ಸಿಎಂ ಕುರ್ಚಿ ಉಳಿಸಿಕೊಳ್ಳಲು ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ನೀಡಿದ್ದಾರೆ: ಪ್ರಿಯಾಂಕ್ ಖರ್ಗೆ

Update: 2022-05-26 15:08 GMT

ಬೆಂಗಳೂರು, ಮೇ 26: ಬಿಜೆಪಿಯ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಭ್ರಷ್ಟಾಚಾರ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ. ಸಾರ್ವಜನಿಕರ ಹಣ ಲೂಟಿ ಮಾಡಿ ಇವರು ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ದಾವೋಸ್‍ನಲ್ಲಿ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರು ನಿಮ್ಮ ಸರಕಾರಕ್ಕೆ ಬಹುಮತ ಇದೆಯೇ ಎಂದು ಮುಖ್ಯಮಂತ್ರಿಯನ್ನು ಕೇಳಿದಾಗ ಸರಳ ಬಹುಮತ ಇದೆ ಎಂದಿದ್ದಾರೆ’ ಎಂದರು.

ಅದು ನಿಮಗೆ ತೊಂದರೆ ಆಗುವುದಿಲ್ಲವೇ ಎಂದು ಪುನಃ ಕೇಳಿದಾಗ, ಇಲ್ಲ ವಿರೋಧ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆಗ ನನಗೆ ಗೊತ್ತಾಯಿತು. ಬಿಜೆಪಿಯ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು  ಭ್ರಷ್ಟಾಚಾರ ಮಾಡಲು ಮುಕ್ತ ಅವಕಾಶ ನೀಡಿದ್ದಾರೆಂದು ಎಂದು ಅವರು ತಿಳಿಸಿದರು.

ಗಂಗಾಕಲ್ಯಾಣ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್‍ನವರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ ಕೇವಲ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ನಾವು ಹಿಟ್ ಅಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

ನಾವು ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡಿದಾಗ ಆರೋಪಪಟ್ಟಿ ಸಲ್ಲಿಸುತ್ತಾರೆ. ಪಿಎಸ್‍ಐ ಅಕ್ರಮದ ಬಗ್ಗೆ ಹೇಳಿದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತೀರಿ. ನಂತರ ನೀವೇ ತನಿಖಾ ತಂಡ ರಚನೆ ಮಾಡಿದ್ದೀರಿ. ಸುಮಾರು 50ಕ್ಕೂ ಹೆಚ್ಚು ಜನ ಅಧಿಕಾರಿಗಳು ಸೇರಿದಂತೆ ಇತರರ ಬಂಧನವಾಗಿದೆ. ಇದೆಲ್ಲವೂ ಹಿಟ್ ಅಂಡ್ ರನ್ ಹೇಗೆ ಆಗುತ್ತೆ? ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ 431 ಕೋಟಿಯ ಗಂಗಾ ಕಲ್ಯಾಣ ಯೋಜನೆ ರಾಜ್ಯದ ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾಡಲಾಗಿದ್ದು, ಈ 40 ಪರ್ಸ್ಸೆಂಟ್  ಸರಕಾರ ಇದರಲ್ಲೂ ಹಣ ದೋಚುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಮೇ 11ರಂದು ಈ ಪ್ರಕರಣದಲ್ಲಿನ ತನಿಖಾಧಿಕಾರಿಯಾದ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಾಥಮಿಕ ವರದಿ ಸಲ್ಲಿಸಿದ್ದು, ಅದರಲ್ಲಿ  ಭ್ರಷ್ಟಾಚಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು. 

