ವಿಜಯಪುರ: ಅಕ್ಕ ಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

Update: 2022-01-12 13:31 GMT
ಸಾಂದರ್ಭಿಕ ಚಿತ್ರ

ವಿಜಯಪುರ, ಜ.12: ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವ ಆಲೋಚನೆ ಕೈ ಬಿಡಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ನ್ಯಾಯವಾದಿ ಶ್ರೀನಾಥ ಪೂಜಾರಿ ನೇತೃತ್ವದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಆಗ ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಘೋಷಣೆ ಕೂಗಲು ಪ್ರಾರಂಭಿಸಿದಾಗ ಸಭೆಯಲ್ಲಿದ್ದ ಎಲ್ಲ ಸಿಂಡಿಕೇಟ್ ಸದಸ್ಯರು ಹಾಗೂ ಕುಲಪತಿಗಳು, ಕುಲಸಚಿವರು, ಸಭೆಯನ್ನು ನಿಲ್ಲಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಶ್ರೀನಾಥ ಪೂಜಾರಿ, ಈ ಭಾಗದ ಮಹಿಳೆಯರ ಶಿಕ್ಷಣ ಗುಣಮಟ್ಟ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಂಜುಂಡಪ್ಪ ವರದಿಯ ಆಧಾರದ ಮೇಲೆ ಸ್ಥಾಪಿತವಾಗಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಇದಾಗಿದ್ದು ಜಿಲ್ಲೆಯ ಹಾಗೂ ನಾಡಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಈಗಿನ ಸರಕಾರ ಹಾಗೂ ಅದರ ಪ್ರತಿನಿಧಿಗಳು ಸೇರಿಕೊಂಡು ಮಹಿಳಾ ವಿಶ್ವವಿದ್ಯಾಲಯವನ್ನು ಕೋ-ಎಜುಕೇಷನ್ ಮಾಡುವ ಮೂಲಕ ಮಹಿಳಾ ವಿಶ್ವವಿದ್ಯಾಲಯ ಮುಚ್ಚಲು ಹೊರಟಿರುವುದು ಕಳವಳಕಾರಿ. ಎಲ್ಲ ಸಿಂಡಿಕೇಟ್ ಸದಸ್ಯರು ಈ ವಿಶ್ವವಿದ್ಯಾಲಯ ಉಳಿಸಲು ನಿಮ್ಮ ನಿಲುವು ಹಾಗೂ ಸರಕಾರದ ನಡೆ ಏನು ಎಂದು ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು.

ಆಗ ಸಿಂಡಿಕೇಟ್ ಸದಸ್ಯ ವೆಂಕಟೇಶ್ ಮಾತನಾಡಿ, ಈ ವಿಶ್ವವಿದ್ಯಾಲಯ ಉಳಿಸಲು ನಾವು ನಿಮ್ಮ ಜೊತೆಗಿದ್ದು ಹೊರಾಟ ಮಾಡಲು ಸಿದ್ಧ ಇದ್ದೇವೆ. ಸರಕಾರದ ನಿಲುವು ಅಥವಾ ಈ ಸುದ್ದಿ ಗಾಳಿ ಸುದ್ದಿಯಾಗಿದ್ದರೆ ಸಂಬಂಧಿಸಿದವರು ಪ್ರತಿಕ್ರಿಯೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News