ಸಕಲೇಶಪುರ | ಕಾಡಾನೆ ದಾಳಿಗೆ ರೈತ ಬಲಿ
ಸಕಲೇಶಪುರ, ಜು.2: ಕಾಡಾನೆ ದಾಳಿಯಿಂದ ಮತ್ತೊಬ್ಬ ಕೃಷಿಕರೊಬ್ಬರು ಮೃತಪಟ್ಟ ಘಟನೆ ಕೆಲಗಳಲೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಕೆಲಗಳಲೆ ಗ್ರಾಮದ ನಿವಾಸಿ ಕೃಷ್ಣೇಗೌಡರು( 70) ಮೃತಪಟ್ಟವರು. ಅವರಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ತಮ್ಮ ತೋಟದಲ್ಲಿ ನಿರತರಾಗಿದ್ದಾಗ ಹಠಾತ್ತಾಗಿ ಕಾಡಾನೆ ದಾಳಿ ಮಾಡಿದೆ. ಹಲ್ಲೆಗೊಳಗಾದ ಕೃಷ್ಣೇಗೌಡರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರತಿಭಟನೆ: ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶಿತ ಸಾರ್ವಜನಿಕರು ಇಂದು ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನಕಾರರನ್ನು ಮನವೊಲಿಸಲೆತ್ನಿಸಿದ ಪೊಲೀಸರು, ಸ್ಥಳಕ್ಕೆ ಡಿಸಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳು ಬಂದ ನಂತರ ಮಾತುಕತೆ ನಡೆಸಿ ಎಂದು ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ಪ್ರತಿಭಟನಾಕಾರರು ರಸ್ತೆ ತಡೆ ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಯಡಿಹಳ್ಳಿ ಮಂಜುನಾಥ್ , ಜಿಪಂ ಮಾಜಿ ಸದಸ್ಯ ಸುಪ್ರದೀಪ್ ಯಜಮಾನ, ಬೆಳಗಾರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.