ಬಿಕ್ಕಟ್ಟಿಗೆ ಪರಿಹಾರ ಭವಿಷ್ಯಕ್ಕೆ ಸಹಕಾರ: ಪರಿಸರ ಸಂರಕ್ಷಣೆ ಪ್ರತಿ ಮಾನವರ ಘೋಷಣೆಯಾಗಲಿ

Update: 2022-06-04 18:38 GMT

ಪ್ರಸ್ತುತ ಪರಿಸರ ಬಿಕ್ಕಟ್ಟಿನ ಸ್ವರೂಪ ಮತ್ತು ತೀವ್ರತೆಯ ಬಗ್ಗೆ ವ್ಯಾಪಕವಾದ ದೃಷ್ಟಿಕೋನಗಳು ಅಸ್ತಿತ್ವದಲ್ಲಿವೆ ಮತ್ತು ಕೆಲವು ಸಮಸ್ಯೆಗಳು ಹೆಚ್ಚು ವಿವಾದಾತ್ಮಕವಾಗಿವೆ ಎಂದು ಒತ್ತಿಹೇಳುವುದು ಅಗತ್ಯವಿದೆ. ಅದೇನೇ ಇದ್ದರೂ, ಪರಿಸರ ಬಿಕ್ಕಟ್ಟು ಈ ಕೆಳಗಿನ ಮುಖ್ಯ ಸಮಸ್ಯೆಗಳನ್ನು ಒಳಗೊಂಡಿದೆ ಎಂಬುದಂತೂ ಸತ್ಯ. ಪರಿಸರ ಬಿಕ್ಕಟ್ಟನ್ನು ವಿವಿಧ ಆಯಾಮಗಳಿಂದ ವಿಶ್ಲೇಷಿಸಬಹುದು.



ಪ್ರಸ್ತುತ ಭೂಮಿಯ ಪರಿಸರವು ಬಿಕ್ಕಟ್ಟಿನಲ್ಲಿದೆ. ಹಸಿರು ಗ್ರಹ ಎಂಬ ಹಣೆ ಪಟ್ಟಿ ಕಳಚಿಕೊಂಡು ಕ್ರಮೇಣವಾಗಿ ಬರಡು ಗ್ರಹವಾಗುತ್ತಿದೆ. ಪ್ರಸ್ತುತ ಪರಿಸರದ ಬಿಕ್ಕಟ್ಟು ಅದರ ಪ್ರಮಾಣ, ವೇಗ ಮತ್ತು ತೀವ್ರತೆ ಅಳತೆ ತಪ್ಪುತ್ತಿದೆ. ಪರಿಸರದ ಬಿಕ್ಕಟ್ಟಿನ ಅರಿವು 1970ರ ದಶಕದಿಂದಲೂ ಬೆಳೆಯುತ್ತಲೇ ಬಂದಿದೆ. 1970 ಮತ್ತು 1980 ರ ಸಹೇಲಿಯನ್ ಬರಗಳು ಮತ್ತು 1986ರಲ್ಲಿ ಚೆರ್ನೋಬಿಲ್‌ನಲ್ಲಿನ ಪರಮಾಣು ಅಪಘಾತದಂತಹ ಪ್ರಮುಖ ಪರಿಸರ ವಿಪತ್ತುಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜಾಗತಿಕ ಮಾನವ ಪರಿಸರ ವ್ಯವಸ್ಥೆಯು ಉತ್ಪಾದಕತೆಯಲ್ಲಿ ಮತ್ತು ಸರಕು ಮತ್ತು ಸೇವೆಗಳ ವಿತರಣೆಯಲ್ಲಿ ಗಂಭೀರ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ ಎಂಬ ಅಂಶವು ತಿಳಿದಿದೆ. ಮಾನವ ಜನಸಂಖ್ಯೆಯ ಹೆಚ್ಚಿನ ಪ್ರಮಾಣ ಬಡತನದಲ್ಲಿ ವಾಸಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಅವರ ನಡುವೆ ಹೆಚ್ಚುತ್ತಿರುವ ಅಂತರವು ಅಸ್ತಿತ್ವದಲ್ಲಿದೆ. ಜಾಗತಿಕ ಮಟ್ಟದಲ್ಲಿ ವೇಗವರ್ಧಿತ ಬದಲಾವಣೆಗಳು ಸಂಭವಿಸುತ್ತಿವೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದರಗಳು ಅಂತರ್‌ರಾಷ್ಟ್ರೀಯವಾಗಿ ಸಂಘಟಿತವಾದ ಪರಿಸರ ಉಸ್ತುವಾರಿಯನ್ನು ಸಾಧಿಸುವಲ್ಲಿ ಪ್ರಗತಿಯನ್ನು ಮೀರಿಸುತ್ತಿವೆ.

