ಸರಕಾರ ಬಸವಪಥದಲ್ಲಿ ಮುನ್ನಡೆಯುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

Update: 2022-05-07 17:37 GMT
ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 7: ‘ಕಾಯಕದಲ್ಲಿಯೇ ಸ್ವರ್ಗವನ್ನು ಕಾಣುವ, ಸಮಾನತೆ, ಸಮಾನ ಅವಕಾಶಗಳನ್ನು ಒದಗಿಸುವ ಹಾಗೂ ಸೈದ್ಧಾಂತಿಕ ಮತ್ತು ವೈಜ್ಞಾನಿಕ ಚಿಂತನೆ ಮಾಡುವ ಸಮಾಜ ನಿರ್ಮಾಣವನ್ನು ಬಸವಣ್ಣನವರು ಬಯಸಿದ್ದರು ಹಾಗೂ ಮಾಡಿದ್ದರು. ಹೀಗಾಗಿ ಬಸವಪಥದಲ್ಲಿಯೇ ನಮ್ಮ ಸರಕಾರ ಮುನ್ನಡೆಯುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭ ಹಾಗೂ ‘ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ' ಪ್ರದಾನ ಹಾಗೂ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸರಕಾರ ದುಡಿಯುವ ಅವಕಾಶವಿಲ್ಲದವರಿಗೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಆರ್ಥಿಕತೆ ಎಂದರೆ ದುಡ್ಡಲ್ಲ. ಅದು ಜನರ ದುಡಿಮೆ. ದುಡಿಮೆಯೇ ದೊಡ್ಡಪ್ಪ ಎಂದು ಬದಲಾಯಿಸುತ್ತಿದ್ದೇವೆ' ಎಂದು ತಿಳಿಸಿದರು.

‘ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಟೆಯಿಂದ ಮಾಡಿದರೆ, ಅದೇ ಪೂಜೆ ಹಾಗೂ ಸ್ವರ್ಗ ಎನ್ನುವುದು ಬಸವಣ್ಣನ ಚಿಂತನೆ. ಮುಂದಿನ ವರ್ಷ ಬಸವ ಪ್ರಶಸ್ತಿ ಸಮಾರಂಭವನ್ನು ರಾಷ್ಟ್ರ ಮಟ್ಟದಲ್ಲಿ ದಿಲ್ಲಿಯಲ್ಲ್ಲಿ ಹಮ್ಮಿಕೊಳ್ಳಬೇಕು' ಎಂದು ಅವರು ನುಡಿದರು. 

ಬಸವಣ್ಣನಿಂದ ಪ್ರಭಾವಿತ: ‘ನಮ್ಮ ಪ್ರಧಾನಿ ಮೋದಿ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎನ್ನುವ ಬಸವಣ್ಣನವರ ವಿಚಾರ ಹಾಗೂ ಕಾಯಕವೇ ಕೈಲಾಸ ಎಂಬ ಎರಡೂ ವಿಚಾರಗಳನ್ನು ಬೆರೆಸಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆ. ಬಸವಣ್ಣ ಅವರ ಪ್ರಭಾವ ಪ್ರಧಾನಿಗೆ ಇದೆ. ನೂತನ ಸಂಸತ್ತಿಗೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಅವರು ಮ್ಯಾಗ್ನಾ ಕಾರ್ಟಕ್ಕೂ ಮುನ್ನ ಅನುಭವ ಮಂಟಪವನ್ನು ಬಸವಣ್ಣ ರೂಪಿಸಿದ್ದರು ಎಂದು ಉಲ್ಲೇಖಿಸಿದ್ದರು' ಎಂದು ಬೊಮ್ಮಾಯಿ ಸ್ಮರಿಸಿದರು. 

ಮಾನವತಾವಾದಿ: ‘ಬಸವಣ್ಣ ಇಂದಿನ ಎಲ್ಲ ಸಮಸ್ಯೆಗಳಿಗೂ ತನ್ನ ವಚನದಲ್ಲಿ ಪರಿಹಾರ ನೀಡಿದ್ದಾರೆ. ಪಾಶ್ಚಿಮಾತ್ಯ ದೇಶದ ಟೆನ್ ಕಮಾಂಡ್‍ಮೆಂಟ್ಸ್‍ಗಳನ್ನು ಹೇಳುವ ಮುನ್ನವೇ ಸರಳವಾಗಿ ಬಸವಣ್ಣ ನಮಗೆ ಹೇಳಿದ್ದಾರೆ. ಕಾಯಕವೇ ಕೈಲಾಸ ದಯಯೇ ಧರ್ಮದ ಮೂಲ ಎಂದು ಬದುಕಿನ ಅರ್ಥವನ್ನು ಹೇಳಿಕೊಟ್ಟಿದ್ದಾರೆ. ದುಡಿಮೆ ಮಾಡಿ, ಹಂಚಿ ತಿನ್ನಬೇಕು ಎನ್ನುವ ತತ್ವವಿದೆ. ಎಲ್ಲಿಯೂ ಶೇಖರಣೆ ಮಾಡಬೇಕೆಂದು ಹೇಳಿಲ್ಲ. ಆಧ್ಯಾತ್ಮಿಕವಲ್ಲದೆ, ಆರ್ಥಿಕ, ಸಾಮಾಜಿಕ, ಚಿಂತನೆಯನ್ನು ಮಾಡಿದ್ದಾರೆ. ದೊಡ್ಡ ಸಾಮಾಜಿಕ ಪರಿವರ್ತನೆಯ ಹರಿಕಾರರು. ಎಲ್ಲಕ್ಕಿಂತ ಮುಖ್ಯವಾಗಿ ಬಹುದೊಡ್ಡ ಮಾನವತಾವಾದಿ' ಎಂದರು. 

