ಶಿವಮೊಗ್ಗ | ಚೂರಿ ಇರಿತ ಪ್ರಕರಣ: ಕಾಲಿಗೆ ಗುಂಡಿಕ್ಕಿ ಪ್ರಮುಖ ಆರೋಪಿಯ ಸೆರೆ

Update: 2022-08-16 04:14 GMT

ಶಿವಮೊಗ್ಗ, ಆ.16: ನಗರ(Shivamogga)ದಲ್ಲಿ ಸೋಮವಾರ ಸಂಜೆ ಅಶೋಕ್ ರಸ್ತೆ ನಿವಾಸಿ ಪ್ರೇಮ್ ಸಿಂಗ್ (20) ಎಂಬವರಿಗೆ ಚೂರಿಯಿಂದ ಇರಿದ ಪ್ರಕರಣದ ಪ್ರಮುಖ ಆರೋಪಿಯೆನ್ನಲಾದ ಯುವಕನೋರ್ವನನ್ನು ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ.

ಮಾರ್ನಮಿಬೈಲು ನಿವಾಸಿ ಮುಹಮ್ಮದ್ ಜಬೀವುಲ್ಲಾ(30) ಬಂಧಿತ ಆರೋಪಿ. ಈತನನ್ನು ಇಂದು ನಸುಕಿನ ವೇಳೆ ಪೊಲೀಸರು ಬಂಧಿಸಿದ್ದಾರೆ.

ಎನ್.ಟಿ.ರಸ್ತೆಯ ಫಾಲಕ್ ಪ್ಯಾಲೇಸ್ ಬಳಿ ಆರೋಪಿ ಇರುವ ಮಾಹಿತಿಯರಿತ ಪೊಲೀಸರ ತಂಡ ಮಂಗಳವಾರ ನಸುಕಿನ ವೇಳೆ ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದೆ. ಈ ವೇಳೆ ಜಬೀವುಲ್ಲಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ವಿನೋಬ‌ನಗರ ಠಾಣೆ ಪಿಎಸ್ಸೈ ಮಂಜುನಾಥ ಕುರಿ ಆತನ ಕಾಲಿಗೆ ಗುಂಡಿಕ್ಕಿದ್ದಾರೆ.  ಗಾಯಗೊಂಡ ಆರೋಪಿಯನ್ನು ಮೆಗ್ಗಾನ್ ಆಸ್ಲತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕಾಲು ಸಂಕ ಕುಸಿದು ಬಿದ್ದು ಇಬ್ಬರು ಯುವಕರು ನೀರುಪಾಲು

ಇದರೊಂದಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಆರೋಪಿಗಳಾದ ಜೆಸಿ‌ ನಗರ ವಾಸಿ ನದೀಮ್(25) ಮತ್ತು ಬುದ್ಧ ನಗರ ವಾಸಿ ಅಬ್ದುಲ್ ರೆಹಮಾನ್( 25) ಎಂಬವರನ್ನು ಈಗಾಗಲೇ ಬಂಧಿಸಿದ್ದಾರೆ.

ಅಶೋಕ್ ರಸ್ತೆ ನಿವಾಸಿ ಪ್ರೇಮ್ ಸಿಂಗ್ (20) ಎಂಬವರು ಸೋಮವಾರ ಸಂಜೆ ಅಂಗಡಿ ಕೆಲಸ ಮುಗಿಸಿಕೊಂಡು ಮನೆಯತ್ತ ಹೋಗುತ್ತಿದ್ದಾಗ ದುಷ್ಕರ್ಮಿಗಳು ಚಾಕುವಿನಿಂದ ಇರಿದು‌ ಗಾಯಗೊಳಿಸಿದ್ದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News