ಇದರ ಪರಿಣಾಮವಾಗಿ ಹೊಸ ತಂತ್ರಜ್ಞಾನಗಳಿಂದಾಗಿ ಪರಿಸರ ಸಂರಕ್ಷಣೆಯಲ್ಲಿನ ಸುಧಾರಣೆಗಳು ಮಾಯವಾಗುತ್ತಿವೆ. ಮಾನವ ಜನಸಂಖ್ಯೆಯ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಯ ಪ್ರಮಾಣ ಮತ್ತು ವೇಗದ ಪರಿಣಾಮವಾಗಿ, ವ್ಯಾಪಕವಾದ ಪರಿಸರ ಸಮಸ್ಯೆಗಳು ಹೊರಹೊಮ್ಮುತ್ತಿವೆ. ಆ ಸಮಸ್ಯೆಗಳೆಂದರೆ ಮಾನವಜನ್ಯ ಹವಾಮಾನ ಬದಲಾವಣೆ (ಗ್ಲೋಬಲ್ ವಾಮಿರ್ಂಗ್), ವಾಯುಮಂಡಲದ ಓರೆನ್ ಸವಕಳಿ, ಮೇಲ್ಮೈ ನೀರಿನ ಆಮ್ಲೀಕರಣ (ಆಮ್ಲ ಮಳೆ), ಉಷ್ಣವಲಯದ ಕಾಡುಗಳ ನಾಶ, ಜೀವ ಸಂತತಿಗಳ ವಿನಾಶ ಮತ್ತು ಜೀವವೈವಿಧ್ಯದ ತೀವ್ರ ಕುಸಿತ. ಆದರೂ, ಈ ಎಲ್ಲಾ ಸಮಸ್ಯೆಗಳು ಭೌತಿಕ (ಪರಿಸರ) ಅಭಿವ್ಯಕ್ತಿಗಳನ್ನು ಹೊಂದಿದ್ದರೂ, ಅವುಗಳ ಕಾರಣಗಳು ಮತ್ತು ಅವುಗಳ ಸಂಭಾವ್ಯ ಪರಿಹಾರಗಳು ಏಕರೂಪವಾಗಿ ಮಾನವ ವರ್ತನೆಗಳು, ನಂಬಿಕೆಗಳು, ಮೌಲ್ಯಗಳು, ಅಗತ್ಯಗಳು, ಆಸೆಗಳು, ನಿರೀಕ್ಷೆಗಳು ಮತ್ತು ನಡವಳಿಕೆಗಳೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ಪರಿಸರ ಬಿಕ್ಕಟ್ಟಿನ ಲಕ್ಷಣಗಳನ್ನು ಸಂಪೂರ್ಣವಾಗಿ ಭೌತಿಕ ಸಮಸ್ಯೆಗಳೆಂದು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಪರಿಸರ ತಜ್ಞರು ಪರಿಹಾರಗಳನ್ನು ಬಯಸುತ್ತಾರೆ. ಬದಲಾಗಿ, ಅವು ಆಂತರಿಕವಾಗಿ ಮಾನವ ಸಮಸ್ಯೆಗಳಾಗಿವೆ ಮತ್ತು ಅವು ಮಾನವರಾಗಿರುವುದು ಎಂದರೆ ಏನು ಎಂಬ ಪ್ರಶ್ನೆಗೆ ನಿಕಟವಾಗಿ ಸಂಬಂಧಿಸಿವೆ.

