ಕಡೆಗಣಿಸಲ್ಪಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆ

Update: 2022-01-18 07:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದಿಂದ ಇಡೀ ಜಗತ್ತು ತತ್ತರಿಸಿದೆ. ಇದರ ಜೊತೆಗೆ ಭಾರತದಂತಹ ದೇಶಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನೈಜ ಸ್ವರೂಪವೂ ಬಯಲಾಗಿದೆ. ಜಾಗತೀಕರಣದ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಾಲಿಟ್ಟ ಕಡೆ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದ್ದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ. 2020ರಲ್ಲಿ ಕೋವಿಡ್ ಒಮ್ಮಿಂದೊಮ್ಮೆಲೇ ವಕ್ಕರಿಸಿದಾಗ ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗದೆ, ವೆಂಟಿಲೇಟರ್ ಇಲ್ಲದೆ, ವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದ ಅನೇಕ ಸಾವುಗಳು ಸಂಭವಿಸಿದವು. ಇಂತಹ ಸಾಂಕ್ರಾಮಿಕವನ್ನು ಎದುರಿಸುವ ಸಿದ್ಧತೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಇರಲಿಲ್ಲ. ನವ ಉದಾರೀಕರಣ ನೀತಿಗೆ ಶರಣಾದ ನಮ್ಮ ಸರಕಾರಗಳು ಖಾಸಗಿ ವೈದ್ಯಕೀಯ ಲಾಬಿಗೆ ನೀಡಿದಷ್ಟು ಪ್ರೋತ್ಸಾಹ ವನ್ನು ಸರಕಾರಿ ಆಸ್ಪತ್ರೆಗಳಿಗೆ ನೀಡಲಿಲ್ಲ. ಖಾಸಗಿಯವರ ಆಸಕ್ತಿ ಹಣಗಳಿಸುವುದೇ ಆಗಿರುವುದರಿಂದ ಅವರಿಗೆ ಹಣ ಮೊದಲು, ರೋಗಿಯ ಆರೋಗ್ಯ ಎರಡನೆಯದು. ಹೀಗಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆಗೊಳಗಾದರು.

 ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಕೂಡ ಸಮಾಧಾನಕರವಾಗಿಲ್ಲ. ನೀತಿ ಆಯೋಗದ 2019-20ರ ವರ್ಷದ ಆರೋಗ್ಯ ಸೂಚ್ಯಂಕ ವರದಿಯ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಧಿಸಿರುವ ಪ್ರಗತಿಯಲ್ಲಿ ಕೇರಳ ಮತ್ತು ತಮಿಳುನಾಡು ಮೊದಲ ಸ್ಥಾನದಲ್ಲಿವೆ. ಕರ್ನಾಟಕ ಕಟ್ಟ ಕಡೆಯ ಸ್ಥಾನದಲ್ಲಿದೆ. ಇದು ಆರೋಗ್ಯ ಕ್ಷೇತ್ರದ ಬಗ್ಗೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಸರಕಾರದ ನಿರಾಸಕ್ತಿಗೆ ಒಂದು ಉದಾಹರಣೆ ಆಗಿದೆ.
ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಳಪೆ ಸಾಧನೆಗೆ ಹಲವಾರು ಕಾರಣಗಳಿವೆ. ನವಜಾತ ಶಿಶುಗಳ ಮರಣ ಪ್ರಮಾಣ, ಲಿಂಗಾನುಪಾತ, ಆಸ್ಪತ್ರೆಯಲ್ಲಿ ಆಗುವ ಹೆರಿಗೆಗಳ ಪ್ರಮಾಣ, ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾದ ಹಣದಲ್ಲಿ ಕಡಿತ ಹೀಗೆ ಹಲವಾರು ಕಾರಣಗಳಿಂದ ನೀತಿ ಆಯೋಗದ 24 ಸೂಚ್ಯಂಕದ ಪಟ್ಟಿಯಲ್ಲಿ ರಾಜ್ಯ ಒಂಭತ್ತನೇ ಸ್ಥಾನಕ್ಕೆ ಕುಸಿದಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಕಳಪೆ ಸಾಧನೆ ಕಾರಣಕ್ಕಾಗಿ ರಾಜ್ಯಕ್ಕೆ ಬರುವ ಅನುದಾನದಲ್ಲೂ ಸಹಜವಾಗಿ ಕಡಿತ ಉಂಟಾಗುತ್ತದೆ. ನಮ್ಮ ಆಡಳಿತದ ಹೊಣೆ ಹೊತ್ತವರ ವೈಫಲ್ಯಕ್ಕಾಗಿ ಕರ್ನಾಟಕದ ಜನತೆ ಬೆಲೆ ತೆರಬೇಕಾಗಿ ಬಂದಿದೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅದಕ್ಕೆ ಆಯವ್ಯಯದಲ್ಲಿ ಸಾಕಷ್ಟು ಅನುದಾನ ನೀಡಲು ನಮ್ಮನ್ನು ಆಳಿದ ಸರಕಾರಗಳು ಆಸಕ್ತಿ ತೋರಿಸಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ತಾಣಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ನೆರವಾಗಬಲ್ಲ ತಾಲೂಕು ಆಸ್ಪತ್ರೆಗಳು ಇನ್ನೂ ಓಬಿರಾಯನ ಕಾಲದಲ್ಲಿದ್ದಂತಿವೆ. ಇವುಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಅರಣ್ಯ ರೋದನವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಮಟ್ಟದ ಆಸ್ಪತ್ರೆಗಳವರೆಗೆ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. ಇದರಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ.

