ಎಸಿಬಿ ದಾಳಿ ಕಣ್ಣೊರೆಸುವ ತಂತ್ರ, ಭ್ರಷ್ಟರಿಗೆ ಶಿಕ್ಷೆ ಆಗುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮಾ.22: ಪದೇ ಪದೆ ಎಸಿಬಿ ದಾಳಿ ನಡೆಯುತ್ತಿದೆ. ಕೋಟಿ ಕೋಟಿ ಹಣ, ಚಿನ್ನಾಭರಣ, ಆಸ್ತಿ ವಶಕ್ಕೆ ಪಡೆಯಲಾಗುತ್ತಿದೆ. ಆದರೆ ಎಷ್ಟು ಜನಕ್ಕೆ ಶಿಕ್ಷೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಇಂದು ಬೆಳಗ್ಗೆ ನಡೆದಿರುವ ಎಸಿಬಿ ದಾಳಿಯ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸಿಬಿಯಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳು ನೋಡುತ್ತಿದ್ದೇನೆ. ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ? ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ? ಕೇವಲ ಎಸಿಬಿ ದಾಳಿ ನಡೆಸಿದರೆ ಉಪಯೋಗ ಇಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಕೇವಲ ಕಣ್ಣೊರೆಸುವ ತಂತ್ರವಾಗಿ ಎಸಿಬಿ ದಾಳಿ ನಡೆಯುತ್ತಿದೆ ಎಂದು ಹೇಳಿದರು.
ಎಸಿಬಿ ದಾಳಿ ತೋರ್ಪಡಿಕೆಗೆ ನಡೆಯುತ್ತಿದೆ. ಇದರಿಂದ ಯಾವುದೇ ಪರಿಣಾಮ ಆಗುತ್ತಿಲ್ಲ. ಭ್ರಷ್ಟರಿಗೆ ಶಿಕ್ಷೆ ಆದರೆ ಜನರಿಗೆ ಇಂಥ ದಾಳಿಗಳ ಮೇಲೆ ನಂಬಿಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.