ಮೈಸೂರು: ನಾಲೆಗೆ ಕಾರು ಬಿದ್ದು ಇಬ್ಬರು ವಕೀಲರು ಸ್ಥಳದಲ್ಲೇ ಮೃತ್ಯು
Update: 2022-07-29 18:27 GMT
ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಳಿಯ ಸಾಗರೆ ಬೆಟ್ಟಯ್ಯನ ಕಬಿನಿ ಬಲದಂಡೆ ನಾಲೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ವಕೀಲರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಹುಣಸೂರು ನಗರದ ವಕೀಲರುಗಳಾದ ಅಶೋಕ್, ದಿನೇಶ್ ಮತ್ತು ಶಂಕರ್ ಎಂಬವರು ಶುಕ್ರವಾರ ಚಿಕ್ಕದೇವಮ್ಮ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಕಬಿನಿ ನಾಲೆ ವೀಕ್ಷಿಸಲು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಸಾಗರೆ ಬೆಟ್ಟಯ್ಯನ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಶಂಕರ್ ಮತ್ತು ದಿನೇಶ್ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ವಕೀಲರಾದ ಅಶೋಕ್ ರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.