ಸಾಲ ವಸೂಲಾತಿ, ಠೇವಣಿದಾರರ ಹಿತಕಾಪಾಡಲು ಸರಕಾರದಿಂದ ಅಗತ್ಯ ನೆರವು: ಸಚಿವ ಎಸ್.ಟಿ.ಸೋಮಶೇಖರ್

Update: 2022-02-09 18:36 GMT

ಬೆಂಗಳೂರು, ಫೆ.9: ಠೇವಣಿದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲ ಮರುಪಾವತಿ ಹಾಗೂ ವಂಚನೆ ಎಸಗಿರುವವರ ವಿರುದ್ಧ ಕ್ರಮಕೈಗೊಳ್ಳುವ ಕುರಿತಂತೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಶ್ರೀ ವಶಿಷ್ಟ ಸೌಹಾರ್ದ ಸಹಕಾರಿ ನಿ. ಬೆಂಗಳೂರು ಇದರ ಅವ್ಯವಹಾರಗಳು ಹಾಗೂ ಪುನಶ್ಚೇತನ ಕುರಿತು ಪರಾಮರ್ಶಿಸಲು ವಿಕಾಸಸೌಧ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈ ಎರಡು ಬ್ಯಾಂಕುಗಳಲ್ಲಿ ನಡೆದಿರುವ ವಂಚನೆ, ಅವ್ಯವಹಾರ, ಹಣ ದುರುಪಯೋಗ ಮಾಡಿರುವವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳುವುದರ ಜೊತೆಗೆ ಹಣ ವಸೂಲಾತಿ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಅವಶ್ಯವಿರುವ ಎಲ್ಲ್ಲ ರೀತಿಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸೋಮಶೇಖರ್ ಭರವಸೆ ನೀಡಿದರು.

ಬ್ಯಾಂಕ್ ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆಸ್ತಿಗಳನ್ನು ಪತ್ತೆಹಚ್ಚಿ ಮುಟುಗೋಲು ಹಾಕಿಕೊಳ್ಳುವುದರ ಜೊತೆಗೆ ಅವರ ಮೇಲೆ ಕಾನೂನುರೀತ್ಯ ಕ್ರಮಕೈಗೊಳ್ಳಬೇಕು. ಆದಷ್ಟು ಶೀಘ್ರ ರೀಆಡಿಟ್ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅಕ್ರಮವೆಸಗಿರುವ ಪ್ರಮುಖ 24 ಆರೋಪಿಗಳ ಹೆಸರು ಮತ್ತು ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತಾಗಬೇಕು. ಸಾಲ ವಸೂಲಾತಿ, ಠೇವಣಿದಾರರ ಹಿತ ಕಾಪಾಡುವಲ್ಲಿ ಸರಕಾರ, ಆರ್‍ಬಿಐ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಠೇವಣಿದಾರರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿರಬೇಕು. ಆಡಳಿತಾಧಿಕಾರಿಗಳು ಖರ್ಚು ವೆಚ್ಚಗಳನ್ನು ನಿಭಾಯಿಸಲು ಆರ್‍ಬಿಐ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದು ಸೋಮಶೇಖರ್ ಹೇಳಿದರು.

ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿರುವವರಲ್ಲಿ ಶೇ.95ರಷ್ಟು ಜನ ಹಿರಿಯ ನಾಗರಿಕರು. ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮವಹಿಸಬೇಕು. ಪ್ರಮುಖ 24 ಆರೋಪಿಗಳಿಂದ 900 ಕೋಟಿ ರೂ.ಗೂ ಅಧಿಕ ಹಣ ವಸೂಲಿಯಾಗಬೇಕಿದೆ ಎಂದು ಹೇಳಿದರು.

ಪ್ರಕರಣದ ಕುರಿತು ಫಾರೆನ್ಸಿಕ್ ಆಡಿಟ್ ನಡೆಯುತ್ತಿದೆ. ಸಾಲ ಮರುಪಾವತಿ ಮಾಡದವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 42 ಜನರ ಬಂಧನವಾಗಿದೆ. 9500 ಖಾತೆಗಳನ್ನು ಸೀಜ್ ಮಾಡಲಾಗಿದೆ. ಪ್ರಮುಖ 24 ಆರೋಪಿಗಳ ಆಸ್ತಿಗಳನ್ನು ಪರಭಾರೆ ಮಾಡದಂತೆ ನೋಂದಣಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಸಿಐಡಿ ವಿಚಾರಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಮಾ.15ರೊಳಗೆ 5 ವರ್ಷದ ರೀಆಡಿಟ್ ಮುಕ್ತಾಯ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಶ್ರೀ ವಶಿಷ್ಟ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣಕಾಸು ಅಕ್ರಮಗಳು ಕಂಡುಬಂದಿವೆ. ಒಬ್ಬರೇ ಲೆಕ್ಕಪರಿಶೋಧಕರು ನಿಯಮಬಾಹಿರವಾಗಿ ಲೆಕ್ಕಪರಿಶೋಧನೆ ಮಾಡಿರುವುದು ಗಮನಕ್ಕೆ ಬಂದ ಬಳಿಕ ಅವರನ್ನು ಸಮಿತಿಯಿಂದ ಹೊರಹಾಕಲಾಗಿದೆ. ಒಂದು ಎಫ್‍ಐಆರ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖುದ್ದು ನಿಗಾ ವಹಿಸಿದ್ದಾರೆ. ಆರ್‍ಬಿಐನಿಂದ ಅಗತ್ಯವಿರುವ ನೆರವು ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಫೆ.25ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಈ ಕುರಿತು ಸಹಕಾರ ಸಚಿವ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದಾರೆ ಎಂದರು.

ಸಭೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಹಕಾರ ಸಂಘಗಳ ನಿಬಂಧಕ ಝೀಯಾವುಲ್ಲಾ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕ ಆದರ್ಶ್ ಕುಮಾರ್, ಆರ್‍ಬಿಐನ ಪಟ್ಟಣ ಬ್ಯಾಂಕುಗಳ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತ್ಸ್ನಾ, ರಮಾಕುಮಾರಿ, ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಆಡಳಿತಾಧಿಕಾರಿ ಅಶೋಕನ್, ಶ್ರೀ ವಶಿಷ್ಟ ಸೌಹಾರ್ದ ಸಹಕಾರಿ ನಿಯಮಿತದ ವಿಶೇಷಾಧಿಕಾರಿ ನಾರಾಯಣ ಹೆಗ್ಡೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News