ಜಿಎಸ್‍ಟಿ ತೆರಿಗೆ ವಿಧಾನವನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-07-01 16:12 GMT

ಬೆಂಗಳೂರು, ಜು.1: ತೆರಿಗೆ ವಿಧಾನದಲ್ಲಿನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಜಿಎಸ್‍ಟಿ ತೆರಿಗೆ ವಿಧಾನದ ತಂತ್ರಜ್ಞಾನ, ಅನುಸರಣೆ, ಹೊಸ ಉಪಕ್ರಮಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾದಾಗಲೂ ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಎಸ್‍ಟಿ ದಿನಾಚರಣೆ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿನ ಸದೃಢ, ಪರಿಣಿತ ತೆರಿಗೆ ಅಧಿಕಾರಿ ಸಿಬ್ಬಂದಿಗಳಿಂದ ಇಂತಹ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಒಂದು ತೆರಿಗೆ ವಿಧಾನದಿಂದ ಹೊಸ ತೆರಿಗೆ ವಿಧಾನಕ್ಕೆ ಅತ್ಯಂತ ಸರಳವಾಗಿ ಅಳವಡಿಸಿಕೊಂಡಿರುವುದು ಅಭಿನಂದನೀಯ ಎಂದು ಅವರು ತಿಳಿಸಿದರು.

ಜಿಎಸ್‍ಟಿ ಬಗ್ಗೆ ಹತ್ತು ವರ್ಷಗಳ ಕಾಲ ಚರ್ಚೆಯಾಗಿದೆ. ಜಿಎಸ್‍ಟಿ ಬಿಲ್ ಅನ್ನು ಎಲ್ಲ ರಾಜ್ಯಗಳೊಂದಿಗೆ ಚರ್ಚಿಸಿ, ಎಲ್ಲರ ಸಹಮತಿಯನ್ನು ಪಡೆದು ದಿ.ಅರುಣ್ ಜೇಟ್ಲಿ ಕೇಂದ್ರ ಸಚಿವರಿದ್ದಾಗ ಜಾರಿಗೊಳಿಸಿದರು. ಒಂದು ತೆರಿಗೆಯ ವಿಧಾನ, ಇನ್ನೊಂದು ತೆರಿಗೆಯ ವಿಧಾನಕ್ಕೆ ಹೋದಾಗ ಬಹಳಷ್ಟು ಅಕೌಂಟ್ಸ್ ಮತ್ತು ನಿರ್ವಹಣೆಯ ಸಮಸ್ಯೆಗಳಾಗುತ್ತವೆ. ರಾಜ್ಯ ಹಾಗೂ ಕೇಂದ್ರ ವಾಣಿಜ್ಯ ತೆರಿಗೆ, ವ್ಯಾಟ್ ವಿಧಾನವನ್ನು ನೋಡಿದ್ದೇವೆ ಎಂದು ಅವರು ಹೇಳಿದರು.

1997-98ರಲ್ಲಿ ವ್ಯಾಟ್ ತೆರಿಗೆ ಪದ್ಧತಿ ಪ್ರಾರಂಭಿಸಲಾಯಿತು. ಆ ಸಂದರ್ಭದಲ್ಲಿಯೂ ಹಲವು ಪ್ರಶ್ನೆಗಳು ಎದ್ದಿದ್ವು. ಜಿಎಸ್‍ಟಿ ಯಾರಿಗೂ ಹೊರೆಯಾಗದೆ ಉತ್ಪಾದನೆ, ಮಾರಾಟ ಪ್ರಕ್ರಿಯೆಯ ವಿವಿಧ ಹಂತದಲ್ಲಿ ತೆರಿಗೆಯನ್ನು ಹಾಕಲಾಗುತ್ತದೆ. ಟ್ಯಾಕ್ಸ್ ಸ್ಲ್ಯಾಬ್‍ಗಳು ಆದಷ್ಟು ಕಡಿಮೆಯಿರಬೇಕು ಎನ್ನುವ ಉದ್ದೇಶವಿದ್ದರೂ ಕೂಡ ದೇಶಿಯ ಹಾಗೂ ಅಂತರರಾಜ್ಯ ವಹಿವಾಟು ಇದೆ. ಎಲ್ಲ ಉತ್ಪನ್ನಗಳಿಗೂ ತನ್ನದೇ ಆದ ಪ್ರಕ್ರಿಯೆಯ ವಿವಿಧ ಹಂತಗಳಿರುತ್ತವೆ. ಆದುದರಿಂದ, ಜಿಎಸ್‍ಟಿ ವಿಧಾನದಲ್ಲಿ 3 ಸ್ಲ್ಯಾಬ್‍ಗಳು ಹಾಗೂ ವಿಶೇಷ ತೆರಿಗೆ ಸ್ಲ್ಯಾಬ್‍ಗಳನ್ನು ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತೆರಿಗೆಗೆ ನಿರ್ದಿಷ್ಟ ತತ್ವಗಳಿವೆ: ಪ್ರಾರಂಭದಲ್ಲಿ ರಾಜ್ಯದ ತೆರಿಗೆಗಳಿಗೆ ಸಂಬಂಧಿಸಿದಂತೆ ಅವಶ್ಯಕತೆಯಿದ್ದಾಗ ತೆರಿಗೆಗಳಿಗೆ ಹೆಡ್ ರೂಂಗಳನ್ನು ಸೃಜಿಸಲಾಗಿದೆ. ಆದಾಯ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ ತಳಹಂತದಲ್ಲಿನ ಚಟುವಟಿಕೆಗಳಿಂದ ನಮ್ಮ ಆರ್ಥಿಕತೆಯನ್ನು ನಿಗದಿಪಡಿಸುತ್ತದೆ. ಇಂತಹ ಸಮುದಾಯಗಳ ಮೇಲೆ ಹೆಚ್ಚಿನ ಗಮನ ಹರಿಸಿ, ಪ್ರದೇಶ ಹಾಗೂ ಸಮುದಾಯ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದು ಅವರು ತಿಳಿಸಿದರು.

