ಪಠ್ಯ ಪುಸ್ತಕ ಮರು ಪರಿಷ್ಕರಣೆ ವಿರೋಧಿಸಿ ಸಾಹಿತಿಗಳಿಂದ ಬಹಿರಂಗ ಪತ್ರ

Update: 2022-05-20 15:01 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: 'ಪಠ್ಯ ಪುಸ್ತಕ ರಚನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಮೌಲ್ಯಗಳು ನೀತಿಗಳು ಪ್ರಜಾತಾಂತ್ರಿಕತೆಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಬದಲಾದಂತೆ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಬದಲಾಯಿಸುವ ಈ ಪರಿಪಾಠ ಸರಿಯಲ್ಲ' ಎಂದು ಡಾ. ಕೆ. ಮರುಳಸಿದ್ಧಪ್ಪ, ಡಾ. ವಿಜಯಾ, ಡಾ. ರಾಜೇಂದ್ರ ಚೆನ್ನಿ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಗಣೇಶ್ ದೇವಿ, ಡಾ.ಬಂಜಗೆರೆ ಜಯಪ್ರಕಾಶ್, ದಿನೇಶ್ ಅಮೀನ್ ಮಟ್ಟು, ಕುಂ.ವೀರಭದ್ರಪ್ಪ, ಕೆ.ಷರೀಫಾ, ಪ್ರತಿಭಾ ನಂದಕುಮಾರ್, ಬಿ.ಸುರೇಶ್, ಕಾಳೇಗೌಡ ನಾಗವಾರ, ರಂಜಾನ್ ದರ್ಗಾ, ವಸುಂಧರಾ ಭೂಪತಿ, ಪುರುಷೋತ್ತಮ ಬಿಳಿಮಲೆ, ಎಚ್.ಎಸ್.ರಾಘವೇಂದ್ರರಾವ್, ಮಾವಳ್ಳಿ ಶಂಕರ್, ರಹಮತ್ ತರೀಕೆರೆ, ಲಕ್ಷ್ಮೀ ಚಂದ್ರಶೇಖರ್, ಕೇಸರಿ ಹರವೂ, ಕೆ.ಎಸ್.ವಿಮಲಾ ಸೇರಿದಂತೆ ನಾಡಿನ ಎಪ್ಪತ್ತೊಂದು ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು ಬಹಿರಂಗಪತ್ರವನ್ನು ಬರೆದಿದ್ದಾರೆ.

ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯು ಸಂಪೂರ್ಣವಾಗಿ ಶಿಕ್ಷಣ ತಜ್ಞರ ಮೂಲಕ ಮಾತ್ರ ನಡೆಯಬೇಕು ಎನ್ನುವುದು ಇಲ್ಲಿನ ಪ್ರಜ್ಞಾವಂತರ ಆಶಯವಾಗಿದೆ. ಭಾರತದ ಚುನಾವಣಾ ಆಯೋಗದ ರೀತಿಯಲ್ಲಿ ಈ ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು. ಇದು ಸರಕಾರದ ನಿಯಂತ್ರಣದಲ್ಲಿ ಇರಬಾರದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ. ಯಾವುದೇ ಪೂರ್ವಾಲೋಚನೆ ಇಲ್ಲದೇ ಶಿಕ್ಷಣ ತಜ್ಞರು, ವಿಷಯ ತಜ್ಞರುಗಳ ಜೊತೆ, ಹಿಂದಿನ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ಜೊತೆ ಸಮಾಲೋಚಿಸದೆ, ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರ ಮೂಲಕ ಪಠ್ಯಪುಸ್ತಕಗಳ ಬದಲಾವಣೆಗೆ ಮುಂದಾಗಿರುವುದು ನಮ್ಮ ಆತಂಕಕ್ಕೆ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸಂವಿಧಾನದ ಆಶಯಗಳ ಅನುಸಾರ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ರೂಪಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಬೇಕು. ಪಠ್ಯಗಳನ್ನು ಆಯ್ಕೆ ಮಾಡುವಾಗ ಲಿಂಗತ್ವ ಅಸಮಾನತೆ, ಪ್ರಾದೇಶಿಕ ಅಸಮಾನತೆಯನ್ನು ತಪ್ಪಿಸಬೇಕು. ಸಾಮಾಜಿಕ ನ್ಯಾಯದ ತತ್ವ ಪಾಲನೆಯಾಗಬೇಕು. ತರಗತಿಗಳ ಮಕ್ಕಳ ವಯೋಮಾನವನ್ನು ಆಧರಿಸಿ ಪಠ್ಯಗಳನ್ನು ಆಯ್ಕೆ ಮಾಡಬೇಕು. ಅದನ್ನು ಬಿಟ್ಟು, ಮಕ್ಕಳ ಮೇಲೆ ಯಾವುದೇ ರಾಜಕೀಯ, ಧಾರ್ಮಿಕ ಸಿದ್ಧಾಂತಗಳನ್ನು ಹೇರುವ ಪಠ್ಯಗಳನ್ನು ಆಯ್ಕೆ ಮಾಡಬಾರದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಲವು ಪಠ್ಯಗಳನ್ನು ಕೈ ಬಿಟ್ಟಿರುವ ಕುರಿತು ಶಿಕ್ಷಣ ಸಚಿವರಿಂದ ಉತ್ತರವೇ ಬರುತ್ತಿಲ್ಲ. ಹಾಗಾಗಿ ಅದು ಪೂರ್ವಗ್ರಹಪೀಡಿತವಾಗಿದೆ ಎಂದು ಹೇಳಬೇಕಿದೆ. ಇನ್ನು ಆರ್‍ಎಸ್‍ಎಸ್‍ನ ಹಿಂದುತ್ವ ಸಿದ್ಧಾಂತವನ್ನು ರೂಪಿಸಿದ ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವ ಔಚಿತ್ಯವೇನು ಎಂಬುದಕ್ಕೆ ಯಾವುದೇ ಸ್ಪಷ್ಟೀಕರಣವಿಲ್ಲ. ಬದಲಿಗೆ ಹೆಡಗೇವಾರ್ ಭಾಷಣ ಸೇರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಈ ವಿಷಯದಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲದಿರುವುದು ಪ್ರಶ್ನಾರ್ಹವಾಗಿದೆ. ಹಾಗೆಯೇ ಪಠ್ಯ ಪುಸ್ತಕಗಳ ಮುದ್ರಣವೇ ಆಗಿಲ್ಲ ಇವೆಲ್ಲ ವದಂತಿ ಎಂದು ನಿರಾಕರಿಸಿದ್ದಾರೆ ಎಂದೂ ವರದಿಗಳಿವೆ. ನಿಯಮದಂತೆ ಮೇ 25 ರೊಳಗೆ ಪಠ್ಯ ಪುಸ್ತಕ ಪೂರೈಕೆ ಆಗಬೇಕು. ಆದರೆ ಇನ್ನೂ ವಿವಾದವನ್ನೇ ಇಟ್ಟುಕೊಂಡಿರುವ ಸರಕಾರ ಪುಸ್ತಕ ಪೂರೈಸಬಹುದೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News