ಸ್ವಾತಂತ್ರ್ಯ ಹೋರಾಟದಲ್ಲಿ ಮುಲ್ಲಾಗಳು ಗಾಂಧೀಜಿಗೆ ಹೆಗಲಾಗಿದ್ದರು: ಪ್ರತಾಪ್ ಸಿಂಹಗೆ ಖಾದರ್ ತಿರುಗೇಟು

Update: 2022-02-14 12:51 GMT
ಪ್ರತಾಪ್ ಸಿಂಹ / ಯು.ಟಿ.ಖಾದರ್

ಮಂಗಳೂರು, ಫೆ.14: ನನ್ನನ್ನು ಮುಲ್ಲಾ ಎಂದು ಸಂಸದ ಪ್ರತಾಪ್ ಸಿಂಹ ಕರೆದರೆ ನಾನು ಖುಷಿಪಡುತ್ತೇನೆ. ಯಾಕೆಂದರೆ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೂರಾರು ಮುಲ್ಲಾಗಳು ಗಾಂಧೀಜಿಗೆ ಹೆಗಲಾಗಿದ್ದರು. ಹತ್ತಾರು ಮುಲ್ಲಾ, ಮೌಲ್ವಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ತನ್ನ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಯು.ಟಿ.ಖಾದರ್ ಈಗ ಇತಿಹಾಸಕ್ಕೆ ಬರೋಣ.. ಈಗೇನಾದರೂ ಸಾವರ್ಕರ್ ಬದುಕಿದ್ದರೆ ಮೈಸೂರು ರೈಲಿಗೆ ಟಿಪ್ಪುಎಕ್ಸೃ್ಪ್ರೆಸ್ ಎಂದು ಹೆಸರು ಇರಬೇಕು ಎಂದು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು. ಈ ದೇಶಕ್ಕೆ ಬ್ರಿಟಿಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪುಎಂದು ಸಾವರ್ಕರ್ ಹೇಳುತ್ತಾರೆ. (ಪುಸ್ತಕ : ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857- ಲೇಖಕರು : ಸಾವರ್ಕರ್). ಅದೇ ಪುಸ್ತಕದಲ್ಲಿ ಸಾವರ್ಕರ್ ಮುಲ್ಲಾಗಳ ಬಗ್ಗೆಯೂ ಬರೆಯುತ್ತಾರೆ. ಮುಲ್ಲಾಗಳು ಬೋಧಿಸಿದ, ಬ್ರಾಹ್ಮಣರು ಆಶೀರ್ವಾದಿಸಿದ ದೆಹಲಿಯ ಮಸೀದಿಗಳು ಮತ್ತು ಬನಾರಸ್ ದೇವಸ್ಥಾನಗಳಿಂದ ಪ್ರಾರ್ಥನೆ ಮತ್ತು ತತ್ವಗಳು ಯಾವುದು? ಅದೇ ಸ್ವಧರ್ಮ ಮತ್ತು ಸ್ವರಾಜ್ ಎಂದು ಬರೆಯುತ್ತಾರೆ ಎಂದಿದ್ದಾರೆ.

ನಾನೇನೋ ಉಳ್ಳಾಲದ ಮುಲ್ಲಾ. ಆದರೆ ಬುದ್ಧಿವಂತ ಸಂಸದ ಪ್ರತಾಪ್ ಸಿಂಹ ಈಗ ಸಾವರ್ಕರ್ ಅವರನ್ನು ಒಪ್ಪುತ್ತಾರೋ ಇಲ್ಲವೋ ಹೇಳಲಿ ಎಂದು ಯು.ಟಿ.ಖಾದರ್ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News