ಶಿವಮೊಗ್ಗ | ಮೃತದೇಹವನ್ನು ಚಟ್ಟದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕೊಂಡೊಯ್ದ ಪೊಲೀಸರು !

Update: 2022-07-07 06:43 GMT

ಶಿವಮೊಗ್ಗ, ಜು.7: ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ಮೃತದೇಹವನ್ನು

ಚಟ್ಟದಿಂದ ಕೆಳಗಿಳಿಸಿ ಆಸ್ಪತ್ರೆಗೆ ತೆಗೆದುಕೊಂಡು ಹೋದ ಘಟನೆ ಬುಧವಾರ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದ ಸಮೀಪದ ಮಾರುತಿ ಕ್ಯಾಂಪ್‌ನಲ್ಲಿ ನಡೆದಿದೆ.

ಮಾರುತಿ ಕ್ಯಾಂಪ್‌ನ ವಿಠ್ಠಲ ಮೃತಪಟ್ಟವರು.

ಘಟನೆ ವಿವರ: ವಿಠ್ಠಲ ಮತ್ತು ಇಬ್ಬರು ಸ್ನೇಹಿತರು ಬುಧವಾರ ಬೆಳಗ್ಗೆ ಲಕ್ಕಿನಕೊಪ್ಪ ಕಾಡಿಗೆ ತೆರಳಿದ್ದು, ಅಲ್ಲಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೆ ಮಲಗಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ವಿಠ್ಠಲರ ಸ್ನೇಹಿತ ಅಲ್ಲಿಂದ ಎದ್ದು ಬಂದಿದ್ದರೆ, ವಿಠ್ಠಲ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆನ್ನಲಾಗಿದೆ. ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠ್ಠಲರ ಮೃತದೇಹ ಪತ್ತೆಯಾಗಿದ್ದು, ಅವರು ಮೃತರ ಮನೆಗೆ ಮಾಹಿತಿ ನೀಡಿದ್ದಾರೆ. ಅತಿಯಾಗಿ ಮದ್ಯಪಾನದಿಂದ ವಿಠ್ಠಲ ಸಾವನ್ನಪ್ಪಿರಬಹುದೆಂದು ಶಂಕಿಸಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರೊಂದಿಗೆ ಸಿದ್ಧತೆ ಮಾಡಿಕೊಂಡಿದ್ದರು. ಮೃತದೇಹವನ್ನು ಚಟ್ಟದ ಮೇಲಿರಿಸಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ಈ ನಡುವೆ ಗ್ರಾಮಸ್ಥರೊಬ್ಬರು ವಿಠ್ಠಲರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಂಗಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಸಂಸ್ಕಾರ ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರುಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News