ಸಚಿವ ಸಂಪುಟ ಸಭೆಯ ಮೂಲಕ ಡಿಸೆಂಬರ್ ಹೊತ್ತಿಗೆ ಚುನಾವಣೆಗೆ ಹೋಗುವುದಕ್ಕೆ ಬಿಜೆಪಿಯ ಸಿದ್ಧತೆ: ಕುಮಾರಸ್ವಾಮಿ ಟೀಕೆ

Update: 2022-07-22 14:11 GMT

ಬೆಂಗಳೂರು, ಜು.22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ನೋಡಿದರೆ ಆಡಳಿತಾರೂಢ ಪಕ್ಷವು ಚುನಾವಣೆಗೆ ಹೋಗುವ ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ನಗರದಲ್ಲಿರುವ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜನತಾ ಮಿತ್ರ ಸಮಾವೇಶದ ಸಿದ್ಧತೆಗೆ ಸಂಬಂಧಿಸಿ ಬೆಂಗಳೂರು ನಗರ ಜೆಡಿಎಸ್ ಮುಖಂಡರ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ಹೊತ್ತಿಗೆ ಚುನಾವಣೆಗೆ ಹೋಗುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು, ಅದಕ್ಕೆ ಇದು ಪೂರಕ ಸಂಪುಟ ಸಭೆ ಅನಿಸುತ್ತದೆ ಎಂದರು.

ಹಾಸನದಲ್ಲಿ ಲೇಔಟ್ ಬಗ್ಗೆ ಅನುಮಾನ: ಹಾಸನದಲ್ಲಿ ಒಂದು ಬಡಾವಣೆ ನಿರ್ಮಾಣಕ್ಕೆ ಸುಮಾರು ಒಂದೂವರೆ ಸಾವಿರ ಕೋಟಿ ರೂ. ಹಣ ಇಡಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಮುಂದೆ ಇದೇ ಒಂದು ದೊಡ್ಡ ಹಗರಣ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.

ಆ ನಗರದ ಶಾಸಕರು ಚುನಾವಣೆಗೆ ಮೊದಲು ಹಣ ಲೂಟಿ ಮಾಡಲು ಅವಕಾಶ ಕೊಟ್ಟಂತೆಯೇ ಇದೆ. ಇದು ಅಭಿವೃದ್ಧಿ ವಿಚಾರವಾಗಿ ಅಥವಾ ಹಾಸನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಇಲ್ಲ. ಬದಲಾಗಿ ಚುನಾವಣೆ ವಿಚಾರವಾಗಿ ಮಾಡಲಾಗುತ್ತಿದೆ ಅಷ್ಟೇ. ಕೆಲವು ವರ್ಗ, ಸಮಾಜ ಓಲೈಸುವುದು ಆಗುತ್ತಿದೆ. ಸಿದ್ದರಾಮಯ್ಯ ಸರಕಾರದ ಕಾಲದಲ್ಲಿಯೂ ಇದೇ ರೀತಿ ಆಗಿತ್ತು. ಈಗಲೂ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

ಮಕ್ಕಳಿಗೆ ಸೈಕಲ್; ಅದು ನನ್ನ ನಿರ್ಧಾರ: ಮಕ್ಕಳಿಗೆ ಶೂ ಹಾಗೂ ಸಾಕ್ಸ್ ಕೊಡಲು ಸಚಿವ ಸಂಪುಟ ಒಪ್ಪಿಗೆ ಕೊಡಲಾಗಿದೆ. ಆದರೆ ಗುಣಾತ್ಮಕ ಶೂ ಕೊಡ್ತಾರೋ ಇಲ್ಲವೋ ಗೊತ್ತಿಲ್ಲ. ಸೈಕಲ್ ಕಥೆ ಏನಾಯಿತು? ಸೈಕಲ್ ವಿಚಾರ ನಮ್ಮ ಕಾಲದ್ದು. ಆಗ ನಮ್ಮ ಹೆಸರೇ ಬರಲಿಲ್ಲ, ಯಡಿಯೂರಪ್ಪ ಕೊಟ್ಟಿದ್ದು ಅಂತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಬಸ್‍ಗಳ ವ್ಯವಸ್ಥೆ ಕೂಡ ಆಗಿಲ್ಲ, ಇತ್ತ ಸೈಕಲ್ ಕೂಡ ಕೊಡ್ತಾ ಇಲ್ಲ. ಮಕ್ಕಳು ಹೇಗೆ ಶಾಲೆಗೆ ಬರುತ್ತಾರೆ ಎಂದರು.