ಪ್ರಸ್ತುತ ಪರಿಸರ ಬಿಕ್ಕಟ್ಟಿನ ಸ್ವರೂಪ ಮತ್ತು ತೀವ್ರತೆಯ ಬಗ್ಗೆ ವ್ಯಾಪಕವಾದ ದೃಷ್ಟಿಕೋನಗಳು ಅಸ್ತಿತ್ವದಲ್ಲಿವೆ ಮತ್ತು ಕೆಲವು ಸಮಸ್ಯೆಗಳು ಹೆಚ್ಚು ವಿವಾದಾತ್ಮಕವಾಗಿವೆ ಎಂದು ಒತ್ತಿಹೇಳುವುದು ಅಗತ್ಯವಿದೆ. ಅದೇನೇ ಇದ್ದರೂ, ಪರಿಸರ ಬಿಕ್ಕಟ್ಟು ಈ ಕೆಳಗಿನ ಮುಖ್ಯ ಸಮಸ್ಯೆಗಳನ್ನು ಒಳಗೊಂಡಿದೆ ಎಂಬುದಂತೂ ಸತ್ಯ. ಪರಿಸರ ಬಿಕ್ಕಟ್ಟನ್ನು ವಿವಿಧ ಆಯಾಮಗಳಿಂದ ವಿಶ್ಲೇಷಿಸಬಹುದು.

ಹವಾಮಾನ ಬದಲಾವಣೆ: ಹಸಿರುಮನೆ ಅನಿಲಗಳು ಮತ್ತು ಇತರ ಮಾಲಿನ್ಯಕಾರಕ ವಾತಾವರಣದ ಮಾಲಿನ್ಯದಿಂದಾಗಿ ಮಾನವಜನ್ಯ ಹವಾಮಾನ ಬದಲಾವಣೆಯು ಈಗ ಪ್ರಮುಖ ಜಾಗತಿಕ ಪರಿಸರ ಸಮಸ್ಯೆಗಳಲ್ಲಿ ಒಂದಾಗಿದೆ. ಪಳೆಯುಳಿಕೆ ಇಂಧನಗಳ ದಹನ, ಕೃಷಿ ಮತ್ತು ಪಶುಪಾಲನೆಯಿಂದ ಮೇಲ್ಮಣ್ಣಿನ ಸವೆತ ಮತ್ತು ಅರಣ್ಯಗಳ ನಾಶಗಳ ಪರಿಣಾಮವಾಗಿ ಹವಾಮಾನ ಬದಲಾವಣೆ ಸಂಭವಿಸುತ್ತದೆ. ಹವಾಮಾನ ಬದಲಾವಣೆಯು ಈಗಾಗಲೇ ಗಮನಿಸಬಹುದಾದ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ಹೊಂದಿದೆ. ಅದರ ಯೋಜಿತ ಪರಿಣಾಮಗಳು ಜಾಗತಿಕ ಸರಾಸರಿ ಮೇಲ್ಮೈ ತಾಪಮಾನ, ಸಮುದ್ರ ಮಟ್ಟ, ಸಾಗರ ಪರಿಚಲನೆ, ಮಳೆಯ ಮಾದರಿಗಳು, ಹವಾಮಾನ ವಲಯಗಳು, ಜೀವಿಗಳ ಹಂಚಿಕೆ ಮತ್ತು ಪರಿಸರ ವ್ಯವಸ್ಥೆಯ ಕಾರ್ಯದಲ್ಲಿ ಆಳವಾದ ಬದಲಾವಣೆಗಳಿಗೆ ಕಾರಣವಾಗಬಹುದು.

ವಾಯುಮಂಡಲದ ಓರೆನ್ ಸವಕಳಿ: ಹ್ಯಾಲೊ ಕಾರ್ಬನ್‌ಗಳಿಂದ (ಕ್ಲೋರೋ ಫ್ಲೋರೋ ಕಾರ್ಬನ್‌ಗಳು) ವಾಯುಮಂಡಲದ ಓರೆನ್‌ನ ಸವಕಳಿಯು ಮತ್ತೊಂದು ಗಂಭೀರ ಪರಿಸರ ಸಮಸ್ಯೆಯಾಗಿದೆ. ಹೆಚ್ಚಿನ ಎತ್ತರದಲ್ಲಿ ರಕ್ಷಣಾತ್ಮಕ ಓರೆನ್ ಕೊರತೆಯು ಅಪಾಯಕಾರಿ ಸೌರ ನೇರಳಾತೀತ ವಿಕಿರಣವು ಭೂಮಿಯ ಮೇಲ್ಮೈಯನ್ನು ತಲುಪುತ್ತದೆ. ಇದು ಆರೋಗ್ಯ ಸಂಬಂಧಿತ ಮತ್ತು ಪರಿಸರಕ್ಕೆ ಮಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.