‘ಹಲವು ಕಂದಾಚಾರಗಳನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಅದು ಸಮಯದ ವ್ಯರ್ಥವೂ ಹೌದು. ಮಾನಸಿಕ ವೇದನೆಯೂ ಹೌದು. ನಮ್ಮ ಭವಿಷ್ಯ, ಚಿಂತನೆ, ಬದುಕನ್ನು ನಾವು ನಿಯಂತ್ರಣ ಮಾಡಬೇಕು. ಇನ್ನೊಬ್ಬರ ಕೈಗೆ ಕೊಡುವುದಲ್ಲ. ಯಾರೋ ಬಂದು ಭವಿಷ್ಯ ಬದಲಾಯಿಸುತ್ತಾರೆಂಬ ಭ್ರಮೆ ಇರಬಾರದು. ಇದು ಬಸವಣ್ಣನವರ ಚಿಂತನೆ. ಮಧ್ಯವರ್ತಿಗಳನ್ನು ದೂರ ಮಾಡಿ. ಅತ್ಯಂತ ಕ್ಲಿಷ್ಟವಾದ ಚಿಂತನೆಯನ್ನು, ಕನ್ನಡ ಭಾಷೆಯಲ್ಲಿ ಸರಳವಾದ ವಚನಗಳ ಮೂಲಕ ಹೇಳಿದರು ಎಂದರು. 

ಆತ್ಮಾವಲೋಕನಕ್ಕೆ ಸಕಾಲ: ‘ನಾವೆಲ್ಲರೂ ಬಸವಣ್ಣನವರ ಬಗ್ಗೆ ಬಹಳ ಒಳ್ಳೆ ಮಾತುಗಳನ್ನಾಡುತ್ತೇವೆ. ವಚನಗಳನ್ನು ನಿರರ್ಗಳವಾಗಿ ಹೇಳುತ್ತೇವೆ. ಆದರೆ ಆಚರಣೆಯಲ್ಲಿ ಎಷ್ಟು ಹಿಂದುಳಿದಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುತ್ತೇವೆ. ಅಂದರೆ, ಅಸಮಾನತೆ, ಲಿಂಗಭೇದ, ಮೂಢನಂಬಿಕೆಗಳ ವಿರುದ್ಧ ಅವರು ಮಾಡಿದ ಹೋರಾಟ, ಬಸವಣ್ಣನವರು ಮಾಡಿದ್ದ ವೈಚಾರಿಕ ಕ್ರಾಂತಿ ಎಲ್ಲವೂ ಪ್ರಸ್ತುತ ಎಂದ ಹಾಗಾಯಿತು. 800 ವರ್ಷಗಳಾದರೂ ನಾವಿನ್ನೂ ಅದೇ ಸ್ಥಾನದಲ್ಲಿ ಇದ್ದೇವೆಂದರೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ತಿಳಿಸಿದರು.

ಸಮಾರಂಭದಲ್ಲಿ ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು.  ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಪದ್ಮಶ್ರೀ ಡಾ. ನಾಗೇಂದ್ರ ಅವರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಬೀದರನ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಹ್ಲಾದ ಜೋಷಿ, ವಸತಿ ಸಚಿವ ವಿ.ಸೋಮಣ್ಣ, ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಬಸವ ವೇದಿಕೆ ಅಧ್ಯಕ್ಷರಾದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಅಂಕಣಕಾರ ಕೆ. ಷಡಕ್ಷರಿ ಮತ್ತು ಇತರರು ಉಪಸ್ಥಿತರಿದ್ದರು. 

‘ಬಸವಣ್ಣನವರ ಅನುಯಾಯಿಗಳು ಈ ಬಗ್ಗೆ ಹೆಚ್ಚಿನ ವಿಚಾರ ಮಾಡಬೇಕಿದೆ. ಬಸವಣ್ಣನವರ ವೈಚಾರಿಕ ಚಿಂತನೆಯನ್ನು ನಾವು ಸಮಾಜದಲ್ಲಿ ಆಚರಣೆಗೆ ತರುವಂಥ ಪ್ರಯತ್ನಗಳ ಕಾರ್ಯಕ್ರಮ ರೂಪಿಸುವ ಕಾಲ ಬಂದಿದೆ. ಬಸವಣ್ಣ ಮೊದಲು ತನ್ನ ಅಂತಃಕರಣವನ್ನು ಶುದ್ಧಿ ಮಾಡಿಕೊಂಡರು. ಅವರೂ ನಮ್ಮಂತೆಯೇ ಮನುಷ್ಯರಾಗಿ ಹುಟ್ಟಿದ್ದು. ಯಾರೂ ಅವರನ್ನು ದೇವರನ್ನಾಗಿ ಮಾಡಲು ಹೋಗಬೇಡಿ. ಅವರು ಈಗಾಗಲೇ ದೇವರ ಸ್ಥಾನದಲ್ಲಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ಸನ್ಮಾರ್ಗದಲ್ಲಿ ಹೋದರೆ, ದೇವ ಮಾನವನಾಗಬಲ್ಲ. ದೇವರೇ ಆಗಬಲ್ಲ ಎಂದು ತೋರಿಸಿದ ಪ್ರೇರಣೆ ಅವರು. ಅವರು ಸಾವಿರ ಹೆಜ್ಜೆಗಳನ್ನು ನಡೆದರೆ ನಾವು ಒಂದು ಹೆಜ್ಜೆಯನ್ನಾದರೂ ನಡೆಯಲು ಪ್ರಯತ್ನ ಮಾಡಬೇಕು'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News