ಸರಕಾರದ ಮೂಲಕವೇ ತಿದ್ದೋಲೆ ಕೊಡಿಸಲು ಹೊರಟಿರುವುದು ಸಂವಿಧಾನದ ಅಣಕ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2022-06-28 06:08 GMT

ಬೆಂಗಳೂರು:  ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರವು ತಿದ್ದೋಲೆಯನ್ನು ಹೊರಡಿಸಲು ಅನುಮತಿ ನೀಡಿ ಹೊರಡಿಸಿರುವ ಸರಕಾರೀ ಆದೇಶವು ಸಂವಿಧಾನವನ್ನು ಅಣಕಿಸುವಂತಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ. ಹೇಳಿದ್ದಾರೆ. 

ಈ ಕುರಿತು ಪ್ರಕಟನೆ ನೀಡಿರುವ ಅವರು,  ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರವು ತಿದ್ದೋಲೆಯನ್ನು ಹೊರಡಿಸಲು ಅನುಮತಿ ನೀಡಿ ಹೊರಡಿಸಿರುವ ಸರಕಾರೀ ಆದೇಶವು  ಯಾವುದೇ ಸಹಜ ನ್ಯಾಯದ ತತ್ವಗಳನ್ನು  (Principles of Natural Justice)   ಅನುಸರಿಸದೆ ಸಾಂವಿಧಾನಿಕವಾಗಿ ಮತ್ತು ನಿಯಮಾನುಸಾರ ಒಪ್ಪಿತ ಪಠ್ಯಕ್ರಮ ಚೌಕಟ್ಟಿನಲ್ಲಿ ನಡೆಯದ ಅಪ್ರಬುದ್ಧ, ಅಪಾರದರ್ಶಕ ಹಾಗು ಅಪ್ರಜಾಸತ್ತ್ಮಕ ನಿಯಮ ಬಾಹಿರ ಪ್ರಕ್ರಿಯೆಯನ್ನು ತಿದ್ದೋಲೆ ಹೊರಡಿಸುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಳ್ಳುವ ಜನವಿರೋಧಿ ನಡೆಯಾಗಿದೆ ಎಂದು ತಿಳಿಸಿದ್ದಾರೆ.     

'ಇದು ಮಕ್ಕಳ ಕಲಿಕೆಯನ್ನು ಮತ್ತಷ್ಟು ಗೊಂದಲಗೊಳಿಸುವುದಲ್ಲದೆ , ಕಳೆದ ಹಲವಾರು ದಶಕಗಳಿಂದ  ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಅಣಿಗೊಳಿಸಿದ  ಶಿಕ್ಷಣ ಕ್ಷೇತ್ರವನ್ನು  ಹಾಳುಗೆಡುವ ಮೂಲಕ ದಮನಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳ   ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ. ಶಿಕ್ಷಣ ಹಕ್ಕಲ್ಲ ಅದು ಕೆಲವರ ಸವಲತ್ತು  ( Education is a privilege not a Right) ಎಂದು ವಾದಿಸುತ್ತಾ ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ದಮನಿತರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡುವ ಮೂಲಕ ನಡೆದಿದ್ದ ಅಕ್ಷರ ವಂಚನೆ ಸಂಸ್ಕೃತಿಯನ್ನು ಮುಂದುವರಿಸಲು  ಜನರನ್ನು ದಿಕ್ಕುತಪ್ಪಿಸುವ ಆದೇಶವಾಗಿದೆ. ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವ ಬದಲು , ತಿದ್ದೋಲೆ ಆದೇಶದ ಅನ್ವಯ ಪುಸ್ತಕಗಳಲ್ಲಿರುವ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಈ ಶೈಕ್ಷಣಿಕ ವರ್ಷ ಮುಗಿದು ಹೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ... ಪಠ್ಯಪರಿಷ್ಕರಣೆ ವಿವಾದ: ತಪ್ಪೊಪ್ಪಿಕೊಂಡ ಶಿಕ್ಷಣ ಇಲಾಖೆಯಿಂದ ತಿದ್ದೋಲೆ ಪ್ರಕಟ

'ತಿದ್ದೋಲೆ ಹೊರಡಿಸಲು ಅನುಮತಿಸಿರುವ ಆದೇಶವು , ವಿಷವುಣಿಸಿದ ವ್ಯಕ್ತಿ ಸಾಯುವ ಮುನ್ನ ನೀರು ಕೊಡಲು ಕರುಣಿಸಿದಂತಿದೆ . ಈ ಮೂಲಕ ವಿಷವುಣಿಸಿದ ಘೋರ ಅಪರಾಧವನ್ನು ಮುಚ್ಚಿ ಹಾಕಿ, ಅಪರಾಧವೇ ನಡೆದಿಲ್ಲವೇನೋ ಎಂಬಂತೆ ಬಿಂಬಿಸಲು ಹೊರಟಿರುವುದು , ಇಡೀ ಪ್ರಕ್ರಿಯೆಯ ಹಿಂದಿರುವ ಕುತಂತ್ರ  ಹಾಗೂ ಹುನ್ನಾರಗಳನ್ನು ಬೆತ್ತಲೆಗೊಳಿಸಿದೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಕ್ಕಳಿಗೆ ವಿಷಪ್ರಾಶನ ಮಾಡುವ ಈ ಕೆಲಸದಲ್ಲಿ ಸರಕಾರವನ್ನು ಬಾಹ್ಯವಾಗಿ ನಿಯಂತ್ರಿಸುತ್ತಿರುವ,  ಸಂವಿಧಾನಕ್ಕೂ ಮೀರಿದ ಶಕ್ತಿಗಳು  ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ , ಈಗ ಸರ್ಕಾರದ ಮೂಲಕವೇ ತಿದ್ದೋಲೆ ಕೊಡಿಸಲು ಹೊರಟಿರುವುದು ಸಂವಿಧಾನವನ್ನು ಅಣಕಿಸುವಂತಿದೆ' ಎಂದು ಹೇಳಿದ್ದಾರೆ. 

'ಪರಿಷ್ಕರಣೆಯ ಮೂಲ ಚಿಂತನೆಯೇ ದುರುದ್ದೇಶಪೂರಿತ ಹಾಗು ಅಪ್ರಜಾಸತ್ತಾತ್ಮಕ ಎಂದಾದರೆ , ಅದನ್ನು ಆಧರಿಸಿ ಪರಿಷ್ಕರಿಸಿರುವ ಎಲ್ಲಾ ಪ್ರಕ್ರಿಯೆಗಳು ಅಕ್ರಮವೆಂದಲ್ಲವೇ! ತಿದ್ದೋಲೆ ಮೂಲಕ  ಪದ, ವಾಕ್ಯ, ಪ್ಯಾರಾ, ಪೋಟೋಗಳನ್ನು ಸರಿಪಡಿಸಿದರೆ ಅದು ಸಕ್ರಮವಾಗುವುದೇ! ತೇಪೆ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗಲಾರದು' ಎಂದು ಟೀಕಿಸಿದ್ದಾರೆ.   

