2 ದಶಕಗಳಿಂದ ಪ್ರತ್ಯೇಕವಾಗಿದ್ದ ದಂಪತಿಗೆ ವಿಚ್ಛೇದನ

Update: 2022-01-18 17:42 GMT

ಬೆಂಗಳೂರು, ಜ.18: ಬರೋಬ್ಬರಿ ಎರಡು ದಶಕಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿಗೆ ಹೈಕೋರ್ಟ್ ವಿಚ್ಛೇದನ ನೀಡಿ ಆದೇಶಿಸಿದ್ದು, ಈ ಸಂಬಂಧವನ್ನು ಒಗ್ಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದೆ.

ಹಿಂದೂ ವಿವಾಹ ಕಾಯ್ದೆ-1955ರ ಅಡಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ತರೀಕೆರೆಯ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ದಂಪತಿಗೆ ಪ್ರಸ್ತುತ 56 ವರ್ಷ ವಯಸ್ಸಾಗಿದೆ. ಪತಿ ಪತ್ನಿ ಸತತ 21 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಅವಧಿಯಲ್ಲಿ ದಂಪತಿಯಲ್ಲಿ ಯಾರೊಬ್ಬರೂ ತಮ್ಮ ವೈವಾಹಿಕ ಹಕ್ಕುಗಳ ಪುನರ್ ಸ್ಥಾಪನೆಗೆ ಪ್ರಯತ್ನಿಸಿಲ್ಲ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಕೂಡ ತಮ್ಮ ವೈವಾಹಿಕ ಹಕ್ಕುಗಳನ್ನು ಪುನರ್‍ಸ್ಥಾಪಿಸಲು ಕೋರಿ ಅರ್ಜಿ ಸಲ್ಲಿಸಿಲ್ಲ.

ಬದಲಿಗೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾಸಿಕ 3 ಸಾವಿರ ಇದ್ದ ಜೀವನಾಂಶ ಇದೀಗ 20 ಸಾವಿರಕ್ಕೆ ಏರಿಕೆಯಾಗಿದೆ. ಪತಿ 2ನೆ ಮದುವೆಯಾಗಿದ್ದು, ಅವರಿಗೀಗ ಇಬ್ಬರು ಮಕ್ಕಳಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ನಿಯ ಕೋರಿಕೆಯನ್ನು ಪರಿಗಣಿಸಿದರೆ ದಂಪತಿ ಇಷ್ಟು ವರ್ಷ ಕಳೆದುಕೊಂಡಿರುವ ನೆಮ್ಮದಿ ಮತ್ತಷ್ಟು ಹಾಳಾಗಲಿದೆ. ಹೀಗಾಗಿ, ವಿಚ್ಛೇದನಕ್ಕೆ ಇದು ಅರ್ಹ ಪ್ರಕರಣವಾಗಿದೆ ಎಂದು ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪತಿಯ ಕೋರಿಕೆಯಂತೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿದ್ದು, ಪತಿ ತನ್ನ ವಿಚ್ಛೇದಿತ ಪತ್ನಿಗೆ ನಾಲ್ಕು ತಿಂಗಳಲ್ಲಿ 30 ಲಕ್ಷ ಜೀವನಾಂಶ ನೀಡುವಂತೆಯೂ ನಿರ್ದೇಶಿಸಿದೆ ಎಂದು ತೀರ್ಪಿನಲ್ಲಿ ಹೇಳಿದೆ.

ಏನಿದು ಪ್ರಕರಣ?: 1999ರ ಜೂ.24ರಂದು ಚಿಕ್ಕಮಗಳೂರಿನ ಕಡೂರಿನಲ್ಲಿ ದಂಪತಿಯ ವಿವಾಹ ಜರುಗಿತ್ತು. ಇದಾದ ಎರಡೇ ತಿಂಗಳಿನಲ್ಲಿ ಪತ್ನಿ ಪತಿಯನ್ನು ತೊರೆದು ತವರು ಮನೆ ಸೇರಿದ್ದರು. ನಾಲ್ಕು ವರ್ಷಗಳ ಬಳಿಕ ಪತಿ 2003ರಲ್ಲಿ ವಿವಾಹ ವಿಚ್ಛೇದನ ಕೋರಿ ತರೀಕೆರೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪತಿ ಅರ್ಜಿ ಸಲ್ಲಿಸಿದ್ದಾಗ ಪತ್ನಿ ಯಾವುದೇ ಆಕ್ಷೇಪಣೆ ಎತ್ತಿರಲಿಲ್ಲ. ಹೀಗಾಗಿ, ವಿಚಾರಣಾ ನ್ಯಾಯಾಲಯ ಎಕ್ಸ್ ಪಾರ್ಟಿ ಪರಿಗಣಿಸಿ 2004ರಲ್ಲಿ ವಿಚ್ಛೇದನ ನೀಡಿ ಆದೇಶಿಸಿತ್ತು.

ತದನಂತರ, ನ್ಯಾಯಾಲಯ ವಿಚ್ಛೇದನ ನೀಡಿದ ನಂತರ ಅದನ್ನು ಆಕ್ಷೇಪಿಸಿ ಪತ್ನಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News