ಜಾತಿ ಅಸ್ತ್ರ ಬಳಸುವುದು ಸಹಜ: ಎಲ್ಲ ಪಕ್ಷದಲ್ಲೂ ಅವರದ್ದೇ ಆದ ಜಾತಿ ಅಸ್ತ್ರ ಬಳಸುತ್ತಿರುವುದು ಸಹಜ. ಇದಕ್ಕೆ ಮಹತ್ವ ಕೊಡಬೇಕಿಲ್ಲ. ಒಕ್ಕಲಿಗ ಸಮಾಜ ಎಂದೂ ಸಹ ವ್ಯಾಮೋಹಕ್ಕೆ ಒಳಗಾಗದೇ ಪ್ರಾಮಾಣಿಕರಿಗೆ ಬೆಂಬಲಿಸುತ್ತದೆ. ಮೊದಲಿನಿಂದಲೂ ಹೀಗೆ ಮಾಡುತ್ತಾ ಬಂದಿದ್ದಾರೆ. ಈಗಲೂ ನನಗೆ ನಂಬಿಕೆ ಇದೆ. ಜಾತಿ ಅಸ್ತ್ರ ಉಪಯೋಗ ಮಾಡಿದರು ಕೂಡ ಎಲ್ಲರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮಹತ್ವ ಕೊಡಬೇಕಿಲ್ಲ ಎಂದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‍ಗೆ ತಿರುಗೇಟು ನೀಡಿದರು.

ಪ್ರತಿಭಟನೆಯಿಂದ ಅನುಕಂಪ ಗಿಟ್ಟಿಸಲಾಗದು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಈ.ಡಿ ವಿಚಾರಣೆಗೆ ಕರೆದ ವಿಚಾರಕ್ಕೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಭಟನೆಯಿಂದ ಜನರ ಅನುಕಂಪ ಗಿಟ್ಟಿಸಲು ಸಾಧ್ಯವಿಲ್ಲ ಎಂದರು.

‘ಎ ಫೀಸ್ಟ್ ಆಫ್ ವಲ್ಚರ್ಸ್' ಪುಸ್ತಕದ ಕೆಲ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ ಅವರು, ಈ ಪುಸ್ತಕದಲ್ಲಿ ಕೆಲ ಆಘಾತಕಾರಿ ಸಂಗತಿಗಳನ್ನು ಬರೆಯಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ, ಒಂದು ಪ್ರಭಾವೀ ಖಾಸಗಿ ಕಂಪನಿ 15 ಸಾವಿರ ಕೋಟಿ ರೂಪಾಯಿ ಹಣ ದಂಡ ಕಟ್ಟಬೇಕಿತ್ತು. ಆದರೆ, ಅದೇ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಮನ್ನಾ ಮಾಡಲಾಯಿತು. ಅಂಥ ವಿಷಯಗಳ ಬಗ್ಗೆ ಪ್ರತಿಭಟನೆ ಮಾಡಬೇಕು ಎಂದರು.

ಆದರೆ, ಇವರು ಈಗ ಇಲ್ಲಿ ಕಾರು ಸುಟ್ಟು ಹೋರಾಟ ಮಾಡುತ್ತಿದ್ದಾರೆ. ಈ ಪುಸ್ತಕವನ್ನು ಒಮ್ಮೆ ಓದಿದರೆ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ದೇಶದ ಸಂಪತ್ತು ಲೂಟಿ ಮಾಡಿದವರಿಗೆ ರಕ್ಷಣೆ ಮಾಡಿದ್ದರ ಬಗ್ಗೆಯೂ ಈ ಪುಸ್ತಕದಲ್ಲಿ ಆಘಾತಕಾರಿ ಮಾಹಿತಿ ಇದೆ. ಈ ಪುಸ್ತಕದಲ್ಲಿರುವ ವಿಷಯ ಇಟ್ಟುಕೊಂಡು ಸಂಸತ್ತಿನಲ್ಲಿ ಹೋರಾಟ ಮಾಡಬೇಕು ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದರು.