ಹದಗೆಟ್ಟ ಗಾಳಿಯ ಗುಣಮಟ್ಟ: ವಾಯುಮಾಲಿನ್ಯದ ಇತರ ರೂಪಗಳು ಸಹ ಗಮನಾರ್ಹವಾಗಿವೆ. ಗಾಳಿಯ ಗುಣಮಟ್ಟವು ಇಂದು ಗಂಭೀರವಾಗಿ ಹದಗೆಟ್ಟಿದೆ. ಪ್ರಪಂಚದಾದ್ಯಂತ ಸರಿಸುಮಾರು ಒಂದು ಶತಕೋಟಿ ಜನರು ಕೈಗಾರಿಕಾ ಪ್ರದೇಶಗಳಂತಹ ಅನಾರೋಗ್ಯಕರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅನೇಕ ವಾಯು ಮಾಲಿನ್ಯಕಾರಕಗಳು ಗಾಳಿಯ ಗುಣಮಟ್ಟದ ಅವನತಿಗೆ ಕಾರಣವಾಗಿವೆ. ಈ ಮಾಲಿನ್ಯಕಾರಕಗಳು ಉಸಿರಾಟ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಉಂಟುಮಾಡುತ್ತವೆ ಅಥವಾ ಉಲ್ಬಣಗೊಳಿಸುತ್ತವೆ. ಅಲ್ಲದೆ ಕೆಲವು ಸಸ್ಯವರ್ಗಕ್ಕೆ ಹಾನಿಯನ್ನು ಉಂಟುಮಾಡುತ್ತವೆ. ಕ್ಷೀಣಿಸಿದ ನೀರಿನ ಗುಣಮಟ್ಟ: ಮಾಲಿನ್ಯಕಾರಕಗಳೊಂದಿಗೆ ಕಲುಷಿತಗೊಳ್ಳುವ ಮೂಲಕ ನೀರಿನ ಗುಣಮಟ್ಟವು ಗಂಭೀರವಾಗಿ ಹದಗೆಟ್ಟಿದೆ. ಇದು ಆರೋಗ್ಯ ಸಂಬಂಧಿತ ಮತ್ತು ಪರಿಸರ ಪರಿಣಾಮಗಳನ್ನು ಉಂಟುಮಾಡುತ್ತದೆ. ಜಲಮಾಲಿನ್ಯದ ಪ್ರಮುಖ ಮೂಲವೆಂದರೆ ಅನೇಕ ಕರಾವಳಿ ಸ್ಥಳಗಳಲ್ಲಿ ಸಂಭವಿಸುವ ಕಡಲತೀರದ ನೀರಿಗೆ ಭೂಮಿಯ ಹರಿವು. ಅಂತಹ ಹರಿವು ಕೃಷಿ ಭೂಮಿಯಿಂದ ಮತ್ತು ಮಾನವ ವಸಾಹತುಗಳಿಂದ ಸಾರಜನಕ ಮತ್ತು ರಂಜಕವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಗಣಿಗಾರಿಕೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳು ಸೇರಿದಂತೆ ಮಾನವನ ಇತರ ಚಟುವಟಿಕೆಗಳೂ ಜಲಮಾಲಿನ್ಯಕ್ಕೆ ಕಾರಣವಾಗಿವೆ. ಇದು ವಿಷಕಾರಿ ತ್ಯಾಜ್ಯವನ್ನು ಉಂಟುಮಾಡುತ್ತದೆ. ತೈಲ ಸೋರಿಕೆಗಳು, ಪ್ಲಾಸ್ಟಿಕ್‌ಗಳ ಶೇಖರಣೆ ಮತ್ತು ನಿರಂತರ ಸಾವಯವ ರಾಸಾಯನಿಕಗಳ ಜೈವಿಕ ಸಂಗ್ರಹಣೆಯು ಸಮುದ್ರ ಪರಿಸರದ ಗಂಭೀರ ಅವನತಿಗೆ ಕಾರಣಗಳಾಗಿವೆ.

