ಈಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್​ಮೆಂಟ್: ಬಿ.ಕೆ ಹರಿಪ್ರಸಾದ್ ವಾಗ್ದಾಳಿ

Update: 2022-07-22 12:46 GMT
ಬಿ.ಕೆ ಹರಿಪ್ರಸಾದ್

ಶಿರಸಿ, ಜು.22: ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ನಾಯಕಿ  ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನ ಎದುರಿಸಲು ಸಾಧ್ಯವಾಗದೆ ಭಯ ಶುರು ಆಗಿದೆ. ಆದ್ದರಿಂದ ಈಡಿ(ಜಾರಿ ನಿರ್ದೇಶನಾಲಯ)ಮೂಲಕ ಬೆದರಿಸಲು ಹೊರಟಿದೆ. ಈಡಿ ಅಧಿಕಾರಿಗಳು ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್ ಆಗಿ ಕೆಲಸ ಮಾಡ್ತಿದೆ ಎಂದು ಟೀಕಿಸಿದ್ದಾರೆ. 

ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ಕೊಟ್ಟಿರುವ ಪ್ರಕರಣವನ್ನ ಮತ್ತೆ ತನಿಖೆ ನಡೆಸುತ್ತಿರುವುದು ಬಿಜೆಪಿ ಸರ್ಕಾರದ ನೀಚತನಕ್ಕೆ ಸಾಕ್ಷಿ. ಬಿಜೆಪಿಯ ತರಲೆ ಸಂಸದ ಸುಬ್ರಹ್ಮಣ್ಯ ಸ್ವಾಮಿ ಕೊಟ್ಟ ದೂರಿನ ಮೇಲೆ ತನಿಖೆ ನಡೆಸುವುದಾದರೆ, ಈಗ ಇದೇ ಸಂಸದ ಅಮಿತ್ ಶಾ ಮಗ ಜಯ ಶಾ ಮೇಲೂ ಗಂಭೀರ ಆರೋಪ ಮಾಡಿದ್ದಾರೆ. 50 ಲಕ್ಷ ಇದ್ದ ಜಯ್ ಶಾ ಆದಾಯ ಇಂದು ನೂರಾರು ಕೋಟಿಯಾಗಿದೆ. ಅದರ ಮೂಲದ ಬಗ್ಗೆ ಯಾಕೆ ಇಡಿ ಇಲಾಖೆ ತನಿಖೆ ನಡೆಸುತ್ತಿಲ್ಲ.? ಅಧಿಕಾರಿಗಳಿಗೆ ಧೈರ್ಯ ಇದ್ರೆ ಅಮಿತ್ ಶಾ ಮಗನ ಮೇಲೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.  

ಐಪಿಎಲ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ಉತ್ತರವಿಲ್ಲ. ಸಚಿನ್ ತೆಂಡೂಲ್ಕರ್, ಕ್ರೀಸ್ ಗೇಲ್, ಸುನೀಲ್ ಗವಾಸ್ಕರ್ ಗಿಂತಲೂ ಭಯಾನಕ ಬ್ಯಾಟ್ಸ್‌ಮನ್, ಅವನಿಗಿಂತ ದೊಡ್ಡ ಕ್ರಿಕೆಟರ್ ಜಗತ್ತಿನಲ್ಲೇ ಯಾರೂ ಇಲ್ಲ‌ ಹೀಗಾಗಿ ಆತನಿಗೆ ಬಿಸಿಸಿಐ ಸೆಕ್ರೆಟರಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. 

