ನನ್ನ ಶಕ್ತಿ ಏನೆಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತು: ಅಶ್ವತ್ಥ ನಾರಾಯಣಗೆ ಕುಮಾರಸ್ವಾಮಿ ತಿರುಗೇಟು

Update: 2022-08-10 14:35 GMT

ಬೆಂಗಳೂರು, ಆ.10: ಅಶ್ವತ್ಥನಾರಾಯಣ ಹಲ್ಲು ಹಿಡಿದು ಮಾತನಾಡಿದರೆ ಉತ್ತಮ. ಡಿಕೆ ಬ್ರದರುಗಳ ಮುಂದೆ ತೋಳೇರಿಸಿದಂತೆ ನನ್ನ ಹತ್ತಿರ ನಡೆಯಲ್ಲ. ನನ್ನ ಶಕ್ತಿ ಏನೆಂಬುದು ನಿಮಗೆ, ನಿಮ್ಮ ಪಕ್ಷಕ್ಕೆ ಚೆನ್ನಾಗಿ ಗೊತ್ತು. ಈಗಲೂ ಸವಾಲು ಹಾಕುತ್ತಿದ್ದೇನೆ. ಕಲಾಪ ಕರೆದು ನೋಡಿ, ನಿಮ್ಮದೆಲ್ಲ ಬಿಚ್ಚಿಡುತ್ತೇನೆ. ಅನುಮಾನವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಯಾರು? ಎಲ್ಲಿ? ಹೇಗೆ? ಫೈಲ್ಯೂರ್ ಆಗಿದ್ದಾರೆ ಎನ್ನುವುದು ನನಗೂ ಗೊತ್ತು. ಕಳೆದ 3 ವರ್ಷದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಓತಲಾ ಹೊಡೆದವರು ಯಾರು? ಮುಕ್ಕಿಮುಕ್ಕಿ ಲೂಟಿ ಹೊಡೆದವರು ಯಾರು? ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:  ಎಲ್ಲಿದ್ದೀರಿ ಎಂದು ಜನ ಕೇಳಿದಾಗ ಉತ್ತರಿಸಲಿಲ್ಲ: ಕುಮಾರಸ್ವಾಮಿಗೆ ಸಚಿವ ಅಶ್ವತ್ಥ ನಾರಾಯಣ ತಿರುಗೇಟು

ನಾನು ಫೈವ್ ಸ್ಟಾರ್ ಹೊಟೇಲಿನಲ್ಲಿ ಇದ್ದೆ, ಆದನ್ನು ನಾನೇ ಹೇಳಿದ್ದೇನೆ. ಇದೇನು ಹೊಸ ವಿಷಯ ಅಲ್ಲ. ನಿಮ್ಮ ಪಕ್ಷದ ಅಮಿತ್ ಶಾ, ಜೆ.ಪಿ.ನಡ್ಡಾ, ಅರುಣ್ ಸಿಂಗ್ ಎಲ್ಲರೂ ಬೆಂಗಳೂರಿಗೆ ಬಂದಾಗ ಅದೇ ಫೈವ್ ಸ್ಟಾರ್ ಹೊಟೇಲಿನಲ್ಲಿಯೇ ಇದ್ದರಲ್ಲವೆ? ಅವರು ಅಲ್ಲಿದ್ದಾಗ ನಿಮ್ಮ ಕಣ್ಣಿಗೆ ಪೊರೆ  ಬಂದಿತ್ತಾ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೊನ್ನೆಯಷ್ಟು ಬಂದು ಹೋದ ಅಮಿತ್ ಶಾ ಅವರು ಯಾವ ಹೊಟೇಲ್‍ನಲ್ಲಿ ಬಿಡಾರ ಹೂಡಿದ್ದರು? ನಿಮ್ಮ ನಾಯಕರೆಲ್ಲ ಬೆಂಗಳೂರಿಗೆ ಬಂದಾಗ ಕೃಷ್ಣಾ, ಅನುಗ್ರಹ ಅಥವಾ ಕಾವೇರಿ ಹಿಂದೆ ಗುಡಿಸಿಲಿನಲ್ಲಿ ಮಲಗುತ್ತಾರಾ? ಹೇಳಿಯಪ್ಪ ಅಶ್ವತ್ಥನಾರಾಯಣ? ಎಂದು ಅವರು ಪ್ರಶ್ನಿಸಿದ್ದಾರೆ.

ನಕಲಿ ಸರ್ಟಿಫಿಕೇಟ್ ಡೀಲರ್ ಯಾರು? ಬ್ಲ್ಯಾಕ್ ಮೇಲರ್ ಯಾರು? ಬಿಲ್ಡರ್ ಯಾರು? ಎನ್ನುವುದು ನನಗಿಂತ ನಿಮ್ಮ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಬಿಲ್ ಮಾಡಿಕೊಳ್ಳಬೇಕಾದರೆ ಯಾರಿಗೆಲ್ಲ ಬ್ಲಾಕ್ ಮೇಲ್ ಮಾಡಿದಿರಿ? ಅಕ್ರಮಗಳ ಗೂಡಿಗೆ ಯಾರಿಂದ ಬೆಂಕಿ ಹಾಕಿಸಿದಿರಿ? ಎನ್ನುವುದನ್ನೂ ಬಲ್ಲೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿ ನೀವು ನಡೆಸಿರುವ ಕರ್ಮಕಾಂಡವನ್ನು ಬಿಚ್ಚಿಡುತ್ತೇನೆ. ಕಲಾಪ ನಡೆಸಿ ನೋಡಿ. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎನ್ನುವಂತೆ ಮಲ್ಲೇಶ್ವರದಲ್ಲಿ ನಿಮ್ಮ ಸದಾರಮೆ ಶೋಕಿ ಎಂಥದು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.

ನಾನು ಕಲಾಪ ನಡೆಸಿ ಎಂದಷ್ಟೇ ಕೇಳಿದೆ. ನಾನು ನಿಮ್ಮ ಹೆಸರೆತ್ತಲಿಲ್ಲ. ನಿಮಗೆ ಗೊತ್ತಿರಲಿ. ಆದರೆ, ನಿಮಗ್ಯಾಕೆ ಸಿಟ್ಟು ಬಂತೋ ನಾ ಕಾಣೆ. ಪಿಎಸ್‍ಐ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮ, ಬಿಲ್ಲುಗಳ ಭಾಗವತ, ಮಹಾ ಡೀಲುಗಳ ಬಗ್ಗೆ ಚರ್ಚೆ ಮಾಡೋಣ. ನಾನು ತಯಾರಿದ್ದೇನೆ. ಕಲಾಪ ಕರೆಯಿರಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News