ಬಿಜೆಪಿಯವರು ಸಂವಿಧಾನಕ್ಕಿಂತ ದೊಡ್ಡವರೆ: ರಾಮಲಿಂಗಾರೆಡ್ಡಿ ಪ್ರಶ್ನೆ

Update: 2022-04-04 12:54 GMT
ರಾಮಲಿಂಗಾರೆಡ್ಡಿ 

ಬೆಂಗಳೂರು, ಎ.4: ಈಗ ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರವನ್ನು ಎತ್ತಿದ್ದಾರೆ. ಇದು ಇಂದು ನಿನ್ನೆಯ ಉದ್ಭವಿಸಿರುವ ವಿಚಾರವಲ್ಲ. ಬಹಳ ಹಿಂದೆಯೇ ಚರ್ಚೆಗೆ ಬಂದಿದೆ. ಸುಪ್ರೀಂ ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮಾನದಂಡ ವಿಧಿಸಿ ಅನುಮತಿ ನೀಡಿದೆ. ಬಿಜೆಪಿಯವರು ಸಂವಿಧಾನಕ್ಕಿಂತ ದೊಡ್ಡವರಾಗಿದ್ದರೆ ಅವರು ಹೇಳಿದಂತೆ ಕೇಳಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ. ಬೆಲೆ ಏರಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಹೋರಾಟ ಮಾಡುತ್ತಿದೆ, ಇದೆಲ್ಲವನ್ನು ಮರೆ ಮಾಚಲು, ಹಿಜಾಬ್, ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಿಗಳಿಗೆ ನಿಷೇಧ, ಹಲಾಲ್ ಕಟ್ ವಿಚಾರ ತೆಗೆದಿದ್ದು, ಈಗ ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರವನ್ನು ಎತ್ತಿದ್ದಾರೆ ಎಂದರು.

ಮಸೀದಿಗಳ ಧ್ವನಿವರ್ಧಕ ವಿಚಾರ ಇಂದು ನಿನ್ನೆಯ ಉದ್ಭವಿಸಿರುವ ವಿಚಾರವಲ್ಲ. ಬಹಳ ಹಿಂದೆಯೇ ಚರ್ಚೆಗೆ ಬಂದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು, ಸುಪ್ರೀಂ ಕೋರ್ಟ ತೀರ್ಪು ಕೊಟ್ಟ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯು ಧ್ವನಿವರ್ಧಕಗಳ ಶಬ್ದದ ಪ್ರಮಾಣಕ್ಕೆ ಮಿತಿ ಹೇರಿ ಆದೇಶ ಹೊರಡಿಸಿದೆ. ಅದರ ಪ್ರಕಾರ ಕೈಗಾರಿಕಾ ಪ್ರದೇಶಗಳಲ್ಲಿ ಮಸೀದಿ ಇದ್ದರೆ ಹಗಲು ವೇಳೆ 75 ಡಿಸಬಲ್ ವರೆಗೂ ರಾತ್ರಿ ವೇಳೆ 70ರಷ್ಟು ಇಡಬಹುದು. ವಾಣಿಜ್ಯ ಪ್ರದೇಶಗಳಲ್ಲಿ ಹಗಲು ವೇಳೆ 65 ಹಾಗೂ ರಾತ್ರಿ 55ರ ಪ್ರಮಾಣದಲ್ಲಿ ಇಡಬಹುದು. ವಸತಿ ಪ್ರದೇಶಗಳಲ್ಲಿ ಹಗಲು ವೇಳೆ 55 ಹಾಗೂ ರಾತ್ರಿ ವೇಳೆ 45ರಷ್ಟು, ಆಸ್ಪತ್ರೆಗಳಿರುವ ನಿಶ್ಯಬ್ದ ಪ್ರದೇಶಗಳಲ್ಲಿ ಬೆಳಗ್ಗೆ ವೇಳೆ 50 ಹಾಗೂ ರಾತ್ರಿ ವೇಳೆ 40ರಷ್ಟು ಡಿಸಬಲ್‍ನಷ್ಟು ಧ್ವನಿವರ್ಧಕ ಹಾಕಬಹುದು ಎಂದು ನಮ್ಮ ಸರಕಾರವೇ ಆದೇಶ ಹೊರಡಿಸಿತ್ತು.

