ಆರೆಸ್ಸೆಸ್ ನವರಿಗೆ ಸತ್ಯ ಹೇಳಿದ್ರೆ ಯಾಕೆ ಕೋಪ?: ಸಿದ್ದರಾಮಯ್ಯ

Update: 2022-07-14 09:07 GMT

ಕಲಬುರಗಿ: ಆರೆಸ್ಸೆಸ್ ನವರಿಗೆ ಸತ್ಯ ಹೇಳಿದ್ರೆ ಯಾಕೆ ಕೋಪ? ಸತ್ಯ ಹೇಳಿದವರ ಮೇಲೆ ಕೇಸ್ ಹಾಕಿಸೋದು ಮಾಡ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ದೇವನೂರ ಮಹಾದೇವ ಅವರು ಆರೆಸ್ಸೆಸ್ ಆಳ ಮತ್ತು ಅಗಲ ಕೃತಿಯನ್ನು ದಾಖಲೆ ಸಮೇತ ಬರೆದಿದ್ದಾರೆ. ಯಾವ ಯಾವ ಕಾಲದಲ್ಲಿ ಹೆಡ್ಗೆವಾರ್, ಗೋಲ್ವಾಲ್ಕರ್, ಸಾವರ್ಕರ್ ಆರೆಸ್ಸೆಸ್ ಸಂಘಟನೆ ಬಗ್ಗೆ ಏನು ಹೇಳಿದ್ದರು ಅದನ್ನೇ ದಾಖಲೆ ಸಹಿತ ಬರೆದಿದ್ದಾರೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ನಿರ್ಬಂಧ ಹೇರಲು ಇವರು ಯಾರು? ದೇಶದ ಮೂಲಭೂತ ಸ್ವರೂಪ ಬದಲಾವಣೆ ಮಾಡಲು ಸಂಸತ್ತಿಗೂ ಅಧಿಕಾರ ಇಲ್ಲ ಎಂದು ತಿಳಿಸಿದರು. 

'ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಮುಂಚಿತವಾಗಿ ಯಾವ ಕ್ರಮ ತೆಗೆದುಕೊಳ್ಳಲ್ಲ. ಜನರಿಗೆ, ರೈತರಿಗೆ ನಷ್ಟವಾದಮೇಲೆ ಅದನ್ನು ನೋಡೋಕೆ ಹೋಗ್ತಾರೆ. ಕಳೆದ ಎರಡು ವಾರದಿಂದ ಮಳೆ ಬೀಳುತ್ತಿದೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಜಿಲ್ಲೆಗಳಿಗೆ ಹೋಗಿಲ್ಲ, ಮುಖ್ಯಮಂತ್ರಿಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೋದಮೇಲೆ ಇವರು ಹೊರಟಿದ್ದಾರೆ. ಪ್ರವಾಹ ಬರಲಿದೆ ಎಂದು ಗೊತ್ತಿದ್ದೂ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಸರ್ಕಾರ ಕೂಡಲೇ ಪ್ರವಾಹದಿಂದ ಹಾನಿಗೊಳಗಾದ ಜನ, ಜಾನುವಾರು ಜೀವ ನಷ್ಟ, ಬೆಳೆ, ಆಸ್ತಿಪಾಸ್ತಿ ಹಾನಿಯನ್ನು ಲೆಕ್ಕಹಾಕಿ ಪರಿಹಾರ ನೀಡಬೇಕು. 2019 ರ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳಿಗೇ ಇನ್ನೂ ಪರಿಹಾರ ಕೊಟ್ಟಿಲ್ಲ. 2020 ರಲ್ಲಿ ಬಂದ ಪ್ರವಾಹದಿಂದ ನಷ್ಟಕ್ಕೀಡಾದವರಿಗೂ ಪರಿಹಾರ ಕೊಟ್ಟಿಲ್ಲ. ಹಿಂದೆ ಪ್ರವಾಹ ಬಂದಾಗ ಊರುಗಳ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು, ಆದರೆ ಸ್ಥಳಾಂತರ ಕಾರ್ಯ ಇನ್ನೂ ಮಾಡಿಲ್ಲ, ಹೀಗಾಗಿ ಮತ್ತೆ ಪ್ರವಾಹ ಬಂದಾಗ ಅಲ್ಲಿನ ಜನ ತೊಂದರೆ ಎದುರಿಸುತ್ತಾರೆ. ಇದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ' ಎಂದರು.

'ನಾನು ಮುಖ್ಯಮಂತ್ರಿ ಆಗಿದ್ದಾಗ ಅಶ್ವತ್ಥ ನಾರಾಯಣ ವಿರೋಧ ಪಕ್ಷದಲ್ಲಿದ್ದರು ಅಲ್ವಾ? ಆಗ ಏನಾದ್ರೂ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂದು ಅವರು ಮಾತನಾಡಿದ್ರಾ? ಈಗ ತಮ್ಮ ಕಾಲದಲ್ಲಿ ಹಗರಣ ಬೆಳಕಿಗೆ ಬಂದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲೂ ಆಗಿತ್ತು ಅಂದರೆ ಹೇಗೆ? ಆಗೇನು ಕಡ್ಲೆಪುರಿ ತಿಂತಿದ್ರಾ? ಮಾಹಿತಿ ಇದ್ದಿದ್ದರೆ ಆಗಲೇ ಸದನದಲ್ಲಿ ಪ್ರಸ್ತಾಪ ಮಾಡಬಹುದಿತ್ತು, ನ್ಯಾಯಾಲಯಕ್ಕೂ ಹೋಗಬಹುದಿತ್ತು' ಎಂದು ಹೇಳಿದರು. 

'ನನ್ನ ಹುಟ್ಟು ಹಬ್ಬದ ಆಚರಣೆಗೆ ದಾವಣಗೆರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂದು ಬಿಜೆಪಿಗೆ ಸೋಲಿನ ಭಯ ಹತ್ತಿಕೊಂಡಿದೆ. ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬಕ್ಕೆ ನನ್ನನ್ನೂ ಕರೆದಿದ್ರೂ, ಹೇಗಿದ್ರೂ ಇದೇನು ಸರ್ಕಾರಿ ಕಾರ್ಯಕ್ರಮ ಅಲ್ಲ, ಒತ್ತಾಯ ಮಾಡ್ತಿದ್ದಾರೆ ಎಂದು ನಾನೂ ಹೋಗಿದ್ದೆ. ಈಗ ನನಗೆ 75 ವರ್ಷ ತುಂಬುತ್ತಿದೆ ಎಂದು ಸ್ನೇಹಿತರು, ಹಿತೈಷಿಗಳು ಸೇರಿ ಆಚರಣೆ ಮಾಡುತ್ತಿದ್ದಾರೆ. ಈಗ್ಯಾಕಪ್ಪ ಭಯ? 
ಸಿದ್ದರಾಮೋತ್ಸವ ಎಂದು ಬರೆದಿದ್ದು ಮಾಧ್ಯಮಗಳು, ನಾವ್ಯಾರು ಅದನ್ನು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಇದು "ಸಿದ್ದರಾಮಯ್ಯ 75ನೇ ಅಮೃತೋತ್ಸವ" ಕಾರ್ಯಕ್ರಮ' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News