ಸಿಹಿನೀರಿನ ಕೊರತೆ: ಸಿಹಿನೀರಿನ ಮೂಲಗಳ ಮಾಲಿನ್ಯದ ಜೊತೆಗೆ, ಪ್ರಪಂಚದ ಅನೇಕ ಭಾಗಗಳಲ್ಲಿ ಕುಡಿಯಲು ಸಿಹಿನೀರಿನ ಕೊರತೆಗೆ ಬೇರೆ ಬೇರೆ ಕಾರಣಗಳಿವೆ. ಅವುಗಳಲ್ಲಿ ಹಲವು ಕಳಪೆ ನೀರಿನ ಸಂಪನ್ಮೂಲ ನಿರ್ವಹಣೆ ಅಭ್ಯಾಸಗಳಿಗೆ ಸಂಬಂಧಿಸಿವೆ. ಉದಾಹರಣೆಗೆ, ನದಿಗಳಿಂದ ನೀರನ್ನು ಅತಿಯಾಗಿ ಹೊರತೆಗೆಯುವುದರಿಂದ ನೀರಿನ ಕೊರತೆ ಮತ್ತು ಕೆಳಭಾಗದ ಲವಣಾಂಶದ ಸಮಸ್ಯೆಗಳು ಉಂಟಾಗುತ್ತವೆ. ನೀರಾವರಿ ಪದ್ಧತಿಗಳು ಸ್ಥಳೀಯ ನೀರಿನ ಮೂಲಗಳ ಸವಕಳಿಗೆ ಮತ್ತು ನೀರಾವರಿ ಭೂಮಿಯ ಲವಣಾಂಶಕ್ಕೆ ಕಾರಣವಾಗುತ್ತವೆ. ಜಾಗತಿಕ ಮಟ್ಟದಲ್ಲಿ ನೀರಿನ ಭದ್ರತೆಯಲ್ಲಿ ವ್ಯಾಪಕ ವ್ಯತ್ಯಾಸಗಳು ಅಸ್ತಿತ್ವದಲ್ಲಿವೆ. ಇದು ಶುದ್ಧ ನೀರಿನ ಬೇಡಿಕೆ ಮತ್ತು ನೀರು ಸರಬರಾಜು, ಬಳಕೆ ಮತ್ತು ವಿತರಣೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯ ಪ್ರಮಾಣ ಎರಡನ್ನೂ ಪ್ರತಿಬಿಂಬಿಸುತ್ತದೆ.

ಭೂಮಿ ಮಾಲಿನ್ಯ: ರಾಸಾಯನಿಕ ಅಥವಾ ವಿಕಿರಣಶೀಲ ಮಾಲಿನ್ಯದ ಪರಿಣಾಮವಾಗಿ ಭೂ ಮಾಲಿನ್ಯ ಸಂಭವಿಸುತ್ತದೆ. ವಿಶೇಷವಾಗಿ ಮಣ್ಣಿನಲ್ಲಿ ಪ್ರವೇಶಿಸುವ ದೀರ್ಘಕಾಲೀನ (ನಿರಂತರ) ರಾಸಾಯನಿಕ ಪ್ರಭೇದಗಳಿಂದ ಭೂಮಾಲಿನ್ಯವು ವ್ಯಾಪಕತೆಗೊಳ್ಳುತ್ತಿದೆ. ಭೂಮಿಯ ಮಾಲಿನ್ಯವು ಆಳವಾದ ಪರಿಸರ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಇದು ಅಭಿವೃದ್ಧಿಗೆ ತೀವ್ರ ನಿರ್ಬಂಧಗಳನ್ನು ಒದಗಿಸುತ್ತದೆ. ಕೇವಲ ಕೃಷಿಗಾಗಿ ಬಳಕೆಯಾಗುತ್ತಿದ್ದ ಭೂಮಿ ಇಂದು ಕಟ್ಟಡ ನಿರ್ಮಾಣ ಅಥವಾ ಮನರಂಜನೆಗಾಗಿ ಹೆಚ್ಚು ಬಳಸಲಾಗುತ್ತಿವೆ.

