ದೇಶ ವಿಭಜನೆ ಭಯಾನಕ ದಿನಗಳ ನೆನಪಿನ ಭಿತ್ತಿಚಿತ್ರ ಮಾಲೆ

Update: 2022-08-13 15:08 GMT

ಉಡುಪಿ : ದೇಶ ವಿಭಜನೆ ಸಂದರ್ಭದ ನೋವು ಕಷ್ಟ ಯಾತನೆಗಳ ಭೀಕರತೆಯನ್ನು ಜನರಿಗೆ ಮನದಟ್ಟು ಮಾಡಿಸಿ, ಮುಂದೆ ಯಾರೂ ಕೂಡಾ ಜಾತಿ ಮತ ಅಥವಾ ಇನ್ನಾವುದೇ ಬೇಡಿಕೆಗಳನ್ನಿಟ್ಟುಕೊಂಡು ದೇಶ ವಿಭಜನೆ ಯಂತಹ ದುಸ್ಸಾಹಸಕ್ಕೆ ಮನ ಮಾಡಬಾರದು. ಇನ್ನು ಮುಂದೆ ಇಂತಹ ಭಯಾನಕ ದೃಶ್ಯಗಳು ನಡೆಯದಂತೆ ಜಾಗೃತೆ ವಹಿಸಿ ಒಗ್ಗಟ್ಟಿನಿಂದ ಜೀವನ ನಡೆಸಬೇಕು ಎಂದು ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಹೇಳಿದ್ದಾರೆ.

ಉಡುಪಿ ಅಂಚೆ ವಿಭಾಗದ ವತಿಯಿಂದ ಆಯೋಜಿಸಲಾದ ಪಾರ್ಟೀಶನ್ ಹಾರರ್ ರಿಮೆಂಬರೆನ್ಸ್ ಡೇ(ದೇಶ ವಿಭಜನೆಯ ಭಯಾನಕ ದಿನದ ನೆನಪು) ಭಿತ್ತಿಚಿತ್ರಗಳ ಸರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಮಾತನಾಡಿ, ಪಠ್ಯ ಪುಸ್ತಕಗಳು ತಿಳಿಸಲಾರದ ಹಲವಾರು ವಿಷಯಗಳನ್ನು ಈ ಐವತ್ತೆರಡು ಭಿತ್ತಿಚಿತ್ರಗಳು ಬಿತ್ತರಿಸುತ್ತಲಿವೆ. ಉಡುಪಿ ಅಂಚೆ ವಿಭಾಗದ ಉಡುಪಿ, ಮಣಿಪಾಲ ಹಾಗು ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಆ.೧೫ರವರೆಗೆ ಇದನ್ನು ವಿಕ್ಷೀಸಬಹುದಾಗಿದೆ ಎಂದು ತಿಳಿಸಿದರು.

ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್, ಉಡುಪಿ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಛಾಯಾ ಪತ್ರಕರ್ತ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.

ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News