ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ: ಸರಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

Update: 2022-01-18 12:57 GMT
ಹೆಚ್.ಡಿ. ಕುಮಾರಸ್ವಾಮಿ 

ಬೆಂಗಳೂರು: ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಕೋವಿಡ್  ಸೋಂಕು ಭಾರೀ ಪ್ರಮಾಣದಲ್ಲಿ ಏರುತ್ತಿರುವ ಕಾರಣ ಮುಂದಿನ 15-20 ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ  ಸರಕಾರಕ್ಕೆ ಸಲಹೆ ಮಾಡಿದರು.

ರಾತ್ರಿ ಕರ್ಫ್ಯೂ ಬಗ್ಗೆ ಬಿಜೆಪಿ ಹಾಗೂ ಸರಕಾರದ ನಡುವೆ ಗೊಂದಲ ಇದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದೂ ಅವರು ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು, ವಸತಿ ನಿಲಯಗಳನ್ನು ಕೆಲ ಕಾಲ ಬಂದ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಮಕ್ಕಳು, ವಿದ್ಯಾರ್ಥಿಗಳು ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಿಂದ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈ ಕರ್ಫ್ಯೂ ಬಗ್ಗೆ ಬಿಜೆಪಿ ಮುಖಂಡರಲ್ಲೇ ಕೆಲವು ಗೊಂದಲಗಳಿವೆ ಎಂದ ಅವರು, ಆಡಳಿತ ಪಕ್ಷದ ಕೆಲ ಪ್ರಮುಖರು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅದರ ಪರ ಮಾತನಾಡುತ್ತಾರೆ. ಜನ ಯಾರ ಮಾತು ಕೇಳಬೇಕು?  ವ್ಯಾಪಾರಿಗಳು, ಹೋಟೆಲ್ ವ್ಯಾಪಾರಿಗಳು, ಇನ್ನಿತರೆ ಸಂಘಟನೆಗಳು ಸಹ ಇದಕ್ಕೆ ವಿರೋಧ ಇದ್ದಾರೆ. ಆದರೂ ಬಿಜೆಪಿ ಮುಖಂಡರ ಗೊಂದಲಮಯ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಅವರು ಹೇಳಿದರು.

ನೈಟ್ ಕರ್ಫ್ಯೂನಿಂದ ಸಂಪೂರ್ಣವಾಗಿ ಕೋವಿಡ್ ಹತೋಟಿ ಬರುವುದು ಸಾಧ್ಯವೇ? ತಜ್ಞರು ಯಾವ ಅಧಾರದ ಮೇಲೆ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ನೈಟ್ ಕರ್ಫ್ಯೂನಿಂದ ಸಮಸ್ಯೆ ಬಗೆಹರಿಯುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ವೀಕೆಂಡ್ ಲಾಕ್ ಡೌನ್ ಕೂಡ ಎಷ್ಟು ಉಪಯೋಗ ಆಗುತ್ತಿದೆ ಎನ್ನುವುದನ್ನು ನೋಡಬೇಕು. ಜನ ಸಾಮಾನ್ಯರ ಜೀವನಕ್ಕೆ ತೊಂದರೆ ಆಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ಹಿಂದೆ ನೀಡಿದ್ದಕ್ಕಿಂತ ಉತ್ತಮ ಪ್ಯಾಕೆಜ್ ನೀಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News