ಅರಣ್ಯನಾಶ:  ಪ್ರಪಂಚದ ಅರ್ಧದಷ್ಟು ಪ್ರಬುದ್ಧ ಕಾಡುಗಳನ್ನು ಮಾನವರು ತೆರವುಗೊಳಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅರಣ್ಯನಾಶವು ವಿವಿಧ ಕಾರಣಗಳಿಗಾಗಿ ಸಂಭವಿಸುತ್ತದೆ, ಆದರೆ ಹೆಚ್ಚಿನ ಅರಣ್ಯನಾಶವು ಈಗ ಉಷ್ಣವಲಯದ ಕಾಡುಗಳು ಕೃಷಿ ಮತ್ತು ಪಶುಪಾಲನೆಯಂತಹ ಮಾನವ ಚಟುವಟಿಕೆಗಳಿಂದ ಸಂಭವಿಸಿವೆ. ಇದ್ದಿಲು ಉತ್ಪಾದನೆಗೆ ಮರಗಳ ನಾಶ ಮತ್ತು ನಾಟಾಗಳಿಗಾಗಿ ಅರಣ್ಯಗಳ ನಾಶವೂ ಸೇರಿವೆ. ಉಷ್ಣವಲಯದ ಕಾಡುಗಳು ಭೂಮಿಯ ಮೇಲ್ಮೈಯ ಸುಮಾರು ಶೇ.6ರಷ್ಟು ಭಾಗವನ್ನು ಮಾತ್ರ ಆವರಿಸಿವೆ. ಕಾಡುಗಳು ಜಾಗತಿಕ ಪರಿಸರ ವ್ಯವಸ್ಥೆ ಮತ್ತು ಜೀವಗೋಳದ ಅತ್ಯಗತ್ಯ ಭಾಗವಾಗಿವೆ. ಅವು ಹವಾಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಕಾಡುಗಳ ಸವೆತದಿಂದ ಮಣ್ಣನ್ನು ರಕ್ಷಿಸುತ್ತವೆ ಮತ್ತು ಅಪಾರ ಸಂಖ್ಯೆಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆವಾಸಸ್ಥಾನ ವಾಗಿವೆ. ಒಂದು ಅಂದಾಜಿನ ಪ್ರಕಾರ ಪ್ರಪಂಚದ ಶೇ.90ರಷ್ಟು ಪ್ರಭೇದಗಳು ಉಷ್ಣವಲಯದ ಕಾಡುಗಳಲ್ಲಿ ಕಂಡುಬರುತ್ತವೆ.

ಭೂ ಬಳಕೆಯ ಬದಲಾವಣೆ ಮತ್ತು ಆವಾಸಸ್ಥಾನದ ನಷ್ಟ: 
ಅರಣ್ಯನಾಶದಂತಹ ಇತರ ಸಮಸ್ಯೆಗಳೊಂದಿಗೆ ಈ ಸಮಸ್ಯೆಗಳು ಅತಿಕ್ರಮಿಸುತ್ತವೆ. ಆದರೆ ಕೃಷಿ ಮತ್ತು ಪಶುಪಾಲನೆಗಾಗಿ ಅರಣ್ಯದ ತೆರವು, ನಗರ ಬೆಳವಣಿಗೆಯ ಸಮಯದಲ್ಲಿ ಭೂಮಿಯ ರೂಪಾಂತರ, ಹೊಸ ಮೂಲಸೌಕರ್ಯಗಳ ಅಭಿವೃದ್ಧಿ (ಉದಾಹರಣೆಗೆ ರಸ್ತೆಗಳು, ಒಳಚರಂಡಿ), ಹೀಗೆ ವಿವಿಧ ಕಾರಣಗಳಿಗಾಗಿ ಭೂ ಬಳಕೆಯು ಬದಲಾಗುತ್ತಿದೆ. ಇದರಿಂದ ಪರಿಸರದ ಬಿಕ್ಕಟ್ಟು ಉಲ್ಬಣಿಸುತ್ತಿದೆ. ಜೀವವೈವಿಧ್ಯದ ನಷ್ಟ: ಜೀವಿಗಳಲ್ಲಿ ರೋಗಗಳ ಹರಡುವಿಕೆ, ಅವುಗಳ ಆವಾಸಸ್ಥಾನಗಳ ನಾಶ ಮತ್ತು ಅವನತಿ ಮತ್ತು ನೇರ ಶೋಷಣೆಯಿಂದಾಗಿ ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. 1999ರಲ್ಲಿ, UNEP (1999) ವಿಶ್ವದ ಸಸ್ತನಿ ಪ್ರಭೇದಗಳ ಕಾಲು ಭಾಗದಷ್ಟು ಮತ್ತು ಪ್ರಪಂಚದ ಹತ್ತನೇ ಒಂದು ಭಾಗದಷ್ಟು ಪಕ್ಷಿ ಪ್ರಭೇದಗಳು ಸಂಪೂರ್ಣ ಅಳಿವಿನ ಅಪಾಯವನ್ನು ಎದುರಿಸುತ್ತಿವೆ ಎಂದು ಅಂದಾಜಿಸಿತ್ತು. ಜೀವವೈವಿಧ್ಯಕ್ಕೆ ತೊಂದರೆೆಗಳು ಭೂಮಿಯ ಪರಿಸರ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಗರ ಮತ್ತು ಸಮುದ್ರಗಳ ಮಾಲಿನ್ಯ, ಅತಿಯಾದ ಆಮ್ಲೀಕರಣದ ಪರಿಣಾಮವಾಗಿ ಸಮುದ್ರ ಮತ್ತು ಕರಾವಳಿ ವನ್ಯಜೀವಿ ಪ್ರಭೇದಗಳ ಭವಿಷ್ಯದ ಬಗ್ಗೆ ಗಂಭೀರ ಕಾಳಜಿಯನ್ನು ಹುಟ್ಟುಹಾಕಲಾಗಿದೆ.

