ಬಿಜೆಪಿ ಸರಕಾರ ಅಕ್ರಮಗಳನ್ನು ಮುಚ್ಚಿಕೊಳ್ಳಲು ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಪ್ರಿಯಾಂಕ್ ಖರ್ಗೆ ಸ್ಪಷ್ಟಣೆ

Update: 2022-08-13 14:53 GMT

ಬೆಂಗಳೂರು, ಆ. 13: ‘ಬಿಜೆಪಿ(BJP) ಸರಕಾರ ಅಕ್ರಮಗಳನ್ನು ಮುಚ್ಚಿಕೊಳ್ಳಲು, ತನ್ನ ಭ್ರಷ್ಟ ರೂಪವನ್ನು ರಕ್ಷಿಸಿಕೊಳ್ಳಲು, ಹಾಗೂ ತಪ್ಪನ್ನು ಸಮರ್ಥಿಸಿಕೊಳ್ಳಲು ನನ್ನ ಹೇಳಿಕೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಕೆಪಿಟಿಸಿಎಲ್ ಅಕ್ರಮವನ್ನು ಈ ಮೂಲಕ ಮುಚ್ಚಿ ಹಾಕಲು ಬಿಜೆಪಿ ಹೊರಟಿದೆ' ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ದೂರಿದ್ದಾರೆ.

ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ದಿನಂಪ್ರತಿ ಬೆಳಕಿಗೆ ಬರುತ್ತಲೇ ಇವೆ. ಇದು ಈ ಸರಕಾರದ ಭ್ರಷ್ಟಾಚಾರದ ವಿರಾಟ್ ರೂಪ ಹಾಗೂ ಲಂಚಕೋರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ವಿಶೇಷವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ(corruption) ರಾಜ್ಯದ ಸಾವಿರಾರು ಯುವಕರ ಕಣ್ಣಲ್ಲಿ ನೀರು ತರಿಸುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಇತ್ತೀಚಿಗೆ ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮಕ್ಕೆ ಯಾವುದೇ ಶಿಕ್ಷೆ ನೀಡಿದರೂ ಕಮ್ಮಿಯೇ. ಸರಕಾರಿ ಕೆಲಸ ಒಂದಿಡೀ ಕುಟುಂಬವನ್ನೇ ಬಡತನದಿಂದ ಮೇಲೆತ್ತುವ, ಸುಭದ್ರ ಭವಿಷ್ಯ ಕಟ್ಟಿಕೊಡುವ ಅವಕಾಶ. ಲಂಚ ಪಡೆದು ಪರೀಕ್ಷೆಯಲ್ಲಿ ಅಕ್ರಮವಾಗಿ ಉತ್ತೀರ್ಣರಾಗುವ ಮೂಲಕ ವ್ಯವಸ್ಥಿತವಾಗಿ ಬಡವರ್ಗದ ಹಾಗೂ ಯೋಗ್ಯ ಯುವ ಜನರ ಕೈಯಿಂದ ಆ ಅವಕಾಶವನ್ನು ಕಿತ್ತುಕೊಳ್ಳುವುದನ್ನು ಈ ಭ್ರಷ್ಟ ಸರಕಾರ ಸಕ್ರಮಗೊಳಿಸಿಬಿಟ್ಟಿದೆ. ಇದನ್ನು ವಿರೋಧಿಸಿ ನಾನು ನಡೆಸಿದ ಈ ಸರಕಾರವನ್ನು ಲಂಚ-ಮಂಚದ ಸರಕಾರವೆಂದು ಕರೆದಿದ್ದೆ' ಎಂದು ಅವರು ಸ್ಪಷ್ಟಣೆ ನೀಡಿದ್ದಾರೆ.

