ಕಬ್ಬಿನ ಎಫ್.ಆರ್.ಪಿ. ದರ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ

Update: 2022-08-12 14:40 GMT

ಮೈಸೂರು,ಆ.12:   ಕಬ್ಬಿನ ಎಫ್ ಆರ್ ಪಿ ದರ ವಿರೋಧಿಸಿ ಪುನರ್ ಪರಿಶೀಲನೆಗಾಗಿ ಆಗ್ರಹಿಸಿ ಮತ್ತು ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡಿರುವುದನ್ನು  ವಿರೋಧಿಸಿ  ರೈತ ಮುಖಂಡರು ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. 

ನಗರದ ಮೈಸೂರು-ಬೆಂಗಳೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪ್ತರೆ ಬಳಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ  ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್,  ಕಬ್ಬಿಗೆ ಬಳಸುವ ರಸಗೊಬ್ಬರ, ಪೊಟ್ಯಾಶ್   ಚೀಲಕ್ಕೆ ಹೆಚ್ಚುವರಿಯಾಗಿ 900 ರೂ   ಡಿಎಪಿ ಬೆಲೆ 350 ಏರಿಕೆಯಾಗಿದೆ.  ಕಟಾವು ಕೂಲಿ 400 ರೂಪಾಯಿ, ಬೀಜದ ಬೆಲೆ ಎಕರೆಗೆ 500 ಹೆಚ್ಚುವರಿಯಾಗಿ ಎಲ್ಲಾ  ಏರಿಕೆಯಾಗಿದೆ, ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ  ಕೇವಲ 150 ರೂ ಏರಿಕೆ ಮಾಡಿ  ಟನ್ ಗೆ  3050 ನಿಗದಿ ಮಾಡಿದೆ, ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ. ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ  ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ದಿಂದ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲುತ್ತದೆ, ಹೀಗಾಗಿ ವಿದ್ಯುತ್ ಖಾಸಗೀಕರಣ ಕೈಬಿಡಬೇಕು . ಅತಿವೃಷ್ಟಿ ಮಳೆಹನಿ ಬೆಳೆನಷ್ಟ ಪರಿಹಾರವನ್ನ  ಕೂಡಲೇ ರೈತರಿಗೆ ಕೊಡಬೇಕು. ಯೂರಿಯಾ ಡಿಎಪಿ ಗೊಬ್ಬರ ಅಭಾವ ತಪ್ಪಿಸಿ ಸಮರ್ಪಕ ಪೂರೈಕೆಗೆ  ಒತ್ತಾಯಿಸಿ, ಮೊಸರು ಮಜ್ಜಿಗೆ ಅಪ್ಪಳ ಕೃಷಿ ಉಪಕರಣಗಳು ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ, ಗಳ ಮೇಲೆ ವಿಧಿಸಿರುವ ಜಿಎಸ್ ಟಿ ರದ್ದುಗೊಳಿಸಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ 9.90  ಲಕ್ಷ ಕೋಟಿ ಉದ್ದಿಮೆಗಳ ಸಾಲ  ಮನ್ನಾ ಮಾಡಿದೆ ದೇಶದ ರೈತ ಕರೋನಾ ಲಾಕ್ ಡೌನ್ ಸಮಸ್ಯೆ, ಅತಿವೃಷ್ಟಿ ಹಾನಿ  ಸಂಕಷ್ಟ ಅನುಭವಿಸುತ್ತಿದ್ದಾನೆ ಇಂತಹ ಕಷ್ಟ ಕಾಲದಲ್ಲಿ ರೈತರ  ಸಾಲ ಐದೂವರೆ ಲಕ್ಷ ಕೋಟಿ  ಮನ್ನಾ ಮಾಡಲು ಸರ್ಕಾರಕ್ಕೆ  ಯಾಕೆ  ಸಾಧ್ಯವಾಗುತ್ತಿಲ್ಲ, ಬಂಡವಾಳಶಾಹಿಗಳ ಉದ್ದಿಮೆದಾರರ  ಮರ್ಜಿಯಲ್ಲಿ ಸರ್ಕಾರ ಸಾಗುತ್ತಿದೆ ಎಂಬುದು ರುಜುವತ್ತಾಗುತ್ತದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನಿರ್ಲಕ್ಷತನ ಖಂಡಿಸಿ ರಸ್ತೆ ತಡೆ ಚಳುವಳಿ ನಡೆಸಲಾಯಿತು. ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲೂ ನೂರಾರು ಕಡೆ ಚಳುವಳಿ ನಡೆಸಲಾಗಿದೆ.  ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೆಹಲಿ  ಮಾದರಿ ಹೋರಾಟ ನಡೆಸಬೇಕಾಗುತ್ತದೆ  ಎಂದು ರಾ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ  ಬರಡನಪುರ ನಾಗರಾಜ್, ವರ್ಕೋಡ್ ನಾಗೇಶ್, ಕಾಟೂರು ಮಹದೇವಸ್ವಾಮಿ, ಮಹದೇವ್, ಬಸವರಾಜು, ಮಹದೇವಸ್ವಾಮಿ, ಶ್ರೀರಾಮ್ ,ರಾಜು, ಭಾಗ್ಯಮ್ಮ, ಸಾಕಮ್ಮ ಶಿವಣ್ಣ  ಮಾಲಿಂಗನಾಯಕ್,  ಬಸವರಾಜಪ್ಪ, ಮಂಜು ಲಿಂಗಣ್ಣ  ನೂರಾರು ಜನರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News