ಸುಸ್ಥಿರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ನಮ್ಮ ನೆರೆಯ ರಾಜ್ಯಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ಕೇರಳದಲ್ಲಿ ಪ್ರತಿ ಐದು ಸಾವಿರ ಜನರಿಗೆ ಒಂದರಂತೆ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ತಮಿಳು ನಾಡಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರು ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸರಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುತ್ತಾರೆ. ಅಲ್ಲಿ ಹೋದರೆ ಚೇತರಿಸಿಕೊಂಡು ಬರುತ್ತೇವೆ ಎಂಬ ನಂಬಿಕೆ ಜನರಿಗಿದೆ.ಆದರೆ ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವ ಸೌಕರ್ಯ ಗಳೂ ಇಲ್ಲವಾದುದರಿಂದ ಜನರು ಅವುಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.ಅನೇಕ ತಾಲೂಕು ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರೋನ ಸಂದರ್ಭದಲ್ಲಿ ತಡವಾಗಿ ವೆಂಟಿಲೇಟರ್ ಅಳವಡಿಸಿದ್ದರೂ ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಅವು ನಿರುಪಯುಕ್ತವಾಗಿವೆ. ಈಗಲಾದರೂ ಕರ್ನಾಟಕ ಸರಕಾರ ಖಾಸಗಿ ವೈದ್ಯಕೀಯ ಲಾಬಿಗೆ ಮಣೆ ಹಾಕದೆ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲ ಅವುಗಳನ್ನು ಸುಸಜ್ಜಿತಗೊಳಿಸಬೇಕು. ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ನಿವಾರಿಸಬೇಕು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೂ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ನೇರ ಸಂಬಂಧವಿದೆ ಎಂಬುದನ್ನು ಮನಗಾಣಬೇಕು. ಹಿಂದಿನ ವೈಫಲ್ಯಗಳಿಂದ ಹತಾಶರಾಗದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮೊದಲ ಆದ್ಯತೆ ನೀಡಬೇಕು.
ಕೇರಳ ಸರಕಾರ ಉಳಿದೆಲ್ಲವುಗಳಿಗಿಂತ ಆರೋಗ್ಯ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿದೆ.ಹಾಗಾಗಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು. ಕರ್ನಾಟಕವೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮಠ, ಪೀಠಗಳಿಗೆ, ಸಂಸ್ಕೃತ ವಿಶ್ವವಿದ್ಯಾನಿಲಯದಂತಹವುಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುವ ಬದಲಾಗಿ ಅದೇ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಡಲಿ ಹಾಗೂ ಮುಂದಿನ ಮುಂಗಡ ಪತ್ರದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ಮೀಸಲಿಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News