ತನಿಖಾಧಿಕಾರಿಗಳು ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಸರಕಾರ ನೇಮಿಸಿರುವ ಅಧಿಕಾರಿಗಳೇ ಈ ವರದಿ ನೀಡಿದ್ದಾರೆ. ಈ ತನಿಖಾ ವರದಿಯಲ್ಲಿ ಗುತ್ತಿಗೆದಾರರ ವಾರ್ಷಿಕ ವಹಿವಾಟಿನ ಕುರಿತು ಪರಿಶೀಲನೆ ನಡೆಸಬೇಕು. ಕೆಲಸ ಮಾಡಿರುವ ಪ್ರಮಾಣ ಪತ್ರ ಪರಿಶೀಲಿಸಬೇಕು. ಇನ್ನು ಕೊಳವೆ ಬಾವಿ ಯಂತ್ರಗಳು 5 ಸ್ಟಾರ್ ಅಥವಾ 4 ಸ್ಟಾರ್ ಇರಬೇಕು. ಅದು ಕೂಡ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದವರು 30 ಪ್ಯಾಕೇಜ್‍ನಲ್ಲಿ 8 ಪ್ಯಾಕೇಜ್ ಮಾಹಿತಿ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದವರು 27 ಪ್ಯಾಕೇಜ್‍ನಲ್ಲಿ 18 ಪ್ಯಾಕೇಜ್ ಮಾಹಿತಿ ನೀಡಿದ್ದಾರೆ. ಆದಿ ಜಾಂಬವ ಅಭಿವೃದ್ಧಿ ನಿಗಮದವರು 7 ಪ್ಯಾಕೇಜ್ ಪೈಕಿ 2ರಲ್ಲಿ ಮಾಹಿತಿ ನೀಡಿದ್ದಾರೆ. ಆದರೆ, ತಾಂಡಾ ಅಬಿವೃದ್ಧಿ ನಿಗಮದವರು 14 ಪ್ಯಾಕೇಜ್ ಪೈಕಿ ಯಾವುದೆ ಮಾಹಿತಿ ನೀಡಿಲ್ಲ. ಈ ಯೋಜನೆಯಲ್ಲಿ ಬ್ರಹ್ಮಾಂಡ  ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇಲಾಖೆಯ ಆಂತರಿಕ ತನಿಖೆಯಲ್ಲೇ  ಭ್ರಷ್ಟಾಚಾರ ನಡೆದಿರುವ ಮಾಹಿತಿ ಬಂದಿದೆ ಎಂದರೆ, ನ್ಯಾಯಾಂಗ ತನಿಖೆಗೆ ಕೊಟ್ಟರೆ ಎಲ್ಲರ ಹೆಸರೂ ಬರುತ್ತದೆ. ಈ ತನಿಖೆ ಕೇವಲ ಯುಐಡಿಎ ಸಂಖ್ಯೆ ಮೇಲೆ ನಡೆದಿದ್ದು, ಆದಾಯ ತೆರಿಗೆ ದಾಖಲೆ ಪಡೆದು ಪರಿಶೀಲನೆ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. 

ಈ ಹಗರಣ ಆಗಲು ಸರ್ಕಾರ ಅಧೀನ ಕಾರ್ಯದರ್ಶಿ ಜ.2, 2021ರಂದು ಬರೆದ ಪತ್ರ. ಇದರಲ್ಲಿ ಈ ಟೆಂಡರ್ ನಿಯಮಾವಳಿ ಬದಲಿಸಲು ವ್ಯವಸ್ಥಾಪಕ ನಿರ್ದೇಶಕರು ಅಂಬೇಡ್ಕರ್ ಅಭಿವೃದ್ಧಿ ನಿಗಮದವರಿಗೆ ಪತ್ರ ಬರೆಯುತ್ತಾರೆ. ಇದೆಲ್ಲವನ್ನು ಸಮಾಜ ಕಲ್ಯಾಣ ಸಚಿವರ ಅನೋಮೋದಿತದ ಆಧಾರದ ಮೇಲೆ ಪತ್ರ ಬರೆಯಲಾಗಿದೆ ಎಂದು ತಿಳಿಸಲಾಗಿದೆ. ಅಂದಿನ ಸಮಾಜ ಕಲ್ಯಾಣ ಸಚಿವರು ಇದನ್ನು ಒಪ್ಪಿ ಬರೆಯುತ್ತಿದ್ದಾರೆ. ಆಗ ಶ್ರೀರಾಮುಲು ಅವರು ಸಚಿವರಾಗಿದ್ದರು. ಅವರಿಗೂ ಮುನ್ನ ಗೋವಿಂದ ಕಾರಜೋಳ ಅವರು ಇದ್ದರು. 

