ಸಚಿವ ಸಂಪುಟ ವಿಸ್ತರಣೆ ಆಗಬೇಕಿತ್ತು: ಎಂ.ಪಿ. ರೇಣುಕಾಚಾರ್ಯ

Update: 2022-07-07 12:55 GMT
ಎಂ.ಪಿ. ರೇಣುಕಾಚಾರ್ಯ

ಬೆಂಗಳೂರು: ‘ಸಂಪುಟ ವಿಸ್ತರಣೆಯ ನಿರೀಕ್ಷೆ ಇತ್ತು, ನಾನು ಸೇರಿದಂತೆ ಹಲವು ಶಾಸಕರು ಈ ಬಗ್ಗೆ ಒತ್ತಡ ಹೇರಿದ್ದೆವು, ಆದರೆ, ವಿಳಂಬವಾಗಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ಸಂಪುಟ ವಿಸ್ತರಣೆ ಮಾಡಿದರೆ ವಿಧಾನಸೌಧದ ಮೂರನೆ ಮಹಡಿಗೆ ಸೀಮಿತವಾಗಿರುತ್ತದೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಗ್ರಾ.ಪಂ.ಸದಸ್ಯ ಆಗಿರುವವನು ಅಧ್ಯಕ್ಷ ಆಗಲು ಬಯಸುತ್ತಾನೆ. ಹಾಗೆಯೇ ಶಾಸಕರು ಸಚಿವರಾಗಲು ಬಯಸುವುದು ಸಹಜ' ಎಂದು ಪ್ರತಿಕ್ರಿಯೆ ನೀಡಿದರು.

‘ಪಕ್ಷದಲ್ಲಿ ಬೇರೆ ಬೇರೆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ಈಗ ಚುನಾವಣೆ ಸಮೀಪಿಸುತ್ತಿದ್ದು, ಶಾಸಕರು ತಮ್ಮ ಕ್ಷೇತ್ರಗಳ ಕಡೆ ಗಮನ ಹೆಚ್ಚು ಕೊಟ್ಟಿದ್ದಾರೆ. ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ನಾವು ಬದ್ಧರಾಗಿರುತ್ತೇವೆ. ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಈ ಹಿಂದೆಯೇ ಆ ಐದು ಸ್ಥಾನಗಳನ್ನು ತುಂಬಿಸಿಕೊಂಡಿದ್ದಿದ್ದರೆ ಸಂಘಟನೆ ಇನ್ನಷ್ಟು ಆಗುತ್ತಿತ್ತು' ಎಂದು ಅವರು ತಿಳಿಸಿದರು.

‘ಹೊಸ ಮುಖಗಳಿಗೆ ಸಂಪುಟದಲ್ಲಿ ಆದ್ಯತೆ ಕೊಡಬೇಕಿತ್ತು. ಹಾಲಿ ಸಚಿವರಿಗೆ ಹೆಚ್ಚುವರಿ ಕೊಡದೇ ಹೊಸಬರನ್ನು ಸಚಿವರಾಗಿ ಮಾಡಬೇಕಿತ್ತು. ಆದರೆ ಈಗ ವಿಳಂಬವಾಗಿದೆ' ಎಂದ ಅವರು, ‘ನಿಗಮ ಮಂಡಳಿ ನೇಮಕ ಸಿಎಂ ಪರಮಾಧಿಕಾರ, ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಹಸ್ತಕ್ಷೇಪ ಇಲ್ಲ' ಎಂದು ಸ್ಪಷ್ಟಣೆ ನೀಡಿದರು.

‘ಯಡಿಯೂರಪ್ಪ ಅವರು ಸರಕಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಬೊಮ್ಮಾಯಿ ನೇತೃತ್ವದ ಸರಕಾರ ಚೆನ್ನಾಗಿ ನಡೀತಿದೆ ಎಂದು ಈಗಾಗಲೇ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News