ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ನೀಡುವ ವಿಚಾರ: ಶಿಕ್ಷಣ ಸಚಿವರ ಉಡಾಫೆ ಹೇಳಿಕೆಗೆ ವೆಲ್ಫೇರ್ ಪಾರ್ಟಿ ಖಂಡನೆ

Update: 2022-07-07 17:51 GMT

ಬೆಂಗಳೂರು, ಜು.7: ಮಕ್ಕಳು ಶಾಲೆಗೆ ಕಲಿಯಲು ಬರುತ್ತಾರೆ ಶೂ, ಸಾಕ್ಸ್‍ಗೆ ಅಲ್ಲ ಎಂದು ಉಡಾಫೆಯಾಗಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ಖಂಡನೀಯ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇಂತಹ ಹೇಳಿಕೆ ನೀಡಿದ್ದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರು ತಮ್ಮ ದುರ್ಬಲತೆಯನ್ನು ಮುಚ್ಚಿಡಲು ವಿದ್ಯಾರ್ಥಿಗಳ ಕುರಿತು ಹಗುರವಾಗಿ ಮಾತನಾಡದೇ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮುತುವರ್ಜಿ ವಹಿಸಬೇಕು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿಡಲಿಲ್ಲ ಎಂಬ ಕಾರಣವೊಡ್ಡಿ ರಾಜ್ಯ ಸರಕಾರ ಈ ವರ್ಷವೂ ಲಕ್ಷಾಂತರ ಮಕ್ಕಳನ್ನು ಜನಪರ ಯೋಜನೆಗಳಿಂದ ವಂಚಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಹಣದ ಕೊರತೆ ಮುಂದಿಟ್ಟು ರಾಜ್ಯ ಸರಕಾರವು ಶಾಲಾ ಮಕ್ಕಳ ಹಕ್ಕುಗಳನ್ನು ಕಸಿಯಲು ಮುಂದಾಗಿರುವುದು ವಿದ್ಯಾರ್ಥಿ ವಿರೋಧಿ ಮತ್ತು ಪ್ರಜಾಸತ್ತಾತ್ಮಕ ವಿರೋಧಿ ನಡೆಯಾಗಿದೆ. ಈಗಾಗಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆ ಕೈಬಿಡಲಾಗಿದೆ. ಗ್ರಾಮೀಣ ಮತ್ತು ಬಡ ಕುಟುಂಬದ ಸಾವಿರಾರು ವಿದ್ಯಾರ್ಥಿಗಳು ಸೈಕಲ್‍ನಿಂದ ವಂಚಿತರಾಗಿದ್ದಾರೆ ಎಂದು ತಾಹಿರ್ ಹುಸೇನ್ ತಿಳಿಸಿದ್ದಾರೆ.

ಈಗ 50 ಲಕ್ಷ ವಿದ್ಯಾರ್ಥಿಗಳು ಶೂ ಹಾಗೂ ಸಾಕ್ಸ್‍ನಿಂದ ವಂಚಿತರಾಗುತ್ತಾರೆ. ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್ ನೆಪವೊಡ್ಡಿ ವಿತರಣೆ ನಿಲ್ಲಿಸಲಾಗಿತ್ತು. ಆದರೆ ವಾಸ್ತವದಲ್ಲಿ, ಅದಕ್ಕೂ ಹಿಂದಿನ ವರ್ಷ, 2019 ರಿಂದಲೇ ಅನುದಾನ ನಿಲ್ಲಿಸಲಾಯಿತು. ಹಣದ ಕೊರತೆ ನಿಜವಾಗಿದ್ದರೆ, ಶಾಸಕರು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವುದನ್ನು ಸರಕಾರ ತಡೆಯಬೇಕಿತ್ತು ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿ ಸಮುದಾಯದ ಪರ ನಿಲ್ಲಬೇಕಿದ್ದ ಸರಕಾರ ಅನುದಾನ ವಾಪಸ್ ಪಡೆಯುವ ಕೆಲಸಕ್ಕೆ ಕೈಹಾಕಿರುವುದು ದುರದೃಷ್ಟಕರ. ಸರಕಾರವು ಶಿಕ್ಷಣ ಇಲಾಖೆಗೆ ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ನಿರ್ದೇಶನ ನೀಡಬೇಕು, ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪುವಂತೆ ಕ್ರಮ ವಹಿಸಬೇಕು ಎಂದು ತಾಹಿರ್ ಹುಸೇನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News