ಈಗ ಕೋಟಾ ಶ್ರೀನಿವಾಸ ಪೂಜಾರಿ ಅವರು ನಾನು ಪ್ರಾಮಾಣಿಕ ಎಂದು ಹೇಳುತ್ತಿದ್ದಾರೆ. ನೀವು ಪ್ರಾಮಾಣಿಕರೇ ಇರಬಹುದು. ಆದರೆ ಬೇರೆಯವರ ಅಕ್ರಮಕ್ಕೆ ನೀವ್ಯಾಕೆ ಬಲಿಪಶುವಾಗುತ್ತಿದ್ದೀರಿ? ಈ ಮೂವರೂ ಇದರಲ್ಲಿ ಭಾಗಿಯಾಗಿದ್ದು, ಈ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರು ಸದನದಲ್ಲೂ ಸುಳ್ಳು ಹೇಳಿದ್ದಾರೆ.

ಕಟೀಲ್ ಅವರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಬಿಟ್ ಕಾಯಿನ್, ಪಿಎಸ್ ಐ ಹಗರಣ, ಗಂಗಾ ಕಲ್ಯಾಣ ಹಗರಣದ ಬಗ್ಗೆ ಮಾತನಾಡಿದರೆ ಮೌನವಾಗುತ್ತಾರೆ.  ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಮೋದಿ ಅವರು ಹೇಳಿದ್ದಾರೆ ಎಂದು ಹೊಗಳುತ್ತಾರೆ. ಆದರೆ ಇಲ್ಲಿ ನಾನು ತಿಂದು ನಿಮಗೂ ತಿನ್ನಲು ಬಿಡುತ್ತೇನೆ ಎಂಬಂತೆ ನಡೆಯುತ್ತಿದೆ. ಇದಕ್ಕೆ ನಿಮ್ಮ ಸ್ಪಷ್ಟನೆ ಏನು?

ಮಾನ್ಯ ಸಮಾಜ ಕಲ್ಯಾಣ ಸಚಿವರೇ ನಿಮಗೆ ಗೌರವ ಇದ್ದರೆ ನೀವೇ ಸ್ಥಾನ ತ್ಯಾಗ ಮಾಡಬೇಕು. ಪರಿಶಿಷ್ಟರ ಹಣ ಲೂಟಿ ಮಾಡಿ ಏನು ಆಗಿಲ್ಲ ಎಂದು ಕಣ್ಣು ಮುಚ್ಚಿಕೊಂಡಿದ್ದೀರಿ. ನೀವು ಸ್ವಾಭಿಮಾನಿಗಳಿದ್ದರೆ, ನೀವೇ ರಾಜೀನಾಮೆ ನೀಡಿ, ಅವರಿಗೂ ರಾಜೀನಾಮೆ ಕೊಡಿಸಿ. ಇದು ಸಾಮಾಜ ಕಲ್ಯಾಣ ಇಲಾಖೆಯಲ್ಲ, ಸ್ವಯಂ ಕಲ್ಯಾಣ ಇಲಾಖೆಯಾಗಿದೆ.

ಈ ಅಕ್ರಮದಲ್ಲಿ ಭಾಗಿಯಾಗಿರುವ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಹಾಗೂ ಕೋಟ ಶ್ರೀನಿವಾಸ ಪೂಜಾರಿ ಇದರಲ್ಲಿ ಭಾಗಿಯಾಗಿದ್ದು, ಈ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರು ಸದನದಲ್ಲೂ ಸುಳ್ಳು ಹೇಳಿದ್ದಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News