ಮಂಡ್ಯ: ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರ ಕತ್ತರಿಸಿ 20 ಲಕ್ಷ ರೂ. ದರೋಡೆ

Update: 2022-04-12 07:50 GMT

ಮಂಡ್ಯ : ಎಟಿಎಂ  ಯಂತ್ರವನ್ನು ಕತ್ತರಿಸಿ ಸುಮಾರು  20 ಲಕ್ಷ ರೂ. ದೋಚಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಪಟ್ಟಣದ ಮದ್ದೂರು ಮೆಡಿಕಲ್ ಸೆಂಟರ್ (ಸಿದ್ದೇಗೌಡ ನರ್ಸಿಂಗ್ ಹೋಂ) ಬಳಿ ಇರುವ ಎಸ್.ಬಿ.ಐ. ಎಟಿಎಂ ಕೇಂದ್ರಕ್ಕೆ ತಡರಾತ್ರಿ ನುಗ್ಗಿರುವ ದರೋಡೆಕೋರರು ಮೊದಲು ಸಿ‌ಸಿ ಕ್ಯಾಮೆರಾಕ್ಕೆ ಹಾನಿ ಮಾಡಿ, ನಂತರ ಯಂತ್ರವನ್ನು ಗ್ಯಾಸ್ ಕಟ್ಟರ್ ನಿಂದ ಕತ್ತರಿಸಿ  ಹಣವನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಎಟಿಎಂ ಕೇಂದ್ರವನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಆಗಮಿಸಿದಾಗ  ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮದ್ದೂರು ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ವರ್ಷ ಮೇ 22 ರಂದು ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ನ ಎಸ್.ಬಿ.ಐ. ಎಟಿಎಂ ಕೇಂದ್ರದಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಆದರೆ ಇಲ್ಲಿಯವರೆಗೆ ಆರೋಪಿಗಳ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News