ತಾಕತ್ತು ಇದ್ದರೆ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಸೆಟೆದು ನಿಲ್ಲಿಲಿ: ಬಿಜೆಪಿ ಸವಾಲು

Update: 2022-07-02 12:36 GMT

ಬೆಂಗಳೂರು, ಜು. 2: ‘ತಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ, ಅದು ಉತ್ತರಕುಮಾರನ ಪೌರುಷ ಅಷ್ಟೇ. ತಾಕತ್ತು ಅನ್ನುವುದಿದ್ದರೆ ಈಗಲೇ ಡಿ.ಕೆ.ಶಿವಕುಮಾರ್ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮಥ್ರ್ಯವೇ?' ಎಂದು ಬಿಜೆಪಿ ಲೇವಡಿ ಮಾಡಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಂದೂ ವಿರೋಧಿ ಧೋರಣೆಯಿಂದಲೇ ಸಿದ್ದರಾಮಯ್ಯ ಅವರಿಗೆ ರಾಜಕೀಯ ಹಿನ್ನಡೆಯಾಗುತ್ತಿದೆ. ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ, ಬಾದಾಮಿಯಲ್ಲೂ ಬನಶಂಕರಿಯ ಶಾಪ, ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು, ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ!' ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು ಸಿದ್ದರಾಮಯ್ಯ? ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿ ಕೊಡದು. ಸಿದ್ದರಾಮಯ್ಯನವರೇ, ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ?' ಎಂದು ಬಿಜೆಪಿ ಟೀಕಿಸಿದೆ.

‘ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಮತ್ತಷ್ಟು ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ನಾಂದಿ ಹಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೆಸರು ಘೋಷಿಸದೆ ಇದ್ದಲ್ಲಿ, ಆರು ಪಕ್ಷ ಬಿಟ್ಟು ಬಂದಿರುವ ಸಿದ್ದರಾಮಯ್ಯ ಅವರಿಗೆ ಏಳನೇ ಬಾರಿ ಪಕ್ಷಾಂತರ ಮಾಡುವುದು ಕಷ್ಟವೇ?' ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು, ಜನಪ್ರಿಯತೆ, ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಸಿದ್ದರಾಮಯ್ಯಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ನಾಚಿಗಗೇಡಿನ ಸಂಗತಿ ಮತ್ತೊಂದಿದೆಯೇ? ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ತಳಹದಿಯಿಲ್ಲದೆ ಮಹಡಿ ಮನೆ ಕಟ್ಟಲು ಸಿದ್ದರಾಮಯ್ಯ ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು. ಸಿದ್ದರಾಮಯ್ಯನವರೇ, ಇದಕ್ಕಾಗಿ ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ! ಸಿದ್ದರಾಮಯ್ಯನವರೇ ನೀವಿಂದು ಬಿಡುಗಡೆ ಮಾಡಿದ ನಿಮ್ಮ ಸರಕಾರದ ಸಾಧನೆಯ ಪುಸ್ತಕದಲ್ಲಿ ಹುಬ್ಲೋ ವಾಚ್ ಮೂಲ, ಗೋವಿಂದರಾಜ್ ಡೈರಿಯ ಜಾಲ, ರೈತರ ಸಾಲದ ಶೂಲ, ಹಿಂದು ಹತ್ಯೆಯ ರಕ್ತ ಇವುಗಳ ಬಗ್ಗೆ ಏನೂ ಬರೆದಿಲ್ಲ, ಏಕೆ ಮೌನ?' ಎಂದು ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರೇ ನಿಮ್ಮ ಸರಕಾರ ಮೂರು ವರ್ಷ ಪೂರೈಸಿದಾಗ ‘ವರ್ಷ ಮೂರು, ಸಾಧನೆ ನೂರಾರು' ಎಂದು ಪುಸ್ತಕ ಬರೆಸಿಕೊಂಡಿದ್ದು ಯಾವ ಸಾಧನೆಗಾಗಿ? ಹಿಂದು ಕಾರ್ಯಕರ್ತರ ಕೊಲೆ ಹಾಗೂ ರೈತರ ಆತ್ಮಹತ್ಯೆ ಬಿಟ್ಟರೆ ನಿಮ್ಮ ಸರಕಾರದ ಸಾಧನೆ ಏನಿತ್ತು? ಸರಣಿ ಸಾವಿಗೆ ಕಾರಣವಾಗಿದ್ದು ನಿಮ್ಮ ಸಾಧನೆಯೇ?' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ಸಿದ್ದರಾಮಯ್ಯ ಅವರೇ ನಿಮ್ಮ ಸರಕಾರದ ಅವಾಂತರದ ಬಗ್ಗೆ ಹೇಳಲು ಹೊರಟರೆ ಅದೊಂದು ಬೃಹತ್ ಗ್ರಂಥವೇ ಆಗಬಹುದು. ಸತ್ಯ ಹೇಳಿದರೆ ಸಂಕಟ ಪಟ್ಟುಕೊಂಡರೆ ಹೇಗೆ?'
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News