‘ಕೆಲಸಕ್ಕಾಗಿ ಬಂದ ಯುವತಿಯನ್ನು ಈ ಸರಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ, ಅವರ ಬಳಿ ಕ್ಷಮೆಯನ್ನು ಬಿಜೆಪಿಯ ಯಾರೊಬ್ಬರೂ ಕೇಳಲಿಲ್ಲ! ಕೇಂದ್ರ ಮಂತ್ರಿಯೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಬ್ಬರೊಂದಿಗೆ ನಡೆಸಿದ್ದ ವಿಡಿಯೋ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ. ಸದನದಲ್ಲಿ ಕೂತು ಅಶ್ಲೀಲ ವಿಡಿಯೋ ವೀಕ್ಷಿಸಿ ಇಡೀ ರಾಜ್ಯದ ಹೆಣ್ಣು ಕುಲಕ್ಕೆ ಅಪಮಾನ ಮಾಡಿದವರ ಬಳಿ ಕ್ಷಮೆಗೆ ಆಗ್ರಹಿಸಲಿಲ್ಲ, ಬದಲಾಗಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು, ಸೋತವರನ್ನ ಎಂಎಲ್‍ಸಿ ಮಾಡಿ ಡಿಸಿಎಂ ಮಾಡಿದ್ದು ಇದೇ ಬಿಜೆಪಿ ಪಕ್ಷ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಸರಕಾರದ ಮಂತ್ರಿಯೊಬ್ಬರ ‘ಈ ರಾಜ್ಯದ ಯಾವ ಶಾಸಕ ‘ಏಕ ಪತ್ನಿವೃತಸ್ಥ?' ಎಂಬ ಪ್ರಶ್ನೆ ಬಿಜೆಪಿಗೆ ಈ ನಾಡಿನ ಹೆಣ್ಣು ಮಕ್ಕಳ ಅವಮಾನದಂತೆ ಕಂಡುಬರಲಿಲ್ಲ. ಈ ನಾಡಿನ ಹೆಣ್ಣು ಮಕ್ಕಳು ಕೆಲಸಕ್ಕಾಗಿ ಹೋದಾಗ ಅಶ್ಲೀಲವಾಗಿ ವರ್ತಿಸಿ ‘ಮೀ ಟೂ' ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಸಂಸದರು ಸಿಕ್ಕಿ ಬಿದ್ದಾಗ ಬಿಜೆಪಿ ಅವರ ಬಳಿ ಕ್ಷಮೆ ಕೇಳಲಿಲ್ಲ. ಈ ರಾಜ್ಯದ ಸಚಿವ ಸಂಪುಟದ ಸಚಿವರ ‘ಮಂಚದ ವಿಚಾರ'ಕ್ಕೆ ಹೆದರಿ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಾಗ ಬಿಜೆಪಿ ಇವರು ಯಾರ ಬಳಿಯೂ ಕ್ಷಮೆ ಕೇಳಲಿಲ್ಲ. ಈ ಸರಕಾರದ ಅನಿಷ್ಟ ಆಡಳಿತಕ್ಕೆ ಇವರ ಕಾರ್ಯಕರ್ತರೇ ‘ಜನಾಕ್ರೋಶ' ರೂಪಿಸಿ ಇವರ ಜನೋತ್ಸವಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಈಗಷ್ಟೇ ಬಿಜೆಪಿ ಸರಕಾರದ ಮಂತ್ರಿಯೊಬ್ಬರು ‘ಬಿಜೆಪಿ ಸರಕಾರ  ಆಡಳಿತ ಮಾಡುತ್ತಿಲ್ಲ, ಬದಲಿಗೆ ಮ್ಯಾನೇಜ್ಮೆಂಟ್ ನಡೆಸುತ್ತಿದ್ದೇವೆ' ಎಂದಿರುವ ಆಡಿಯೋ ವೈರೆಲ್ ಆಗುತ್ತಿದೆ' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

‘ಈ ಸರಕಾರದಲ್ಲಿ ಆಗಿರುವ ಹಾಗೂ ಈಗಲೂ ಘಟಿಸುತ್ತಿರುವ ಮಂಚ-ಲಂಚದ ಪ್ರಕರಣಗಳಿಗೆ ಕನ್ನಡಿಯಾಗಿ ಮಾತನಾಡುವುದು ವಿಪಕ್ಷವಾಗಿ ನಮ್ಮ ಆದ್ಯ ಕರ್ತವ್ಯ. ಆ ಕೆಲಸವನ್ನು ಇಂದು ನಾವು ಸರಿಯಾಗಿ ನಿರ್ವಹಿಸುತ್ತಿರುವದರಿಂದಲೇ ಬಿಜೆಪಿ ನಾಯಕರು ಇಂದು ವಿಚಲಿತರಾಗಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಹಾಸನ: ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಕೊಲೆಗೈದ ಪತಿ

‘ನನ್ನ ಇಡೀ ಜೀವನ ಅಂಬೇಡ್ಕರ್ ಅವರ ಆದರ್ಶಗಳ ಹಾದಿಯಲ್ಲಿ ಸಾಗಿದ್ದೇನೆ. ನಾಡಿನ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ಬಿಜೆಪಿ, ಹೆಣ್ಣು ಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ?'
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News