ಹೋರಾಟ ಮಾಡಲು ಬೇಕಾದಷ್ಟು ವಿಚಾರಗಳು ಇವೆ. ಅನೇಕ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ ಇದಾಗಿದೆ. ಈ ಪುಸ್ತಕ ಓದಿ ಸತ್ಯ ತಿಳಿದುಕೊಳ್ಳಿ. ಯಾರ ಯಾರ ಯೋಗ್ಯತೆ ಏನಿದೆ? ಎಷ್ಟು ಸಂಪತ್ತು ಲೂಟಿ ಆಗುತ್ತಿದೆ ಅಂತ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಅವರು ಪರೋಕ್ಷವಾಗಿ ಟಾಂಗ್ ನೀಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ ಮಾತುಗಳನ್ನು ಗಮನಿಸಿದೆ. ನೆಹರು ಕುಟುಂಬದ ತ್ಯಾಗದ ಬಗ್ಗೆ ಅವರು ಹೇಳಿದ್ದಾರೆ. ದೇಶಕ್ಕೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ನಿನ್ನೆಯ ದಿನ ಭಾಷಣದ ವೇಳೆ ಆ ಕುಟುಂಬದ ತ್ಯಾಗ ಏನಿದೆ ಅದನ್ನು ನೋಡಿ ಅವರ ಕುಟುಂಬ ಪರ ಇರಬೇಕು. ಮೂರು, ನಾಲ್ಕು ತಲೆ ಮಾರಿಗೆ ಆಗವಷ್ಟು ಮಾಡಿಕೊಂಡಿದ್ದೇವೆ ಎಂದಿದ್ದಾರೆ. ನೆಹರು ಕುಟುಂಬದ ತ್ಯಾಗಕ್ಕೆ ನನ್ನ ಸಹಮತ ಇದೆ. ಬಿಜೆಪಿ ನಾಯಕರ ಶರವೇಗದ ಪ್ರತಿಕ್ರಿಯೆ ನೋಡಿದ್ದೇನೆ. ಇವರ ಹಣೆಬರಹ ಏನು ಎನ್ನುವುದೂ ಜನರಿಗೆ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಚುನಾವಣೆಗೆ ತಯಾರಿ: ಚುನಾವಣೆಗೆ ತಾವು ಕೂಡ ತಯಾರಿ ಮಾಡುತ್ತಿದ್ದೇವೆ. ಪಂಚರತ್ನ ಯೋಜನೆ ರಥಯಾತ್ರೆ ಸಿದ್ದತೆ ಮಾಡುತ್ತಿದ್ದೇವೆ. ಆ ಕಾರ್ಯಕ್ರಮವೇ ನಮ್ಮ ಜೀವಾಳ. ಈ ಕಾರ್ಯಕ್ರಮದ ಮೂಲಕ ಸ್ವತಂತ್ರ ಸರಕಾರ ರಚನೆಗೆ ಅವಕಾಶ ಕೊಡಿ ಎಂದು ಜನರ ಬಳಿ ಹೋಗುತ್ತೇನೆ. ಪ್ರತಿ ಮನೆಗೂ ತಲುಪಿಸುತ್ತೇನೆ ಎಂದು ಅವರು ಹೇಳಿದರು. 

ಶ್ರೀಗಳು ಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಲು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಗೌಡರ ಮನೆಗೆ ಭೇಟಿ ನೀಡಿದ್ದರು. ಅವರಿಗೆ ಆಶೀರ್ವಾದ ಮಾಡಿದರು. ಇದು ರಾಜಕೀಯ ಭೇಟಿಯಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News