗಿಮಿಕ್ ರಾಜಕೀಯ ಮಾಡುವುದನ್ನು ಬಿಡಬೇಕು. ಜನರಿಗೆ ಒಂದು ಅಥವಾ ಎರಡು ದಿನ ಸುಳ್ಳು ಹೇಳಬಹುದು. ಸದಾಕಾಲ ಸುಳ್ಳು ಹೇಳಿ ಬದುಕಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.

ಪಾಕಿಸ್ತಾನ ಗಡಿಗೆ ಹತ್ತಿರವಿರುವ ಪ್ರದೇಶ ಇದಾಗಿದ್ದು, ಕ್ಷಿಪಣಿ ದಾಳಿಗೆ ಸೂಕ್ತ ಜಾಗ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರದೇಶದಲ್ಲಿ ಕಾರ್ಯಕ್ರಮ ಇಟ್ಟಿದ್ದು, ಕಾಂಗ್ರೆಸ್ ನವರಾ ಅಥವಾ ಬಿಜೆಪಿಯವರಾ? ಸುಮ್ಮನೆ ಇಂತಹ ಆರೋಪ ಯಾಕೆ ಮಾಡುತ್ತೀರಿ?’ ಎಂದರು.  

ಕೇಂದ್ರದಿಂದ ಉದ್ದೇಶ ಪೂರ್ವಕವಾಗಿ ನಡೆದ ಲೋಪವೇ ಎಂಬ ಪ್ರಶ್ನೆಗೆ, ‘ಇದು ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿ ನಡೆದ ಘಟನೆ. ಪಂಜಾಬ್ ಪೊಲೀಸರು ರೈತರನ್ನು ದಾರಿಯಿಂದ ತೆರವುಗೊಳಿಸಿದ್ದರು. ಆನಂತರ ಕೆಲವರು ಅಲ್ಲಿ ತಮ್ಮ ಮನವಿ ಸಲ್ಲಿಸಲು ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಇದ್ದರೂ ಹೆಚ್ಚು ಭದ್ರತೆ ಹೊಂದಿದ್ದ ಪ್ರಧಾನಿ ಕೊನೆ ಹಂತದಲ್ಲಿ ಹೆಲಿಕಾಪ್ಟರ್ ಮೂಲಕ ಬಾರದೆ, ರಸ್ತೆ ಮೂಲಕ ಪ್ರಯಾಣ ಮಾಡಿದ್ದಾರೆ. ಮಾಹಿತಿ ಇದ್ದರೂ ಅವರು ಅದೇ ಮಾರ್ಗದಲ್ಲಿ ಬಂದಿದ್ದು ಯಾಕೆ? ತಮ್ಮ ಸಭೆಗೆ ಜನ ಬಾರದ ಹಿನ್ನೆಲೆಯಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News