ಬಿಜೆಪಿ ನಾಯಕನ ಪತ್ನಿಯಿಂದ ಮಾನನಷ್ಟ ಮೊಕದ್ದಮೆ : ಸಂಜಯ್ ರಾವುತ್ ವಿರುದ್ಧ ವಾರಂಟ್ ಹೊರಡಿಸಿದ ನ್ಯಾಯಾಲಯ
Update: 2022-07-04 08:41 GMT
ಮುಂಬೈ: ಬಿಜೆಪಿಯ ಮಾಜಿ ಸಂಸದ ಕಿರಿಟ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರು ಕೋರ್ಟಿಗೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯ ಸೋಮವಾರ ಜಾಮೀನು ಪಡೆಯಬಹುದಾದ ವಾರಂಟ್ ಹೊರಡಿಸಿದೆ.
ಸೆವ್ರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ತಿಂಗಳು ರಾವುತ್ ವಿರುದ್ಧ ಪ್ರಕ್ರಿಯೆ (ಸಮನ್ಸ್) ಜಾರಿಗೊಳಿಸಿ, ಜುಲೈ 4 ರಂದು ತನ್ನ ಮುಂದೆ ಹಾಜರಾಗುವಂತೆ ಹೇಳಿತ್ತು.
ಆದರೆ, ಸೋಮವಾರ ರಾವುತ್ ಅಥವಾ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಮೇಧಾ ಸೋಮಯ್ಯ ಪರ ವಕೀಲ ವಿವೇಕಾನಂದ ಗುಪ್ತಾ ತಿಳಿಸಿದ್ದಾರೆ.
"ಆದ್ದರಿಂದ, ನಾವು ಅವರ ವಿರುದ್ಧ ವಾರಂಟ್ ಹೊರಡಿಸಲು ಅರ್ಜಿ ಸಲ್ಲಿಸಿದ್ದೇವೆ. ಅದನ್ನು ನ್ಯಾಯಾಲಯವು ಅನುಮತಿಸಿದೆ" ಎಂದು ಗುಪ್ತಾ ಹೇಳಿದ್ದಾರೆ.
ನಂತರ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು ಹಾಗೂ ಜುಲೈ 18 ರಂದು ವಿಚಾರಣೆ ನಿಗದಿಪಡಿಸಿತು.