ಉದಯಪುರ ಹತ್ಯೆ: ಸೌಹಾರ್ದ ಕರ್ನಾಟಕ ಖಂಡನೆ
ಬೆಂಗಳೂರು, ಜೂ. 29: ‘ನೂಪುರ ಶರ್ಮಾ ಅವರು ಪೈಗಂಬರ್ ಅವರ ಬಗ್ಗೆ ಆಡಿದ ಮಾತನ್ನು ಬೆಂಬಲಿಸಿದರು ಎಂಬ ಕಾರಣಕ್ಕೆ ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳಿಬ್ಬರು ಶಿರಚ್ಛೇದ ಮಾಡಿರುವುದು ಖಂಡನೀಯ. ಇದೊಂದು ಆಘಾತಕಾರಿ ಘಟನೆಯಾಗಿದೆ. ಮೂಲಭೂತವಾದವು ಮನುಷ್ಯತ್ವ ವಿರೋಧಿ ಕೃತ್ಯಗಳಿಗೆ ಕಾರಣವಾಗುವುದನ್ನು ಈ ಕೃತ್ಯವೂ ತೋರಿಸುತ್ತದೆ' ಎಂದು ಸೌಹಾರ್ದ ಕರ್ನಾಟಕ-ಬೆಂಗಳೂರು ತಿಳಿಸಿದೆ.
ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ‘ಸೌಹಾರ್ದ ಕರ್ನಾಟಕ'ದ ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ಸಿದ್ಧನಗೌಡ ಪಾಟೀಲ, ಡಾ.ಕೆ.ಶರೀಫಾ, ಮಾವಳ್ಳಿ ಶಂಕರ್, ನಿಸಾರ್ ಅಹ್ಮದ್, ಆರ್.ಮೋಹನರಾಜು, ಬಿ.ಎಂ.ಹನೀಫ್, ಗೌರಮ್ಮ, ಬಿ.ರಾಜಶೇಖರಮೂರ್ತಿ ಹಾಗೂ ಎಸ್.ವೈ.ಗುರುಶಾಂತ್, ‘ಯಾವುದೇ ಧರ್ಮವು ತಾನಾಗಿ ಹಿಂಸೆಯನ್ನು ಬೋಧಿಸುವುದಿಲ್ಲ' ಎಂದು ಹೇಳಿದ್ದಾರೆ.
‘ಮತ-ಧರ್ಮದ ಹೆಸರಿನಲ್ಲಿ ಕೆಲವು ವಿಕೃತರು ಇಂತಹ ಹಿಂಸಾಕೃತ್ಯಗಳನ್ನು ಮಾಡುತ್ತಾರೆ. ನಮ್ಮ ದೇಶಕ್ಕೆ ಅಹಿಂಸೆಯ ದೊಡ್ಡ ಪರಂಪರೆ ಇದೆ. ನಾವು ಎಲ್ಲ ರೀತಿಯ ಹಿಂಸೆಯನ್ನು ವಿರೋಧಿಸುತ್ತೇವೆ. ಎಲ್ಲ ಧರ್ಮಗಳ ಮೂಲಭೂತವಾದವನ್ನು ಪ್ರತಿರೋಧಿಸುತ್ತೇವೆ. ನೂಪುರ ಶರ್ಮ ಅವರ ಪ್ರಚೋದನಾಕಾರಿ ಮಾತನ್ನು ನಾವು ಒಪ್ಪುವುದಿಲ್ಲ. ಹಾಗೆಯೇ ಅವರ ಅಭಿಪ್ರಾಯವನ್ನು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ವಿರೋಧಿಸಬೇಕೆಂದು ಬಯಸುತ್ತೇವೆ' ಎಂದು ಅವರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಯಾವುದೇ ರೀತಿಯ ಹಿಂಸೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿಗಳಿಗೆ ಮತ್ತು ಯಾವುದೇ ಧರ್ಮದ ಮೂಲಭೂತವಾದಿಗಳಿಗೆ ಈ ಶಿಕ್ಷೆಯೇ ಒಂದು ಪಾಠವಾಗಲಿ ಎಂದು ಮೇಲ್ಕಂಡ ಗಣ್ಯರು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ.