ಹಾಸನ: ಊಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ; ಯುವಕನ ಕೊಲೆಯಲ್ಲಿ ಅಂತ್ಯ

Update: 2022-01-18 16:08 GMT
ಮೃತ ಯುವಕ ಶರತ್ 

ಹಾಸನ: ಪೂಜೆ ಮಾಡಿ ಬಾಡೂಟ ಹಾಕಿದ್ದು, ಊಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಯುವಕನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಅರಸೀಕೆರೆ ತಾಲೂಕಿನ ಪುರ್ಲೆಹಳ್ಳಿ ಗ್ರಾಮದ ಶರತ್ (29) ಕೊಲೆಯಾದ ಯುವಕನೆಂದು ತಿಳಿದು ಬಂದಿದೆ.

ಕಳೆದ ರವಿವಾರ ಶರತ್ ಸಂಬಂಧಿಕರಿಂದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚೌಡೇಶ್ವರಿ ದೇಗುಲದಲ್ಲಿ ಪೂಜೆಯನ್ನು ಏರ್ಪಡಿಸಿ ಬಾಡುಟವನ್ನು ಹಾಕಿದ್ದರು. ಆದರೇ ನಮ್ಮನ್ನು ಊಟಕ್ಕೆ ಕರೆದಿಲ್ಲ ಎಂದು ನಟರಾಜು ಎಂಬವರು ಜಗಳ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಗ್ರಾಮದ ಹಿರಿಯರು ಜಗಳ ಬಿಡಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.

ಘಟನೆಯಿಂದ ಕೆಂಡಾಮಂಡಲವಾಗಿದ್ದ ನಟರಾಜು ಮತ್ತು ಇತರರು ಶರತ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶರತ್ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಪುರಲೆಹಳ್ಲಿಯ ಧನಪಾಲ್, ಅರ್ಜುನ್, ನಟರಾಜ್, ಮಂಜುನಾಥ ಮತ್ತಿತರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಅರಸೀಕೆರೆ ತಾಲ್ಲೂಕಿನ ಬಾಣಾವರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮುಂದಿನ ತನಿಖೆ ಕೈಗೊಂಡಿರುವುದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News