ತೆರಿಗೆಗೆ ನಿರ್ದಿಷ್ಟ ತತ್ವಗಳಿವೆ. ತೆರಿಗೆಯು ಉದ್ದೇಶ, ನಿಭಾಯಿಸುವಿಕೆ, ಉತ್ತರದಾಯಿತ್ವ ಹಾಗೂ ನ್ಯಾಯಸಮ್ಮತವಾಗಿರಬೇಕು. ಇವು ತೆರಿಗೆಯ ನಾಲ್ಕು ಪ್ರಮುಖ ಸ್ತಂಭಗಳು. ಇದನ್ನು ಪಾಲಿಸಿದರೆ ರಾಜಸ್ವ ಸಂಗ್ರಹದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದನ್ನು ನಾವು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಈ ಎಲ್ಲ ತತ್ವಗಳನ್ನು ಪಾಲಿಸಿದ್ದಾರೆ ಎಂಬ ವಿಶ್ವಾಸ ನನಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

ರಾಜಸ್ವ ಸಂಗ್ರಹದಲ್ಲಿ ಕೋವಿಡ್ ನಡುವೆಯೂ ಗುರಿ ಮೀರಿ ಸಾಧನೆ: ತೆರಿಗೆ ಹೆಚ್ಚಿಸದೆ, ರಾಜಸ್ವ ಸಂಗ್ರಹ ಹೆಚ್ಚಲಿದೆ ಎಂಬ ಅರಿವಿದ್ದೇ ರಾಜ್ಯ ಆಯವ್ಯಯದಲ್ಲಿ ತೆರಿಗೆ ವಿಧಿಸಲಿಲ್ಲ. ಕೋವಿಡ್ ಆಗಷ್ಟೇ ಮುಗಿದ ಸಂದರ್ಭದಲ್ಲಿ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ಪರಿಶೀಲನೆ ಮಾಡಿದಾಗ ಆಯವ್ಯಯ ಅಂದಾಜಿನ ಪ್ರಕಾರ 2,000 ಕೋಟಿ ರೂ.ಗಳಷ್ಟು ಮೊತ್ತ ಕಡಿಮೆ ಇತ್ತು. ಅಧಿಕಾರಿಗಳ ಜೊತೆ ಮಾತನಾಡಿದಾಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಆರು ತಿಂಗಳೊಳಗೆ ಗುರಿ ಮೀರಿ 15 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲಾಯಿತು. ಈ ಪೈಕಿ 7 ಸಾವಿರ ಕೋಟಿ ಜಿಎಸ್‍ಟಿ ಇಂದಲೇ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜಸ್ವ ಸಂಗ್ರಹವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು: ನಮ್ಮ ರಾಜ್ಯದ ಬೆಳವಣಿಗೆಗೆ ಆರ್ಥಿಕ ಇಲಾಖೆ ದೊಡ್ಡ ಕೊಡುಗೆ ನೀಡುತ್ತಿದೆ. ರಾಜಸ್ವ ಸಂಗ್ರಹವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಸಾಮಾನ್ಯ ಜನರ ಕಷ್ಟದ ಗಳಿಕೆ ಅದು. ಅದರ ಬಗ್ಗೆ ನಾವು ಸದಾ ಕಾಲ ಎಚ್ಚರಿಕೆಯನ್ನು ವಹಿಸಬೇಕು. ಆರ್ಥಿಕತೆ ಎಂದರೆ ಹಣವಲ್ಲ. ಜನರ ಸಾಮಥ್ರ್ಯವೇ ಆರ್ಥಿಕತೆ. ಜನರ ದುಡಿಮೆ ಆರ್ಥಿಕತೆಯನ್ನು ನಿರ್ಧರಿಸುತ್ತದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಜ್ಯವನ್ನು ಕಟ್ಟಬೇಕಿದೆ ಎಂದು ಅವರು ಹೇಳಿದರು.

ರಾಜ್ಯದ ಪ್ರಗತಿ ಪ್ರತಿ ವರ್ಷ ಎಷ್ಟು ಮೂಲ ಬಂಡವಾಳವನ್ನು ಹೂಡಿಕೆ ಮಾಡುತ್ತೇವೆ ಎನ್ನುವುದರ ಮೇಲಿದೆ. ಕಳೆದ ವರ್ಷ ಒಟ್ಟು ಒಂದು ಲಕ್ಷ ಕೋಟಿ ಸಂಗ್ರಹವಾಗಿದೆ. ನಿಮ್ಮ ಆಸಕ್ತಿ, ಬದ್ಧತೆ, ಶ್ರಮವನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇದು ಪ್ರತಿ ವರ್ಷ ಮುಂದುವರೆಯಲಿದೆ. ಉಳಿದವರಿಗೂ ಇದು ಪ್ರೇರಣೆಯಾಗಲಿ ಎನ್ನುವ ಚಿಂತನೆಯಿಂದ ಈ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಶಿಖಾ, ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News