ತಿದ್ದೋಲೆ ಆದೇಶವನ್ನು ಹೊರಡಿಸುವುದೆಂದರೆ ಸರ್ಕಾರ ಪಠ್ಯ ಪರಿಷ್ಕರಣೆ ಪ್ರಕ್ರಿಯಲ್ಲಿ ಆಗಿರುವ ಲೋಪಗಳನ್ನು ಅಧಿಕೃತವಾಗಿ ಒಪ್ಪಿದೆ ಎಂದಾಯಿತು. ತಪ್ಪಾಗಿರುವುದನ್ನು ಸರಕಾರ ಒಪ್ಪಿದ ಮೇಲೆ , ತಿದ್ದೋಲೆ ಮೂಲಕ ತಿಪ್ಪೆ ಸಾರಿಸುವ ನ್ಯಾಯವನ್ನು ಕೈಬಿಟ್ಟು ಅಸಂವಿಧಾನಿಕ ಹಾಗು ಅಪ್ರಜಾಸತ್ತಾತ್ಮಕವಾದ ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿ , ಅಲ್ಲಿರುವ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಒಂದು ಸ್ವತಂತ್ರ ತಜ್ಞರ ಸಮಿತಿ ಅಥವಾ ಸದನ ಸಮಿತಿಯನ್ನುಯನ್ನು ರಚಿಸುವುದು ಸೂಕ್ತ ತೀರ್ಮಾನವಾಗುತ್ತದೆ . ಅಲ್ಲಿಯವರೆಗೆ ಸಹಜ ನ್ಯಾಯದ ತತ್ವದಂತೆ ಯಥಾಸ್ಥಿಯನ್ನು,  ಅಂದರೆ 2021-22 ರಲ್ಲಿದ್ದ ಪುಸ್ತಕಗಳನ್ನೇ ಮುಂದುವರಿಸಿ,ತಜ್ಞರ ಸಮಿತಿ/ ಸದನ ಸಮಿತಿಯ ವರದಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವುದು ಸಾಂವಿಧಾನಿಕ  ಹಾಗು ಪ್ರಜಾಸತ್ತಾತ್ಮಕ ತೀರ್ಮಾನವಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ.  
                                                                                                                                                            ಈಗಲಾದರೂ ಸನ್ಮಾನ್ಯ  ಮುಖ್ಯ ಮಂತ್ರಿಗಳು ಅವರಿಗೇ ತಿಳಿಯದ ತೆರೆಮರೆಯ , ಈ ಎಲ್ಲ  ಕುತಂತ್ರಗಳನ್ನು ಅರಿತು, ಸಂವಿಧಾನ ವಿರೋಧಿಗಳ ಕೈಗೊಂಬೆಯಾಗದೆ , ತಮ್ಮ ಸಂವಿಧಾನಬದ್ಧ ಅಧಿಕಾರವನ್ನು ಬಳಸಿ, ಇದಕ್ಕೆಲ್ಲ ಮೂಲ ಕಾರಣರಾದ ಮಾನ್ಯ ಶಿಕ್ಷಣ ಸಚಿವರನ್ನು ವಜಾಗೊಳಿಸಿ , ಆದೇಶರಹಿತ ಕಾನೂನು ಬಾಹಿರ ಪಠ್ಯ ಪರಿಷ್ಕರಣೆಯನ್ನು ಅಮಾನ್ಯಗೊಳಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಪಕ್ಷಾತೀತವಾಗಿ ಶೈಕ್ಷಣಿಕ ವಲಯದ ಲ್ಲಿ ಕಳೆದ ಮೂರುವರೆ ದಶಕಗಳಿಂದ ಶಾಲಾ ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನಾನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.  

'ಇದು ಪ್ರತಿಷ್ಠೆಯ ಪ್ರಶ್ನೆಯಲ್ಲ . ಬದಲಿಗೆ ಮೌಲಿಕ ನ್ಯಾಯದ ಮತ್ತು ಪ್ರಜಾಸತ್ತೆಯನ್ನು ಗೌರವಿಸಿ  ಸಂವಿಧಾನವನ್ನು ಎತ್ತಿಹಿಡಿಯುವ ಪ್ರಶ್ನೆಯಾಗಿದ್ದು, ತೀರ್ಮಾನ ಮುಖ್ಯಮಂತ್ರಿಗಳದ್ದಾಗಿದೆ ಎಂದು  ತಿಳಿಸಿದ್ದಾರೆ. 

ಇದನ್ನೂ ಓದಿ... ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನು ಮುಂದುವರಿಸುವುದೊಂದೇ ಪರಿಹಾರ: ಸಿದ್ದರಾಮಯ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News