ಇದು ಕೇವಲ ಮಸೀದಿಗಳಿಗೆ ಮಾತ್ರವಲ್ಲ ಸಭೆ, ಸಮಾರಂಭಗಳಲ್ಲಿ ಯಾರಿಗೂ ತೊಂದರೆ ಆಗಬಾರದು ಎಂದು ಕ್ರಮ. ಈ ಮಾನದಂಡದ ಅಡಿಯಲ್ಲಿ ಧ್ವನಿವರ್ಧಕ ಹಾಕಲು ಕಾನೂನಿನ ಅಡಿಯಲ್ಲಿ ಅವಕಾಶ ನೀಡಿದ್ದು, ಇದನ್ನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಈ ಹಿಂದೆ ಅನೇಕರಿಗೆ ಇಂತಹ ವಿಚಾರವಾಗಿ ನೋಟಿಸ್ ನೀಡಲಾಗಿದೆ. ಈಗ ಬಹುತೇಕ ಕಡೆಗಳಲ್ಲಿ ಮೈಕ್‍ಗಳಿಗೆ ಈ ಪ್ರಮಾಣದಲ್ಲಿ ಶಬ್ದ ಹೆಚ್ಚಾಗಿ ಬಾರದಂತೆ ಮಾಡಲಾಗಿದೆ.

ಬಿಜೆಪಿಯವರು ಕೇವಲ ಇಲ್ಲಿಗೆ ನಿಲ್ಲಿಸುವುದಿಲ್ಲ. ಇಂತಹ ಇನ್ನು ಅನೇಕ ಭಾವನಾತ್ಮಕ ವಿಚಾರಗಳನ್ನು ಹುಡುಕಿ ಚರ್ಚೆಗೆ ತರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ಪ್ರಯತ್ನಗಳು ಮುಂದುವರಿಯಲಿವೆ ಎಂದರು.  

ಮಾಧ್ಯಮಗಳು ಸರಿಯಾಗಲಿ...

‘ಮಾಧ್ಯಮಗಳು ನಾವು ಎತ್ತುವ ಧ್ವನಿಯನ್ನು ಸರಿಯಾಗಿ ಜನರಿಗೆ ತೋರಿಸಿದರೆ ಸಾಕು. ನಾವು ಸರಕಾರದ ಜನ ವಿರೋಧಿ ಕೆಲಸಗಳನ್ನು ಪ್ರಶ್ನಿಸುತ್ತಿದ್ದು, ಮಾಧ್ಯಮಗಳು ನಮಗೆ ಪ್ರಚಾರ ನೀಡಬೇಕು ಅಷ್ಟೇ. ಉದಾಹರಣೆಗೆ 2ಜಿ ಹಾಗೂ ಕಲ್ಲಿದ್ದಲು ವಿಚಾರದಲ್ಲಿ ಹಗರಣ ನಡೆಯದಿದ್ದರೂ ಹಗರಣ ನಡೆದಿದೆ ಎಂದು ಮಾಧ್ಯಮಗಳು ದೊಡ್ಡ ಪ್ರಮಾಣದ ಪ್ರಚಾರ ಕೊಟ್ಟವು. ಅದರ ಹೋರಾಟದಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಆದರು, ಕಿರಣ್ ಬೇಡಿ ರಾಜ್ಯಪಾಲರಾಗಿದ್ದಾರೆ. ಅಣ್ಣಾ ಹಜಾರೆ ಬಾಬಾ ರಾಮ್‍ದೇವ್ ಅವರು ಪತ್ತೆ ಇಲ್ಲ. 2014ರಲ್ಲಿ ಬಿಜೆಪಿ ಸರಕಾರ ಬಂದ ನಂತರ ತನಿಖೆ ಮಾಡಿದಾಗ ಯಾರಿಗೂ ಶಿಕ್ಷೆ ಆಗಲಿಲ್ಲ. ಕಾರಣ ಯಾವುದೇ ಹಗರಣ ನಡೆದಿರಲಿಲ್ಲ’ ಎಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಸರಿಯಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಮಾಧ್ಯಮದ ಪ್ರಶ್ನೆಗೆ ರಾಮಲಿಂಗಾರೆಡ್ಡಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News