ಶ್ರೀರಂಗಪಟ್ಟಣ: ಮಕ್ಕಳ ಎದುರೇ ಪತ್ನಿಯ ಕೊಲೆಗೈದ ಪತಿ
Update: 2022-07-07 15:02 GMT
ಶ್ರೀರಂಗಪಟ್ಟಣ, ಜು.7: ತನ್ನ ಪತ್ನಿಯನ್ನು ಇಬ್ಬರು ಪುಟ್ಟ ಮಕ್ಕಳ ಎದುರೇ ಪತಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ರವಿಗೌಡ ಎಂಬಾತ ಪತ್ನಿ ಯೋಗಿತಾ(27) ಅವರನ್ನು ಕೊಲೆ ಮಾಡಿದ್ದಾನೆ. ಕೆ.ಆರ್.ಪೇಟೆ ಮೂಲದ ಯೋಗಿತಾ ಅವರನ್ನು ಗೆಂಡೆಹೊಸಹಳ್ಳಿ ಗ್ರಾಮದ ರವಿಗೌಡ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು, ಒಂದು ಗಂಡು ಮಗು ಇದೆ.
ಬುಧವಾರ ತಡರಾತ್ರಿ ಪತಿ ಪತ್ನಿ ನಡುವೆ ಜಗಳ ಶುರುವಾಗಿ ಮಕ್ಕಳ ಎದುರೇ ಯೋಗಿತಾಗೆ ಮನಬಂದಂತೆ ಥಳಿಸಿ, ಕುತ್ತಿಗೆ ವೈರ್ ಬಿಗಿದು ಕೊಲೆ ಮಾಡಿ ಪರಾರಿಯಾದನೆನ್ನಲಾಗಿದೆ. ಮಕ್ಕಳಿಂದ ವಿಷಯ ತಿಳಿದ ಪಕ್ಕದ ಮನೆಯವರು ಬಂದು ನೋಡಿದಾಗ ಯೋಗಿತಾ ಕೊಲೆಯಾಗಿರುವುದು ತಿಳಿದು ಬಂದಿದೆ.
ಈ ಸಂಬಂಧ ಅರೆಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ರವಿಗೌಡನ ಬಂಧನಕ್ಕೆ ಬಲೆ ಬೀಸಿದ್ದಾರೆ.