ಮಂಡ್ಯ: ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಯುವಕನಿಗೆ ಸಾರ್ವಜನಿಕರಿಂದ ಥಳಿತ
ಮಂಡ್ಯ, ಜೂ.10: ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಯುವಕನಿಗೆ ಸಾರ್ವಜನಿಕತು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.
ವೈ.ಯರಹಳ್ಳಿ ಗ್ರಾಮದ ಸಂಪತ್ಕುಮಾರ್ ಅದೇ ಗ್ರಾಮದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದು, ಪೋಷಕರ ಬುದ್ದಿಮಾತಿನಿಂದ ಆ ವಿದ್ಯಾರ್ಥಿನಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಸಂಪತ್ ಕುಪಿತಗೊಂಡಿದ್ದ ಎನ್ನಲಾಗಿದೆ.
ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನ ತರಗತಿ ಮುಗಿಸಿಕೊಂಡು ವಿದ್ಯಾರ್ಥಿನಿ ಹೊರಬಂದಿದ್ದಾಳೆ. ಅಲ್ಲಿಯೇ ರಿಪೀಸ್ ಪಟ್ಟಿ ಇಟ್ಟುಕೊಂಡು ಕಾಯುತ್ತಿದ್ದ ಸಂಪತ್ಕುಮಾರ್ ಏಕಾಏಕಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.