ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಚುನಾವಣೆ: ಶಿವಸೇನೆಯ ರಾಜನ್ ಸಾಳ್ವಿ ಎಂವಿಎ ಅಭ್ಯರ್ಥಿ
ಮುಂಬೈ,ಜು.2: ಶಿವಸೇನೆ ಶಾಸಕ ರಾಜನ್ ಸಾಳ್ವಿ ಅವರು ಜು.3ರಂದು ನಡೆಲಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಚುನಾವಣೆಗಾಗಿ ಮಹಾ ವಿಕಾಸ ಅಘಾಡಿ (ಎಂವಿಎ)ಯ ಅಭ್ಯರ್ಥಿಯಾಗಿ ಶನಿವಾರ ತನ್ನ ನಾಮಪತ್ರವನ್ನು ಸಲ್ಲಿಸಿದರು.
ಮೊದಲ ಬಾರಿಗೆ ಶಾಸಕರಾಗಿರುವ ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ಶುಕ್ರವಾರ ಸ್ಪೀಕರ್ ಹುದ್ದೆಗಾಗಿ ತನ್ನ ನಾಮಪತ್ರ ಸಲ್ಲಿಸಿದ್ದರು.
ನಾರ್ವೇಕರ್ ಮುಂಬೈನ ಕೊಲಾಬಾ ವಿಧಾನಸಭಾ ಕ್ಷೇತ್ರವನ್ನು ಮತ್ತು ಸಾಳ್ವಿ ರತ್ನಾಗಿರಿ ಜಿಲ್ಲೆಯ ರಾಜಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಪೀಕರ್ ಚುನಾವಣೆಯು ರವಿವಾರ ನಡೆಯಲಿದ್ದರೆ,ನೂತನ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸೋಮವಾರ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಸ್ಪೀಕರ್ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಶನಿವಾರ ಮಧ್ಯಾಹ್ನ 12 ಗಂಟೆ ಅಂತಿಮ ಗಡುವಾಗಿತ್ತು.
ಕಾಂಗ್ರೆಸ್ನ ನಾನಾ ಪಟೋಲೆ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಲು ಕಳೆದ ವರ್ಷದ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದಾಗಿನಿಂದ ಸ್ಪೀಕರ್ ಹುದ್ದೆಯು ತೆರವಾಗಿಯೇ ಇದೆ.