ಕೇಂದ್ರ ಬಜೆಟ್ ಯುವ ಜನಾಂಗದಲ್ಲಿನ ಸಾಮರ್ಥ್ಯ, ಉದ್ಯಮಶೀಲ ಸ್ಫೂರ್ತಿಯನ್ನು ಗುರುತಿಸುತ್ತದೆ: ನಿರ್ಮಲಾ ಸೀತಾರಾಮನ್

Update: 2022-03-08 15:55 GMT
ನಿರ್ಮಲಾ ಸೀತಾರಾಮನ್

ಬೆಂಗಳೂರು, ಮಾ.8: ಸ್ವಾತಂತ್ರ್ಯೋತ್ಸವದ 75 ವರ್ಷ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ 25 ವರ್ಷಗಳ ಕಾಲ ಅತ್ಯಂತ ನಿರ್ಣಾಯಕವಾದುದು. ಆದುದರಿಂದ, 2022-23ನೆ ಸಾಲಿನ ಬಜೆಟ್‍ನಲ್ಲಿ ನಾವು ಯುವಜನರ ಶಕ್ತಿಯನ್ನು ಹಾಗೂ ಅವರಲ್ಲಿನ ಉದ್ಯಮಶೀಲತೆಯನ್ನು ಉತ್ತೇಜಿಸಲು ಬಯಸಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಂಗಳವಾರ ಇಂಡಿಯನ್ ಗ್ಲೋಬಲ್ ಫೋರಂ ವೇದಿಕೆಯಲ್ಲಿ “ಭಾರತದ ಜಾಗತಿಕ ಭವಿಷ್ಯಕ್ಕೆ ಆರ್ಥಿಕ ನೆರವು” ಕುರಿತಂತೆ ಮಾತನಾಡಿದ ಅವರು, ಲಾಕ್ ಡೌನ್ ನಡುವೆಯೂ ನಾವು ಎರಡು ವರ್ಷಗಳಲ್ಲಿ 45 ಯುನಿಕಾರ್ನ್‍ಗಳನ್ನು ನಿರ್ವಹಿಸಿದ್ದೇವೆ. ಅದು ವಾಸ್ತವವಾಗಿ ಯುವಜನತೆಯ ಶಕ್ತಿ ಮತ್ತು ಅವರ ಚಿಂತನೆಗಳ ಸಾಮಥ್ರ್ಯವಾಗಿದೆ” ಎಂದು ಹೇಳಿದರು.

ಕ್ರಿಪ್ಟೋ  ವಲಯಕ್ಕೆ ಸಂಬಂಧಿಸಿದಂತೆ ಸರಕಾರದ ನಿಲುವಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ರಿಪ್ಟೋ  ವಲಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆಗಳು ಪ್ರಗತಿಯಲ್ಲಿವೆ ಮತ್ತು ಇದರಲ್ಲಿ ಉದ್ಯಮವೂ ಪಾಲ್ಗೊಳ್ಳಬೇಕು. ಸಾಕಷ್ಟು ಭಾರತೀಯರು ಕ್ರಿಪ್ಟೋ  ನಲ್ಲಿ ಭವಿಷ್ಯವನ್ನು ಕಾಣುತ್ತಿದ್ದಾರೆ. ಆದುದರಿಂದ, ಇದು ಆದಾಯಗಳಿಸಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2022-23ರ ಹಿಂದಿನ ಆಶಯವನ್ನು ವಿಸ್ತೃತವಾಗಿ ವಿವರಿಸಿದ ಅವರು, ಜನಸಾಮಾನ್ಯರಿಗೆ ಲಭ್ಯವಿರುವ ಸವಲತ್ತುಗಳು ತಂತ್ರಜ್ಞಾನ ಆಧಾರಿತವಾಗಿರುತ್ತವೆ ಮತ್ತು ಅವಕಾಶಗಳನ್ನು ಒದಗಿಸುತ್ತವೆ ಹಾಗೂ ದೇಶದಲ್ಲಿ ಉದ್ಯೋಗಗಳನ್ನು ಉತ್ತೇಜಿಸುವುದು ಬಜೆಟ್ ಗುರಿ ಖಾತ್ರಿಪಡಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ದೇಶದ ಸಾಮಾನ್ಯ ಜನರೂ ಕೂಡ ತಮ್ಮನ್ನು ತಾವು ಡಿಜಿಟಲೀಕೃತ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಸಿಕೊಂಡಿದ್ದಾರೆ, ಇದು ಆರ್ಥಿಕತೆಯ ಡಿಜಿಟಲೀಕರಣ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. “ಈ ದೇಶದ ಸಾಮಾನ್ಯ ಜನರೂ ಸಹ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಕ್ಯೂಆರ್ ಕೋಡ್ ಇತ್ಯಾದಿಗಳನ್ನು ತಮ್ಮಷ್ಟಕ್ಕೇ ತಾವೇ ಅಳವಡಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ. ಲಾಕ್ ಡೌನ್ ವೇಳೆ ನೇರವಾಗಿ ಹಣ ವರ್ಗಾವಣೆಗೆ ಡಿಜಿಟಲ್ ಬ್ಯಾಂಕಿಂಗ್ ಸಹಕಾರಿಯಾಯಿತು” ಎಂದು ಅವರು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News