ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ: ಆರೋಗ್ಯ ಸಚಿವ ಸುಧಾಕರ್

Update: 2022-07-07 13:11 GMT

ಬೆಂಗಳೂರು, ಜು.7: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ ಮಾಡಲಾಗುವುದು ಜತೆಗೆ ಆರೋಗ್ಯ ವಿಮೆ ವಿಸ್ತರಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ವೇತನವನ್ನು ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಆರೋಗ್ಯ ವಿಮೆ ವಿಸ್ತರಿಸಲು ಕೂಡ ಸರಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಸರಕಾರದ ಇತಿಮಿತಿಯೊಳಗೆ ಎಲ್ಲ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಲಾಗುವುದು. ಶ್ರೀನಿವಾಸಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದ ಅವರು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಖಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ನಮಗೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿದೆ. ಹೀಗಾಗಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಅಡಚಣೆಗಳಿವೆ. ಅಷ್ಟೇ ಅಲ್ಲದೆ, ಖಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗಿರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾ ನಿರತ ನೌಕರರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರಕಾರ ಅವರ ಪರವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. 

ಸರಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದಾರೆ. ಕೇವಲ ಮೂಲಭೂತ ಸೌಲಭ್ಯಗಳಿಂದ ಮಾತ್ರ ಜನರಿಗೆ ವಿಶ್ವಾಸ ಬರುವುದಿಲ್ಲ. ಬದಲಾಗಿ ಇಂತಹ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ.
-ಡಾ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News