ಮೊಬೈಲ್ ಶಾಪ್‌ಗೆ ಕನ್ನ, ಚಿನ್ನದ ಅಂಗಡಿ ಕಳವು ಯತ್ನ

Update: 2022-05-18 16:51 GMT

ಕುಂದಾಪುರ, ಮೇ 18: ಕೋಟೇಶ್ವರ ಹಾಗೂ ಬೀಜಾಡಿಯಲ್ಲಿ ಮೇ ೧೮ರಂದು ನಸುಕಿನ ವೇಳೆ ಕಳ್ಳರು ಮೂರು ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಕುಂಭಾಶಿ ಕಡೆಯಿಂದ ಕಾರಿನಲ್ಲಿ ಬಂದ ಅಪರಿಚಿತರ ತಂಡ ಬೀಜಾಡಿ ಐಸಿರಿ ಮೊಬೈಲ್ ಶಾಪ್‌ನ ಶೆಟರ್ ಮುರಿದು ೧೫ ಸಾವಿರ ರೂ. ನಗದು, ಸುಮಾರು ೨೫ ಸಾವಿರ ರೂ. ಮೌಲ್ಯದ ಮೊಬೈಲ್, ೩೦ ಸಾವಿರ ರೂ. ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಕಳವು ಮಾಡಿದ್ದಾರೆನ್ನಲಾಗಿದೆ.

ಬಳಿಕ ಕಳ್ಳರು, ಕೋಟೇಶ್ವರ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಸಮೀಪದ ಉಪಾಧ್ಯಾಯ ಕಾಂಪ್ಲೆಕ್ಸ್‌ನಲ್ಲಿನ ಶ್ರೀದುರ್ಗಾ ಜ್ಯುವೆಲ್ಲರ್ಸ್‌ ಶೆಟರ್ ಮುರಿದು ಚಿನ್ನ-ಬೆಳ್ಳಿ ದೋಚಲು ಯತ್ನಿಸಿದ್ದು, ಪತ್ರಿಕೆ ಹಾಕುವ ಹುಡುಗನ ಸಮಯ ಪ್ರಜ್ಞೆಯಿಂದ ಲಕ್ಷಾಂತರ ಮೌಲ್ಯದ ಭಾರೀ ಕಳ್ಳತನ ತಪ್ಪಿದಂತಾಗಿದೆ.

ಅದೇ ರೀತಿ ಕೋಟೇಶ್ವರದಲ್ಲಿನ ಜುವೆಲ್ಲರಿ ಶಾಪ್‌ನ ಶೆಟರ್ ಮುರಿಯಲು ಪ್ರಯತ್ನ ಮಾಡಿದ್ದಾರೆ. ಇದಲ್ಲದೇ ಪಕ್ಕದಲ್ಲಿದ್ದ ಅಂಗಡಿಯ ಬಾಗಿಲು ಮುರಿದು ೧ ಸಾವಿರ ನಗದು ಮತ್ತು ಸಿಗರೇಟ್‌ಗಳನ್ನು ದೋಚಿದ್ದಾರೆ. ಕಳ್ಳತನ ಕೃತ್ಯಕ್ಕೆ ಬಳಸಿದ ಕಾರು ಚಿನ್ನದ ಅಂಗಡಿ ಕಡೆಗೆ ಬರುವ ದೃಶ್ಯ ಹಾಗೂ ಸಿಸಿ ಕ್ಯಾಮರವನ್ನು ತಿರುಗಿಸಿದ ದೃಶಗಳು ಸಿಸಿಯಲ್ಲಿ ಸೆರೆಯಾಗಿದೆ. ಎಲ್ಲ ಸಿಸಿ ಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಕೆ., ವೃತ್ತ ನೀರಿಕ್ಷಕ ಗೋಪಿಕೃಷ್ಣ, ಪಿಎಸ್‌ಐ ಸದಾಶಿವ ಗವರೋಜಿ, ಬೆರಳಚ್ಚು ತಂಡ, ಶ್ವಾನದಳ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News