ನಾಗರಿಕ ಸಮಾಜ, ವಾಕ್ ಸ್ವಾತಂತ್ರದ ರಕ್ಷಣೆಗಾಗಿ ಹೇಳಿಕೆಗೆ ಭಾರತ, ಇತರ 12 ದೇಶಗಳ ಅಂಕಿತ

Update: 2022-06-28 18:16 GMT

ಎಲ್ಮಾವ್(),ಜೂ.28: ನಾಗರಿಕರ ಸ್ವಾತಂತ್ರ ಮತ್ತು ಸಮಾಜದ ವಿವಿಧತೆಗೆ ಕಾವಲಾಗಿರಲು ಹಾಗೂ ಆನ್ಲೈನ್ ಮತ್ತು ಆಫ್ಲೈನ್ಗಳಲ್ಲಿ ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರವನ್ನು ರಕ್ಷಿಸಲು ಕರೆ ನೀಡಿರುವ ಹೇಳಿಕೆಯೊಂದಕ್ಕೆ ಭಾರತವು ಜಿ7 ದೇಶಗಳು ಮತ್ತು ಇತರ ಐದು ದೇಶಗಳೊಂದಿಗೆ ಅಂಕಿತವನ್ನು ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ‘2022ರ ಸುಸ್ಥಿರ ಪ್ರಜಾಪ್ರಭುತ್ವಗಳ ಹೇಳಿಕೆ’ಗೆ ಸಹಿ ಮಾಡಲಾಗಿದೆ. ಭಾರತವಲ್ಲದೆ ಜರ್ಮನಿ,ಅರ್ಜೆಂಟೀನಾ,ಕೆನಡಾ, ಫ್ರಾನ್ಸ್,ಇಂಡೋನೇಶ್ಯಾ,ಇಟಲಿ,ಜಪಾನ್,ಸೆನೆಗಲ್,ದ.ಆಫ್ರಿಕಾ, ಬ್ರಿಟನ್,ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೇಳಿಕೆಗೆ ಸಹಿ ಹಾಕಿವೆ.

‘ದಬ್ಬಾಳಿಕೆ ಮತ್ತು ಹಿಂಸಾಚಾರದ ವಿರುದ್ಧ ನಿಂತಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಎಲ್ಲ ಧೈರ್ಯಶಾಲಿ ರಕ್ಷಕರನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಜಾಗತಿಕವಾಗಿ ಪ್ರಜಾಸತ್ತಾತ್ಮಕ ಸಮಾಜಗಳ ಸುಸ್ಥಿರತೆಯನ್ನು ಉತ್ತಮಗೊಳಿಸಲು ಅಂತರರಾಷ್ಟ್ರೀಯ ಸಹಕಾರವನ್ನು ನಾವು ಹೆಚ್ಚಿಸುತ್ತೇವೆ ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಮುಕ್ತ ಮತ್ತು ಬಹುತ್ವ’ದ ನಾಗರಿಕ ಸಮಾಜಗಳನ್ನು ಪೋಷಿಸಲು ಹಾಗೂ ‘ಮುಕ್ತ ಮತ್ತು ಬಹುತ್ವ’ದ ಚರ್ಚೆಗಳನ್ನು ರಕ್ಷಿಸಲು ಈ ದೇಶಗಳು ನಿರ್ಣಯಿಸಿವೆ.

ಪತ್ರಕರ್ತ ಮುಹಮ್ಮದ್ ಝುಬೇರ್ ಅವರು 2018,ಮಾರ್ಚ್ನಲ್ಲಿ ಪೋಸ್ಟ್ ಮಾಡಿದ್ದ ಟ್ವೀಟ್ಗಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದಲ್ಲಿ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ ದಿನವೇ ಭಾರತವು ಹೇಳಿಕೆಗೆ ಸಹಿ ಹಾಕಿರುವುದು ಗಮನಾರ್ಹವಾಗಿದೆ.
ಝುಬೇರ್ ಬಂಧನಕ್ಕಾಗಿ ಮೋದಿ ಸರಕಾರವನ್ನು ಟೀಕಿಸಿರುವ ಮಾಧ್ಯಮ ಸಂಘಟನೆಗಳು ಮತ್ತು ಪ್ರತಿಪಕ್ಷಗಳು,ಈ ಕ್ರಮವು ಭಾರತದಲ್ಲಿ ಪತ್ರಿಕಾ ಸ್ವಾತಂತ್ರವನ್ನು ಇನ್ನಷ್ಟು ಕೆಳಮಟ್ಟಕ್ಕೆ ಇಳಿಸಿದೆ ಎಂದಿವೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಪ್ರಕಟಿಸಿರುವ ಈ ವರ್ಷದ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚಿಯಲ್ಲಿ ಭಾರತವು 180 ದೇಶಗಳ ಪಟ್ಟಿಯಲ್ಲಿ 150ನೇ ಸ್ಥಾನಕ್ಕೆ ಕುಸಿದಿದೆ.

2002ರ ಗುಜರಾತ ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಫೋರ್ಜರಿ ಮತ್ತು ನಕಲಿ ಸಾಕ್ಷಗಳ ಆರೋಪದಲ್ಲಿ ಮಾನವ ಹಕ್ಕು ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ರನ್ನು ಬಂಧಿಸಿದ ಎರಡು ದಿನಗಳ ಬಳಿಕ ಝುಬೇರ್ ಅವರ ಬಂಧನವು ನಡೆದಿದೆ. ಸೆಟ್ಲ್ವಾಡ್ ಬಂಧನ ಕುರಿತಂತೆ ವಿಸ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಕರ ಕುರಿತು ವಿಶೇಷ ವರದಿಗಾರ್ತಿ ಮೇರಿ ಲಾಲರ್ ಅವರು, ಪೊಲೀಸ್ ಕ್ರಮವು ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದ್ದರು.

   ವಿಶ್ವಸಂಸ್ಥೆಯ ಸರಕಾರೇತರ ಸಂಘಟನೆ ಫ್ರೀಡಂ ಹೌಸ್ ಕಳೆದ ಮಾರ್ಚ್ನಲ್ಲಿಯೇ ತನ್ನ 2022ರ ವರದಿಯಲ್ಲಿ ಸತತ ಎರಡನೇ ವರ್ಷ ಭಾರತವನ್ನು ‘ಭಾಗಶಃ ಮುಕ್ತ’ದೇಶ ಎಂದು ಬಣ್ಣಿಸಿತ್ತು. ವರದಿಯು ಮೋದಿ ನೇತೃತ್ವದ ಬಿಜೆಪಿ ಸರಕಾರದ ತಾರತಮ್ಯದ ನೀತಿಗಳು ಮತ್ತು ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಕಿರುಕುಳಗಳನ್ನು ಭಾರತದ ‘ಭಾಗಶಃ ಮುಕ್ತ’ ಸ್ಥಾನಮಾನಕ್ಕೆ ಕಾರಣಗಳನ್ನಾಗಿ ಉಲ್ಲೇಖಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News