ಬಾಗಲಕೋಟೆ: ಅಂಬೇಡ್ಕರ್ ಚಿತ್ರಕ್ಕೆ ಸೆಗಣಿ ಬಳಿದ ಕಿಡಿಗೇಡಿಗಳು
Update: 2022-09-05 04:54 GMT
ಬಾಗಲಕೋಟೆ: ತಾಲೂಕಿನ ಹಂಗರಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ರವಿವಾರ ಕಿಡಿಗೇಡಿಗಳು ಸೆಗಣಿ ಬಳಿದಿರುವ ಘಟನೆ ನಡೆದಿದೆ.
ಇಲ್ಲಿನ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕಟ್ಟಡದ ಗೋಡೆಯ ಮೇಲೆ ಚಿತ್ರಿಸಿದ್ದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸೆಗಣಿ ಬಳಿದಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅಂಬೇಡ್ಕರ್ ಚಿತ್ರಕ್ಕೆ ಸೆಗಣಿ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಕೆರೂರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಂತಿ ಸಭೆ:
ಗ್ರಾಮದಲ್ಲಿ ಇಂದು (ಸೋಮವಾರ) ಗಣೇಶೋತ್ಸವ ಪ್ರಯುಕ್ತ ಕಾರ್ಯಕ್ರಮಗಳು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