ಇವುಗಳಲ್ಲದೇ ಜನಸಂಖ್ಯೆಯ ಬೆಳವಣಿಗೆ, ನಗರೀಕರಣ, ಬಡತನ, ಆಹಾರ ಅಭದ್ರತೆ, ರೋಗ ರುಜಿನಗಳು, ಜೀವಿಗಳ ಸಂಘರ್ಷ ಮತ್ತು ಸ್ಥಳಾಂತರ, ನೈಸರ್ಗಿಕ ವಿಕೋಪಗಳೂ ಸಹ ಪರಿಸರದ ಬಿಕ್ಕಟ್ಟಿನ ಕಾರಣಗಳಾಗಿವೆ.

ಬಿಕ್ಕಟ್ಟಿಗೆ ಪರಿಹಾರ ಭವಿಷ್ಯಕ್ಕೆ ಸಹಕಾರ: 
ಈಗ ತಲೆದೋರಿರುವ ಬಿಕ್ಕಟ್ಟಿಗೆ ನಮ್ಮಲ್ಲೇ ಪರಿಹಾರ ಇದೆ. ಅದನ್ನು ಸರಿಪಡಿಸಲು ಮಾನವರಾದ ನಾವೇ ಮುಂದೆ ಬರಲೇಬೇಕಿದೆ. ಕೈಗಾರಿಕೆಗಳಿಂದ ಆಗುವ ಹಾನಿಯನ್ನು ತಪ್ಪಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯ. ಅಂದರೆ ಕೈಗಾರಿಕೆಗಳ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪದ್ಧತಿಗಳಲ್ಲಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ನೆಲ, ಜಲ ಮತ್ತು ವಾಯು ಮಾಲಿನ್ಯವನ್ನು ತಪ್ಪಿಸುವುದು, ಪಳೆಯುಳಿಕೆ ಇಂಧನಗಳ ಬದಲಿಗೆ ಪರ್ಯಾಯ ಇಂಧನಗಳಾದ ಸೌರಶಕ್ತಿ, ಪವನಶಕ್ತಿಗಳನ್ನು ಯಥೇಚ್ಛವಾಗಿ ಬಳಸುವುದು. ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ವಾಹನಗಳನ್ನು ಬಳಸುವುದು. ನೈಸರ್ಗಿಕ ಸಂಪನ್ಮೂಲಗಳ ಸಮಯೋಚಿತ ಬಳಕೆ ಸೇರಿದಂತೆ ಪರಿಸರಕ್ಕೆ ಪೂರಕವಾದ ಅಭಿವೃದ್ದಿ ಯೋಜನೆಗಳನ್ನು ಅಳವಡಿಸಿಕೊಳ್ಳುವುದರಿಂದ ಪರಿಸರ ಸಂರಕ್ಷಣೆಗೆ ಮುಂದಾಗಬಹುದು. ಪರಿಸರ ಸಂರಕ್ಷಣೆ ಕೇವಲ ಸರಕಾರದ ಘೋಷಣೆ ಮಾತ್ರವಾಗದೇ ಪ್ರತಿ ಮಾನವರ ಘೋಷಣೆಯಾದಾಗ ಮತ್ತು ಅನುಸರಣೆಯಾದಾಗ ಮಾತ್ರ ಭವಿಷ್ಯದ ಭೂಮಿಯನ್ನು ರಕ್ಷಿಸಲು ಸಾಧ್ಯ

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News