ಯಾವ ಮುಖ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ಕೇಳ್ತೀರಿ: ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ

Update: 2022-05-22 12:49 GMT

ಬೆಂಗಳೂರು, ಮೇ 22: ‘ಮಳೆ ಹಾನಿ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಎಲ್ಲವೂ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ‘ದಾವೋಸ್' ಪ್ರವಾಸದಲ್ಲಿದ್ದಾರೆ. ಯಾವ ಮುಖ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ವಿದೇಶಿ ಕಂಪೆನಿಗಳನ್ನು ಕೇಳುತ್ತಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ,ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯ, ನಾಯಂಡಹಳ್ಳಿ ಮೆಟ್ರೋ ಲೇಔಟ್ ಮತ್ತಿತರೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು ಅವರು, ‘ರಾಜ್ಯದಲ್ಲಿನ ಉದ್ಯಮಿಗಳು ದಿನ ಬೆಳಗಾದರೆ ಸರಕಾರಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಮಳೆ ಹಾನಿ ಹಿನ್ನೆಲೆಯಲ್ಲಿ ಸಿಎಂ, ಸಚಿವರು ಸುಮ್ಮನೆಕಣ್ಣು ಹೊರೆಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮತ ಹಾಕಿದವರಿಗೆ ಒಂದು, ವೋಟ್ ಹಾಕದವರಿಗೆ ಮತ್ತೊಂದು. ಶಾಸಕರಿಂದ ಜನರಿಗೆ ತಾರತಮ್ಯ ಧೋರಣೆಗೆ ಮಾಡಲಾಗುತ್ತಿದೆ' ಎಂದು ದೂರಿದ ಅವರು, ‘ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ' ಎಂದು ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಏಳು ಬಾರಿ ಹೊಸದಿಲ್ಲಿಗೆ ದಂಡೆತ್ತಿ ಹೋಗಿದ್ದಾರೆ. ಆದರೆ, ಯಾವುದೂ ಕೆಲಸ ಆಗಿಲ್ಲ ಎಂದು ಟೀಕಿಸಿದ ಅವರು, ಪ್ಲ್ಯಾಟ್‍ಗಳಲ್ಲಿ ಮಳೆ ನೀರು ತುಂಬಿ ಅಲ್ಲಿನ ನಿವಾಸಿಗಳು ಹೋಟೆಲ್‍ಗಳಲ್ಲಿ ಉಳಿಯುವ ಪರಿಸ್ಥಿತಿ ಇದೆ ಎಂದು ಕುಮಾರಸ್ವಾಮಿ ಇದೇ ವೇಳೆ ಕಳವಳ ವ್ಯಕ್ತಪಡಿಸಿದರು.

‘ಶಿವಮೊಗ್ಗ ನಗರದಲ್ಲೇ ಸಿಎಂ ಆಗಿದ್ದ ಜಿಲ್ಲೆಯಲ್ಲೇ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ಕೊಟ್ಟಿದ್ದಾರೆ. ಆದರೆ, ಇವತ್ತು ಅವರು(ಡಾ.ಅಶ್ವತ್ಥನಾರಾಯಣ) ವಿದೇಶ ಪ್ರವಾಸದಲ್ಲಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಈಗಿನ ಶಾಸಕ ಮೂರು ಬಾರಿ ಎಂಎಲ್‍ಎ ಆಗಿದ್ದಾರೆ. ಅಶ್ವತ್ಥ ನಾರಾಯಣ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಎಷ್ಟು ಅನುದಾನ ಹೋಗಿದೆ?' ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News