ಈಶ್ವರಪ್ಪಗೆ ಕ್ಲೀನ್ ಚೀಟ್ : ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚೀಟ್ ಕೊಡ್ತಾರೆ ಅಂತಾ ನಮಗೆ ಮೊದಲೇ ನಿರೀಕ್ಷೆ ಇತ್ತು. ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್ ನಲ್ಲಿ ಈಶ್ವರಪ್ಪನೇ ಕಾರಣ ಎಂದು ಬರೆದುಕೊಂಡಿದ್ರು. ಅವರ ಪತ್ನಿ ಕೂಡ ಮಾಜಿ ಸಚಿವ ಈಶ್ವರಪ್ಪ ಕಾರಣ ಅಂತಲೇ ಹೇಳಿದ್ರು. ಆದ್ರೆ ಸಿಎಂ ಹಾಗೂ ಗೃಹ ಸಚಿವರು ತನಿಖೆ ಮೊದಲೇ ಕ್ಲಿನ್ ಚೀಟ್ ಕೊಟ್ಟಿದ್ರು. ಈಗ ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸದೇ ರಿಪೋರ್ಟ್ ಕೊಟ್ಟಿದ್ದಾರೆ.ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಪರಪ್ಪನ ಅಗ್ರಹಾರವಲ್ಲ, ಕಾಲಾಪಾನಿ ಕುಡಿಸಬೇಕು. ದೇಶದಲ್ಲಿ ಅತ್ಯಂತ ಭ್ರಷ್ಟ ರಾಜಕಾರಣಿ, ಕ್ರಿಮಿನಲ್ ರಾಜಕಾರಣಿ, ಗಲಾಟೆ ದೊಂಬಿ ನಡೆಸುವ ರಾಜಕಾರಣಿ ಇದ್ರೆ ಅದು ಈಶ್ವರಪ್ಪ. ಅಂತವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಅರ್ಹರಲ್ಲ ಎಂದು ಮಾಜಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. 

'ಸಿದ್ರಾಮಯ್ಯ-ಡಿಕೆಶಿ ನಾಟಿಕೋಳಿ ಮುದ್ದೆ ಸಾರು ಜೊತೆಗೆ ತಿನ್ತಾರೆ'

ರಾಜ್ಯದ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಿಎಂ ಮಾಡೋರು ಯಾರು ಅಂತಾ ಡಿಕೆಶಿ ಹಾಗೂ ಸಿದ್ರಾಮಯ್ಯನವರಿಗೆ ತುಂಬಾ ಚೆನಾಗ್ ಗೊತ್ತಿದೆ. ಶಾಸಕರ ಅಭಿಪ್ರಾಯದ ಮೇಲೆ ಹೈಕಮಾಂಡ್ ಹಾಗೂ ಶ್ರೀಮತಿ ಸೋನಿಯಾ ಗಾಂಧಿಯವರೇ ನಿರ್ಧಾರ ಮಾಡ್ತಾರೆ. ಮಾಧ್ಯಮಗಳಲ್ಲಿ ಸೃಷ್ಟಿ ಮಾಡಿರುವ ಹಾಗೆ ಡಿಕೆಶಿ-ಸಿದ್ರಾಮಯ್ಯ ನಡುವೆ ವೈಮನಸ್ಸಿಲ್ಲ. ಅವ್ರು ನಾಟಿ ಕೋಟಿ ಮುದ್ದೆ ಸಾರು ಜೊತೆಯಲ್ಲೇ ತಿನ್ತಾರೆ ಎಂದರು. 

ಡಿಸೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತೆ. ಆ ನಿಟ್ಟಿನಲ್ಲಿ ನಾವು ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. 

ಶವದ ಮೇಲೂ ಜಿಎಸ್ಟಿ ಬರಬಹುದು : ಜನ ಸಾಮಾನ್ಯರು ಬಳಸುವ ದಿನಸಿ ಪದಾರ್ಥಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಶವಾಗಾರ ನಿರ್ಮಾಣ ಸೇರಿದಂತೆ ಇನ್ನಿತರೆ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿದೆ. ಮುಂದಿನ ದಿನಗಳಲ್ಲಿ ಶವದ ಮೇಲೂ ಜಿಎಸ್ಟಿ ತರಬಹುದು, ಯಾವುದೇ ಅನುಮಾನವಿಲ್ಲ. ಮೋದಿ ನೇತೃತ್ವದ ಸರ್ಕಾರದಲ್ಲಿ ಈಗ ಬದುಕಿರುವವರು ಯಾರು ಸಂತೋಷವಾಗಿಲ್ಲ, ಶವ ಮಾತ್ರ ಸಂತೋಷವಾಗಿದೆ. ಶವದ ಮೇಲೂ ಜಿಎಸ್ಟಿ ತರುವ ಕಾಲ ಬರಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಡಿಸಿಸಿ ಅಧ್ಯಕ್ಷ ಭಿಮಣ್ಣ ನಾಯ್ಕ್, ಮುಖಂಡರಾದ ಮಂಜುನಾಥ್ ನಾಯ್ಕ್, ಲೋಹಿತ್ ಸೇರಿದಂತೆ ಮುಖಂಡರು ಭಾಗವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News